ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕನ್ನಡ ಭಾಷೆಗೆ ತನ್ನದೇ ಆದ ವೈಶಿಷ್ಟತೆ ಇದೆ. ಪ್ರತಿಯೊಬ್ಬ ಕನ್ನಡಿಗ ಕನ್ನಡದ ಕಂಪನ್ನು ಜಗತ್ತಿನೆಲ್ಲೆಡೆ ಪಸರಿಸಬೇಕು ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ತಾಲೂಕಾಡಳಿತದ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡಿದರು.
ಆಗಿನ ಕರ್ನಾಟಕವನ್ನು ಮೈಸೂರು ರಾಜ್ಯ ಅಂತ ಕರೆಯಲಾಗುತ್ತಿತ್ತು. 1956 ರಲ್ಲಿ ಕರ್ನಾಟಕ ರಾಜ್ಯವನ್ನಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತೀ ವರ್ಷ ನ.1 ರ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತ ಬರಲಾಗಿದೆ. ಈ ಬಾರಿ ದೀಪಾವಳಿ ಹಬ್ಬವಿದ್ದರೂ ಆರಣೆಯಲ್ಲಿ ಹಲವು ಜನ ಭಾಗಿಯಾಗಿದ್ದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ ತಾಲೂಕಿನ 34 ವಿದ್ಯಾರ್ಥಿಗಳನ್ನು, ಸಾಹಿತಿಗಳಾದ ಶಿವಪುತ್ರ ಅಜಮನಿ, ಐ.ಬಿ.ಹಿರೇಮಠ, ಎಚ್.ಆರ್.ಬಾಗವಾನ, ಪ್ರಕಾಶ ನರಗುಂದ ಮತ್ತು ಸಾರಿಗೆ ಬಸ್ ನ್ನು ತಮ್ಮ ಸ್ವಂತ ಖರ್ಚಿನಿಂದ ಅಲಂಕೃತಗೊಳಿಸಿದ್ದ ಚಾಲಕ ಹಾಗೂ ನಿರ್ವಾಹಕರನ್ನು ಗೌರವಿಸಲಾಯಿತು.
ಸ್ಥಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಆಕರ್ಷಕವಾಗಿದ್ದ 3 ಶಾಲಾ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಬಲರಾಮ ಕಟ್ಟಿಮನಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ತಾಪಂ ಇಓ ನಿಂಗಪ್ಪ ಮಸಳಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪ್ರಥಮ ಪ್ರಜೆ ಮಹೆಬೂಬ ಗೊಳಸಂಗಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪುರಸಭೆ ಸದಸ್ಯ ಚನ್ನಪ್ಪಣ್ಣ ಕಂಠಿ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಮುದ್ನೂರ, ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರುಗಳಾದ ಮಂಜುನಾಥ ಕೊಪ್ಪ, ಸಂಗಯ್ಯ ಸಾರಂಗಮಠ, ವಿರೇಶ ಗುರುಮಠ, ರಾಜುಗೌಡ ತುಂಬಗಿ, ಪ್ರಶಾಂತ ಕಾಳೆ, ಹುಸೇನ ಮುಲ್ಲಾ ಕಾಳಗಿ, ರುದ್ರು ಮುರಾಳ ಸೇರಿದಂತೆ ಮತ್ತೀತರರು ಇದ್ದರು. ಸಂಗಮೇಶ ಶಿವಣಗಿ ತಂಡದವರು ನಾಡಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಉಪನ್ಯಾಸ ನೀಡಿದರು.
ಕಸಾಪ ಮಾಜಿ ಅಧ್ಯಕ್ಷ ಮಹಾಂತಪ್ಪ ನಾವದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷರ ದಾಸೋಹದ ಅಧಿಕಾರಿ ಎಂ.ಎಂ.ಬೆಳಗಲ್ಲ ಸ್ವಾಗತಿಸಿದರು. ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.

