ಜೇನು ಕೃಷಿ ತರಬೇತಿ, ಮೌಲ್ಯವರ್ಧನೆ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತರು ಕೃಷಿ ಕ್ಷೇತ್ರದಲ್ಲಿ ವಿಷಮುಕ್ತ ಉತ್ಪಾದನೆ ಹಾಗೂ ಸಾವಯವ ಕೃಷಿಯಲ್ಲಿ ತೊಡಗಿದರೆ ಜೇನುಹುಳುಗಳ ಪರಾಗದಿಂದ ಇಳುವರಿಯಲ್ಲಿ ಹೆಚ್ಚಳವಾಗಿ, ರೈತರಿಗೆ ಹೆಚ್ಚುವರಿ ಆದಾಯ ತರುವಲ್ಲಿ ಸಹಕಾರಿಯಾಗಲಿ ಎಂದು ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಡಾ.ಪ್ರಸನ್ನ ಹೇಳಿದರು.
ಧಾರವಾಡದ ಹಿಟ್ನಳ್ಳಿ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗದಿಂದ ರೈತರಿಗೆ ಆಯೋಜಿಸಿದ್ದ ಜೇನು ಕೃಷಿ ತರಬೇತಿ, ಮೌಲ್ಯವರ್ಧನೆ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಮಗ್ರ ಕೃಷಿಯಲ್ಲಿ ಜೀವವೈವಿಧ್ಯತೆ ಸಂರಕ್ಷಿಸುವಲ್ಲಿ ಹಾಗೂ ರೈತರ ಆದಾಯ ಹೆಚ್ಚಿಸುವಲ್ಲಿ ಜೇನು ಕೃಷಿ ಮಹತ್ವದ ಪಾತ್ರ ವಹಿಸುತ್ತದೆ. ಜೇನುಕೃಷಿಯಿಂದ ಜೇನು ಸಂಗ್ರಹ ಮಾತ್ರವಲ್ಲದೆ ರಾಜಶಾಹಿ ರಸ, ಪರಾಗ, ಜೇನುಹುಳುವಿಷ, ಮೇಣ, ಅಂಟು, ಗೂಡು ಪಾಲು ಮಾಡುವಿಕೆ, ಜೇನುಹುಳು ಹಾಗೂ ಪೆಟ್ಟಿಗೆ ಮಾರಾಟದ ಮೂಲಕ ಆರ್ಥಿಕ, ವಾಣಿಜ್ಯಿಕವಾಗಿ ಉದ್ಯಮದಲ್ಲಿ ತೊಡಗಲು ಸಹಕಾರಿ ಆಗಲಿದೆ ಎಂದರು.
ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗದ ಡಿ ಆರ್ ಎಫ್ಒ ಸತೀಶ ಗಲಗಲಿ ಮಾತನಾಡಿ, ನಿಗಮದ ಮೇಲಾಧಿಕಾರಿಗಳ ನಿರ್ದೇಶನದಂತೆ ಆಲಮಟ್ಟಿ ಜಲಾಶಯ ಪರಿಸರದಲ್ಲಿ ಸಸಿಗಳನ್ನು ನೆಟ್ಟು, ಮರಗಳಾಗಿ ರೂಪಿಸಿ ಅರಣ್ಯ ಸೃಷ್ಟಿಸಿದ್ದೇವೆ, ಸಸ್ಯ ಪಾಲನೆ ಘಟಕದಲ್ಲಿ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸಲಾಗುತ್ತದೆ. ಆಲಮಟ್ಟಿ ಉದ್ಯಾನ ವನಗಳಲ್ಲಿ ೩೫೦ಕ್ಕೂ ಹೆಚ್ಚು ಸಸ್ಯಸಂಕುಲ ಸಂರಕ್ಷಿಸಿ, ಜೇನುಹುಳು ಪಾಲನೆ ಮಾಡಲಾಗುತ್ತಿದೆ. ಇದಕ್ಕಾಗಿ ಜೇನುಹುಳು ಸಂರಕ್ಷಕರನ್ನು ನೇಮಿಸಿಕೊಂಡು ಜೇನುಹುಳು ಸಂರಕ್ಷಣೆಯಲ್ಲಿ ತೊಡಗುವ ಮೂಲಕ ಜೇನು ಕೃಷಿಗೆ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಸ್.ಎಂ.ವಸ್ತ್ರದ, ಜಿ.ಎಸ್.ಕಮತರ ಮಾತನಾಡಿದರು.
ಜೇನುಕೃಷಿಯಲ್ಲಿ ಮೌಲ್ಯವರ್ಧನೆ ಕುರಿತು ಗೃಹ ವಿಜ್ಞಾನ ವಿಭಾಗದ ವಿಷಯ ತಜ್ಞೆ ಡಾ.ಶ್ವೇತಾ ಮಣ್ಣಿಕೇರಿ ಮಾರ್ಗದರ್ಶನ ನೀಡಿದರು. ಆಲಮಟ್ಟಿ ಕೆಬಿಜೆಎನ್ಎಲ್ ಅರಣ್ಯ ವಿಭಾಗದ ಬೀಟ್ ಫಾರೆಸ್ಟರ್ ಪ್ರವೀಣ ಹಚ್ಚಾಳ, ಶಿವರಾಜ ಕಾಂಬಳೆ, ನಾಗಪ್ಪ, ವೇದಿಕೆ ಮೇಲಿದ್ದರು.
ಶಿಬಿರಾರ್ಥಿಗಳಾದ ಪ್ರಭಾಕರ ಹಿರೇಮಠ, ಮಲ್ಲಿಕಾರ್ಜುನ ಕೆಂಗನಾಳ ಸೇರಿದಂತೆ ಇತರರು ಶಿಬಿರದ ಅನುಭವ ಹಂಚಿಕೊಂಡರು.
ಡಾ.ವಿಜಯಲಕ್ಷ್ಮಿ ಮುಂದಿನಮನಿ ಸ್ವಾಗತಿಸಿ, ನಿರೂಪಿಸಿದರು.
ಹಿರೇಮಠಗೆ ಸನ್ಮಾನ
ಕಾರ್ಯಕ್ರಮದಲ್ಲಿ ಆಲಮಟ್ಟಿಯಲ್ಲಿ ಜೇನು ಕೃಷಿ ಪ್ರಾತ್ಯಕ್ಷಿಕೆ ನೀಡಿದ ಕೆಬಿಜೆಎನ್ಎಲ್ ಅರಣ್ಯ ವಿಭಾಗದ ಜೇನುಕೃಷಿ ತಜ್ಞ ಶಿವಯೋಗಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

