ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಹಾಗೂ ಇತರ ಆರೋಗ್ಯ ಸೇವೆ ಸುಧಾರಿಸಲು ಹೆಚ್ಚುವರಿ ಆರೋಗ್ಯ ಕಿಟ್ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ವಿತರಣೆ ಮಾಡಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆರೋಗ್ಯ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಯಾದ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಗ್ರಾಪಂ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮ ಆರೋಗ್ಯ ಕಾರ್ಯಕ್ರಮದಡಿ ಹೆಚ್ಚಿನ ಸಂಖ್ಯೆಯ ನರೇಗಾ ಕೂಲಿ ಕಾರ್ಮಿಕರನ್ನು ಹೊಂದಿರುವ ಕೆಲವು ಗ್ರಾಪಂ ಗಳ ಅಗತ್ಯವನ್ನು ಪರಿಗಣಿಸಿ ಆದ್ಯತೆಯ ಆಧಾರದ ಮೇಲೆ ಕೆಎಚ್ಪಿಟಿ ಸಂಸ್ಥೆಯಿಂದ ಹೆಚ್ಚುವರಿ ಆರೋಗ್ಯ ನಿರ್ವಹಣಾ ಕಿಟ್ಗಳನ್ನು ಆಲಮೇಲ ತಾಲೂಕಿನ ಕೋರಹಳ್ಳಿ, ಚಡಚಣ ತಾಲೂಕಿನ ಬರಡೋಲ, ಧೂಳಖೇಡ, ಇಂಚಗೇರಿ, ಜಿಗಜೇವಣಗಿ, ನಂದರಗಿ, ದೇವರ ಹಿಪ್ಪರಗಿ ತಾಲೂಕಿನ ಹರನಾಳ, ಹೊನ್ನಳ್ಳಿ, ಜಾಲವಾದ, ಇಂಡಿ ತಾಲೂಕಿನ ಆಲೂರು, ಅಂಜುಟಗಿ, ಬಬಲಾದ, ಹಡಲಸಂಗ, ಹಂಜಗಿ, ನಿಂಬಾಳ ಕೆ ಡಿ, ರೂಗಿ, ತೆನಿಹಳ್ಳಿ, ಸಿಂದಗಿ ತಾಲೂಕಿನ ಬಳಗಾನೂರು, ಗೋಲಗೇರಿ, ಸುಂಗಠಾಣ, ಯರಗಲ್ ಬಿ.ಕೆ ಸೇರಿದಂತೆ ೨೧ ಗ್ರಾಮ ಪಂಚಾಯಿತಿಗಳಿಗೆ ಕಿಟ್ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ಗ್ರಾಮ ಆರೋಗ್ಯ ಕಾರ್ಯಕ್ರಮ ಮುಖ್ಯ ಉದ್ದೇಶ ಸಾಂಕ್ರಾಮಿಕವಲ್ಲದ ರೋಗಗಳು, ಕ್ಷಯ ರೋಗ, ಮಾನಸಿಕ ಆರೋಗ್ಯ, ಅಪೌಷ್ಟಿಕತೆ, ಅನಿಮಿಯಾ, ಬಾಲ್ಯ ವಿವಾಹ ತಡೆಗಟ್ಟುವಿಕೆ ಸೇರಿದಂತೆ ಸಮುದಾಯಗಳ ಆರೋಗ್ಯ ಅಗತ್ಯತೆಗಳನ್ನು ವಿವಿಧ ಇಲಾಖೆಗಳ ಸಮನ್ವಯತೆ ಮತ್ತು ಒಗ್ಗೂಡಿಸುವಿಕೆಯ ಮೂಲಕ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರೋಗಗಳ ಶೀಘ್ರ ಪತ್ತೆ ಮತ್ತು ಶಿಫಾರಸ್ಸುಗಳಿಗಾಗಿ ಬೇರೆ ಬೇರೆ ಸ್ಕ್ರೀನಿಂಗ್ ಪರಿಕರಗಳನ್ನು ಒಳಗೊಂಡ ಆರೋಗ್ಯ ನಿರ್ವಹಣಾ ಕಿಟ್ (ಹೆಲ್ತ್ ಮ್ಯಾನೆಜ್ಮೆಂಟ್ ಕಿಟ್) ಪ್ರತಿ ಗ್ರಾಮ ಪಂಚಾಯಿತಿಗೊಂದರಂತೆ ಒದಗಿಸಲಾಗಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಬಳಸಿಕೊಂಡು ಸಮುದಾಯದ ವಿವಿಧ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕೆಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಡಾ.ವಿಜಯಕುಮಾರ ಅಜೂರ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ, ಆರೋಗ್ಯ ಇಲಾಖೆಯ ಆರ್ಸಿಎಚ್ಒ ಅಧಿಕಾರಿ ಡಾ. ಕೆ.ಡಿ.ಗುಂಡಬಾವಡಿ ಹಾಗೂ ಕೆಎಚ್ಪಿಟಿ ಸಂಸ್ಥೆಯ ವಲಯ ಸಂಯೋಜಕ ಡಾ.ಭಾರತಿ, ಜಿಲ್ಲೆಯ ತಾಂತ್ರಿಕ ಸಂಯೋಜಕ ಸಂಗಮೇಶ ಅಲದಿ, ಜಿಪಂ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

