ಹುಲಜಂತಿಯಲ್ಲಿ ಮಾಳಿಂಗರಾಯನಿಗೆ ಮುಂಡಾಸ ಕಾರ್ಯಕ್ರಮ | ೩೦ಕ್ಕೂ ಹೆಚ್ಚು ದೇವರುಗಳ ಪಲ್ಲಕ್ಕಿಗಳ ಆಗಮನ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ಚಡಚಣ: ಸಮೀಪದ ಕರ್ನಾಟಕದ ಗಡಿಗೆ ಅಂಟಿಕೊಂಡಿರುವ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಮಾಳಿಂಗರಾಯನ ಮುಂಡಾಸವು ಇದೇ ಗುರುವಾರ ರಾತ್ರಿ ನೆರವೇರಲಿದ್ದು ಹಾಗೂ ಮಾಳಿಂಗರಾಯನ ಭೇಟಿ ಕಾರ್ಯಕ್ರಮವು ಶುಕ್ರವಾರದಂದು ನೆರವೇರಲಿರುವ ಹಿನ್ನಲೆಯಲ್ಲಿ ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಗುರುವಾರದಂದು ನೆರವೇರುವ ಈ ಮುಂಡಾಸವನ್ನು ನೋಡಲು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಸಾಗರ ರಾತ್ರಿ ವೇಳೆಯಲ್ಲಿಯೇ ಆಗಮಿಸುತ್ತಿದೆ. ಈ ಮುಂಡಾಸ್ ಯಾವ ದಿಕ್ಕಿನೆಡೆಗೆ ವಾಲಿರುತ್ತದೆ ಎಂಬುದರ ಮೇಲೆ ಮುಂಬರುವ ರಾಜಕೀಯ, ಸಾಮಾಜಿಕ ಹಾಗೂ ಮಳೆ-ಬೆಳೆಯನ್ನು ವಿಶ್ಲೇಷಿಸುವುದು ಇಲ್ಲಿನ ವಿಶೇಷ.
ಭಂಡಾರದಲ್ಲಿ ಮಿಂದೇಳುವ ಭಕ್ತ ಸಮೂಹ: ಶುಕ್ರವಾರದಂದು ಸಾಯಂಕಾಲ ೩ ಗಂಟೆಗೆ ಮಾಳಿಂಗರಾಯನ ಭೇಟಿ ಕಾರ್ಯಕ್ರಮದಲ್ಲಿ ಶಿರಾಡೋಣದ ಬೀರಲಿಂಗೇಶ್ವರ, ಏಣಕಿ ಜಕರಾಯ, ಹುನ್ನೂರು ಬೀರಲಿಂಗೇಶ್ವರ ದೇವರುಗಳ ಪಲ್ಲಕ್ಕಿಗಳು ಸೇರಿದಂತೆ ೩೦ಕ್ಕೂ ಹೆಚ್ಚು ದೇವರುಗಳ ಪಲ್ಲಕ್ಕಿಗಳು ಸೇರಿದಂತೆ ಕಂಟಲು ಎತ್ತುಗಳು ದೇವಾಲಯದ ಎದುರಿನ ಹಳ್ಳದ ಮೈದಾನದಲ್ಲಿ ಭಾಗಿಯಾಗುತ್ತವೆ. ಮಾಳಿಂಗರಾಯನ ಭೇಟಿಯ ವೇಳೆಯಲ್ಲಿ ಭಕ್ತರು ಭಂಡಾರ, ಖಾರಿಕ್, ಬದಾಮಿ ಹಾಗೂ ಉಣ್ಣೇ ಉತ್ತತ್ತಿಯನ್ನು ಹಾರಿಸುವ ಮೂಲಕ ಭಕ್ತರು ತಮ್ಮ ಹರಕೆಗಳನ್ನು ತೀರಿಸುವುದು ವಾಡಿಕೆ. ಈ ವೇಳೆಯಲ್ಲಿ ಭಕ್ತರು ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹವು ಹಳದಿಮಯವಾಗಿರುತ್ತದೆ.
ಸಾರಿಗೆ ವ್ಯವಸ್ಥೆ
ಹುಲಜಂತಿ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ವಿಶೇಷ ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಜಯಪುರ, ಇಂಡಿ, ಸಿಂದಗಿ ಸೇರಿದಂತೆ ವಿವಿಧ ವಿಭಾಗಗಳಿಂದ ವಿಶೇಷ ಬಸ್ ಬಿಡಲಾಗಿದೆ. ಭಕ್ತರು ಇದರ ಉಪಯೋಗ ಪಡೆದುಕೊಳ್ಳಬೇಕಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಭಕ್ತರ ಪಾದಯಾತ್ರೆ
ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಶಿರಾಡೋಣದ ಬೀರಲಿಂಗೇಶ್ವರ ಹಾಗೂ ಹುಲಜಂತಿಯ ಶಿವನ ಮುಂಡಾಸವನ್ನು ನೋಡಲು ಪಾದಯಾತ್ರೆಯ ಮೂಲಕ ಆಗಮಿಸುತ್ತಾರೆ. ಅಲ್ಲದೇ ತಮ್ಮ ಹರಕೆಗಳನ್ನು ತೀರಿಸುತ್ತಾರೆ.

