ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ವಿವಿಧ ಬಡಾವಣೆ, ಕಾಲೊನಿಗಳಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್ ಮಾಡಿದ್ದರಿಂದ ಸಾರ್ವಜನಿಕರ ಆರೋಗ್ಯ ವೃದ್ಧಿಗೆ ಸಹಕಾರಿ ಆಗಿದೆ ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರಾಭಿವೃದ್ದಿ ಪ್ರಾಧಿಕಾರದಿಂದ ಸನ್ 2023ನೇ ಸಾಲಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಹಿಂದೇಯೇ ಮಂಜೂರಿಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ನಗರದ ವಿವಿಧೆಡೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರು, ವೃದ್ಧರ ವಾಯು ವಿಹಾರಕ್ಕೆ ತುಂಬಾ ಅನುಕೂಲವಾಗಿದೆ ಎಂದರು.
ಈ ಹಿಂದೆ ಗಾರ್ಡನ್ ಗಳಲ್ಲಿ ಬೇರೆ ಏನನ್ನು ನಿರ್ಮಾಣ ಮಾಡಲು ಬರುತ್ತಿರಲಿಲ್ಲ. ಅದಕ್ಕೆ ತಿದ್ದುಪಡಿ ಮಾಡಿಸಿ ಉದ್ಯಾನದ ಶೇ 10 ರಷ್ಟು ಜಾಗ ಬಳಸಿಕೊಂಡು, ಯೋಗಾ ಪ್ಲಾಟ್ ಫಾರ್ಮ್, ಸಾಂಸ್ಕೃತಿಕ ಭವನ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಶಾಸಕರ ನಿಧಿಯಲ್ಲಿ ಅನುದಾನ ಮಂಜೂರಿಸಿ ಹಂತ ಹಂತವಾಗಿ ನಗರದ ಎಲ್ಲ ಉದ್ಯಾನಗಳಲ್ಲಿಯೂ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ದೇಸಾಯಿ ಕಾಲೊನಿಯ ಸಾಸನೂರ ಆಸ್ಪತ್ರೆ ಹಿಂದುಗಡೆ ಉದ್ಯಾನವನದಲ್ಲಿ, ರೂ.67.29 ಲಕ್ಷ ಅನುದಾನದಲ್ಲಿ ವಾನಂ.26ರ ದೇಸಾಯಿ ಲೇಔಟ್ ಸಾಸನೂರ ಆಸ್ಪತ್ರೆ ಹಿಂದುಗಡೆ ಉದ್ಯಾನವನದ ಅಭಿವೃದ್ಧಿ, ವಿದ್ಯಾನಗರದ ಆಯುರ್ವೇದಿಕ ಮಹಾವಿದ್ಯಾಲಯದ ಹಾಸ್ಟೇಲ್ ಹತ್ತಿರದ ಉದ್ಯಾನವನದ ಅಭಿವೃದ್ಧಿ, ಬಡಿಮಾನ್ ಹತ್ತಿರ, ಪರ್ಲ ಹೋಟೆಲ್ ಹತ್ತಿರ, ಬಂಜಾರ್ ಕ್ರಾಸ್ ಹತ್ತಿರದಲ್ಲಿ ಬಸ್ ಸೆಲ್ಟರ್ಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ನಂತರ ವಾ.ನಂ.1ರ ನೆಹರು ನಗರದ ಸಾಯಿಬಾಬಾ ಗುಡಿ ಹತ್ತಿರ, ನಗರಾಭಿವೃದ್ದಿ ರೂ.22.40 ಲಕ್ಷ ಅನುದಾನದಲ್ಲಿ ನೆಹರು ನಗರದ ಸಾಯಿಬಾಬಾ ಗುಡಿ ಹತ್ತಿರದ ಉದ್ಯಾನವನದ ಕಂಪೌಂಡ್ ಮತ್ತು ವಾಕಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ವಿಜಯಪುರ ನಗರದ ದರ್ಗಾ ರಸ್ತೆಯ ಗಂಗಾಪುರಂ ಕಾಲೊನಿಯಲ್ಲಿ, ರೂ.65.69 ಲಕ್ಷ ಅನುದಾನದಲ್ಲಿ, ದುರ್ಗಾ ರಸ್ತೆ ಗಂಗಾಪುರಂ ಹತ್ತಿರದ ಉದ್ಯಾನವನಕ್ಕೆ ಚೈನ್ ಲಿಂಕ್ ಮೆಶ್, ಮಹಾಬಲೇಶ್ವರ ಕಾಲೊನಿ ಉದ್ಯಾನವನದ ಅಭಿವೃದ್ಧಿ, ಗಂಗಾಪುರಂ ಹತ್ತಿರದ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಸಮಸ್ಯೆಗಳ ಆಲಿಕೆ
ಪ್ರತಿ ಭೂಮಿಪೂಜೆ ಸಮಾರಂಭದ ಬಳಿಕ ನೆರೆದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸ್ಥಳದಲ್ಲೇ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು. ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಬಡಾವಣೆ, ಕಾಲೊನಿಗಳ ನಿವಾಸಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

