ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪ್ರಕೃತಿ ನಮ್ಮ ಬದುಕಿಗೆ ಬೇಕಾದ ಎಲ್ಲವನ್ನು ನೀಡಿದೆ. ಅದಕ್ಕಾಗಿಯೇ ನಾವು ದೇವರನ್ನು ವಿವಿಧ ರೂಪದಲ್ಲಿ ಆರಾಧಿಸುತ್ತಿದ್ದೇವೆ. ದೇವರು ಸರ್ವವ್ಯಾಪಿಯಾಗಿದ್ದಾನೆ. ಪ್ರತಿಯೊಬ್ಬರೂ ಏಕಾಗ್ರತೆಯಿಂದ ಧ್ಯಾನದಲ್ಲಿ ತೊಡಗುವ ಮೂಲಕ ಬದುಕಿನಲ್ಲಿ ಸಾಧನೆ ಮಾಡಬೇಕೆಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಮಹಾರಾಜ ಮಠದ ಸಿದ್ದರಾಮೇಶ್ವರ ಮಹಾರಾಜರ ಪುಣ್ಯಸ್ಮರಣೋತ್ಸವದಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಅವರು, ನಮ್ಮ ಹಿಂದು ಧರ್ಮದ ಸಂಸ್ಕ್ರತಿಯ ಜಗತ್ತಿನಲ್ಲಿಯೇ ವೈಶಿಷ್ಟ್ಯಪೂರ್ಣವಾಗಿದೆ. ನಮ್ಮ ಧರ್ಮದಲ್ಲಿ ಅವರ ಭಾವಕ್ಕೆ ತಕ್ಕಂತೆ ದೇವರನ್ನು ಪೂಜಿಸುವ ಸ್ವಾತಂತ್ರ್ಯ ಕೊಟ್ಟಿದೆ. ದೇವರನ್ನು ಮೂರ್ತಿ, ಪ್ರಾಣಿ, ವೃಕ್ಷ,ಜಲ, ಮಣ್ಣು ಸೇರಿದಂತೆ ವಿವಿಧ ರೂಪದಲ್ಲಿ ಪೂಜಿಸಲಾಗುತ್ತಿದೆ ಎಂದರು.
ಸಮಾಜವನ್ನು ಸನ್ಮಾರ್ಗದಲ್ಲಿ ತರುವ ನಿಟ್ಟಿನಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಭಕ್ತಿ ಆಂದೋಲನ ನಡೆದಿವೆ. ೧೨ ನೇ ಶತಮಾನದಲ್ಲಿ ಬಸವೇಶ್ವರರು ಸಮಾನತೆ ಸಂದೇಶ ಸಾರುವ ಮೂಲಕ ಇಷ್ಟಲಿಂಗ ಪೂಜೆ ಮಹತ್ವ ಸಾರುವ ಮೂಲಕ ಭಕ್ತಿ ಆಂದೋಲನ ಮಾಡಿದ್ದಾರೆ. ಏಕನಾಥ ಮಹಾರಾಜರು ಭಕ್ತಿ ಆಂದೋಲನದ ಮೂಲಕ ಜನರನ್ನು ಸನ್ಮಾರ್ಗದತ್ತ ತೆಗೆದುಕೊಂಡು ಹೋದರು. ಸಮಾಜದಲ್ಲಿ ಮೇಲು-ಕೀಳು ಎಂಬ ಬೇಧಭಾವ ಹೋಗಲಾಡಿಸಲು ಮಹಾನ್ ಪುರುಷರು ಶ್ರಮಿಸಿದ್ದಾರೆ. ಇಲ್ಲಿನ ಮಹಾರಾಜ ಮಠದ ಸಿದ್ದರಾಮೇಶ್ವರರು ಭಾವಸಾರ ಮಹಾರಾಜರಿಂದ ದೀಕ್ಷೆ ಪಡೆದರು. ಆಧ್ಯಾತ್ಮದಲ್ಲಿ ಸಾಧನೆ ಮಾಡಿ ಅಪಾರ ಶಿಷ್ಯರಿಗೆ ಬೋಧನೆ ಮಾಡಿದ್ದಾರೆ ಎಂದರು.
ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಾವಯವ ಕೃಷಿ, ಗೋ ಸಾಕಣೆ ಸೇರಿದಂತೆ ಅನೇಕ ರಂಗಗಳಲ್ಲಿ ಕನ್ಹೇರಿ ಪೂಜ್ಯರ ಮಾರ್ಗದರ್ಶನ ತುಂಬಾ ಅಗತ್ಯವಿದೆ. ಇಡೀ ದೇಶ ಇಂತಹ ಪೂಜ್ಯರನ್ನು ಪಡೆದುಕೊಂಡಿರುವುದು ಪುಣ್ಯ.ಮಹಾತ್ಮ ಬಸವೇಶ್ವರರರು ಜಗತ್ತಿಗೆ ಕಾಯಕ ತತ್ವ, ದಾಸೋಹ ತತ್ವ, ಅನುಭಾವ ತತ್ವ ನೀಡಿದರು. ಈ ಪರಂಪರೆಯನ್ನು ವಿಜಯಪುರದ ಸಿದ್ದೇಶ್ವರ ಪೂಜ್ಯರು ನಡೆಸಿಕೊಂಡು ಹೋಗುವ ಮೂಲಕ ಅವರು ಎರಡನೇ ಬಸವೇಶ್ವರರು ಎನಿಸಿಕೊಂಡಿದ್ದರು. ಕನ್ಹೇರಿ ಮಠದ ಅದೃಶ್ಯಕಾಡಸಿದ್ದೇಶ್ವರ ಪೂಜ್ಯರು ಜನತೆಗೆ ಅನುಭಾವ ನೀಡುತ್ತಿದ್ದಾರೆ ಎಂದು ಅತಿಶೋಕ್ತಿಯಾಗಲಾರದು ಎಂದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ನಾವು ನೆಮ್ಮದಿಯಿಂದ ಹೇಗೆ ಬದುಕು ಬೇಕು ಎಂಬುವದನ್ನು ಅನಾದಿ ಕಾಲದಿಂದಲೂ ನಮ್ಮ ದೇಶದ ಧರ್ಮ ಹೇಳಿದೆ. ಕನ್ಹೇರಿ ಮಠದಲ್ಲಿ ಅನೇಕ ಸಂಶೋಧನೆ ಮಾಡುವ ಮೂಲಕ ಇಡೀ ಜಗತ್ತಿಗೆ ಮಾದರಿಯಾಗುವಂತೆ ಮಠವನ್ನು ಅದೃಶ್ಯಕಾಡಸಿದ್ದೇಶ್ವರ ಪೂಜ್ಯರು ಕಟ್ಟುವ ಮೂಲಕ ನಮಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಬಸವನಬಾಗೇವಾಡಿ ಸುಕ್ಷೇತ್ರದಲ್ಲಿ ಭಾವೈಕ್ಯತೆಯಿಂದ ಮಹಾರಾಜ ಮಠದ ಸಪ್ತಾಹದಲ್ಲಿ ಭಾಗವಹಿಸುವ ಮೂಲಕ ಸತ್ಸಂಗ ಮಾಡುವ ಮೂಲಕ ಈ ಕ್ಷೇತ್ರದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಪೂರಕವಾಗಿದೆ. ಇಡೀ ಜಗತ್ತಿಗೆ ವಚನ ಸಾಹಿತ್ಯ ಅಮೂಲ್ಯವಾದ ಸಾಹಿತ್ಯವನ್ನು ಬಸವೇಶ್ವರರು ನೀಡಿದ್ದಾರೆ. ನಾವೆಲ್ಲರೂ ವಚನ ಸಾಹಿತ್ಯವನ್ನು ಓದುವ ಮೂಲಕ ಉತ್ತಮ ಜೀವನ ಸಾಗಿಸಬೇಕು. ಇಡೀ ಜಗತ್ತಿನಲ್ಲಿ ಭಾವೈಕ್ಯತೆ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ. ಜಗತ್ತಿನಲ್ಲಿ ಜಾತಿ ಆಧಾರದ ಮೇಲೆ ಯುದ್ಧ ನಡೆಯುತ್ತಿವೆ. ಕೆಲವೆಡೆ ಚಿಕ್ಕಮಕ್ಕಳು ತಮ್ಮ ಕೈಯಲ್ಲಿಯೇ ಬಂದೂಕು ಹಿಡಿದು ತಮ್ಮ ತಮ್ಮ ಸಹೋದರರನ್ನು ಕೊಲ್ಲುತ್ತಿರುವುದನ್ನು ನೋಡುತ್ತಿದ್ದೇವೆ. ಭಾರತ ದೇಶ ಇಡೀ ಜಗತ್ತಿಗೆ ಭಾವೈಕ್ಯತೆಯ ಸಂದೇಶ ಸಾರುತ್ತಿದೆ ಎಂದರು.
ಮುಪ್ಪಿನ ಕಾಡಸಿದೇಶ್ವರ ಸ್ವಾಮೀಜಿ, ಶಂಕರನಾಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಗಿರೀಶಾನಂದ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಅಭಯಾನಂದ ಸ್ವಾಮೀಜಿ ಮಾತನಾಡಿದರು.
ಸತ್ಸಂಗ ಕಾರ್ಯಕ್ರಮದಲ್ಲಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಸಂಗಯ್ಯ ಕಾಳಹಸ್ತೇಶ್ವಮಠ, ಬಸವರಾಜ ನಾಯ್ಕೋಡಿ, ವಿನುತ ಕಲ್ಲೂರ, ಬಸವರಾಜ ಗಚ್ಚಿನವರ, ಶಿವಾನಂದ ತೋಳನೂರ, ಬಸವರಾಜ ಶೆಂಡೆ, ಬಸವರಾಜ ಚಿಂಚೋಳಿ ಮಹಾರಾಷ್ಟ್ರ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಜನರು ಸೇರಿದಂತೆ ಇತರರು ಇದ್ದರು.
ವೈಭವದ ಪಲ್ಲಕ್ಕಿ ಉತ್ಸವ
ಸಪ್ತಾಹದಂಗವಾಗಿ ಬೆಳಗ್ಗೆ ಮಹಾರಾಜರ ಮಠದಲ್ಲಿ ವಿಶೇಷ ಪೂಜೆ, ಕಾಕಡಾರತಿ, ಭಜನೆ ಜರುಗಿತು. ಸಂಜೆ ಸಿದ್ದರಾಮೇಶ್ವರ ಮಹಾರಾಜರ ಪಲ್ಲಕ್ಕಿ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಪಲ್ಲಕ್ಕಿ ಉತ್ಸವದಲ್ಲಿ ಕನ್ಹೇರಿ ಗುರುಕುಲ ಮಠದ ವಿವಿಧ ಕಲಾ ತಂಡಗಳು ಗಮನ ಸೆಳೆದವು.

