ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರಜ್ಞೆ ಮತ್ತು ಜ್ಞಾನವನ್ನು ಹೊರತರಲು ಅತ್ಯಂತ ಉಪಯುಕ್ತವಾಗುತ್ತವೆ ಎಂದು ಬಿ.ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯ ವಿಶ್ರಾಂತ ಉಪಕುಲಪತಿ ಡಾ. ಸತೀಶ ಜಿಗಜಿನ್ನಿ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಮೈ ನಿವರೇಳಿಸುವ ವಿಜ್ಞಾನ ಮತ್ತು ಭಾಷಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಇಂಥ ಪ್ರದರ್ಶನಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ವಿಷಯಗಳತ್ತ ಹೆಚ್ಚು ಆಸಕ್ತಿ ಬೆಳೆಸಲು ಅನುಕೂಲವಾಗುತ್ತದೆ. ಅಲ್ಲದೇ, ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳು ವಿಜ್ಞಾನಿಗಳಾಗಲು ಪ್ರೋತ್ಸಾಹ ನೀಡುತ್ತವೆ ಎಂದು ಅವರು ಹೇಳಿದರು.
ಇಗ್ನೋ ಪ್ರಾದೇಶಿಕ ನಿರ್ದೇಶಕ ರವಿಕಾಂತ ಕೆ. ಮಾತನಾಡಿ, ವಸ್ತು ಪ್ರದರ್ಶನಗಳು ಮಕ್ಕಳನ್ನು ವಿಜ್ಞಾನದ ಬಗ್ಗೆ ಜ್ಞಾನ ಒದಗಿಸುತ್ತವೆ. ಅಲ್ಲದೇ, ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು ಸ್ಪೂರ್ತಿ ನೀಡುತ್ತವೆ ಎಂದು ತಿಳಿಸಿದರು.
ಕಾರ್ಯ ಸಂಯೋಜಕ ಆಶೀಶ ಕುಲಕರ್ಣಿ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಮಾಡಿರುವ ಮಾದರಿಗಳು, ಅದ್ಭುತವಾಗಿವೆ. ಅವರಲ್ಲಿರುವ ಕ್ರಿಯಾಶೀಲತೆ ಹಿರಿಯರನ್ನೂ ಮಂತ್ರಮುಗ್ದಗೊಳಿಸುತ್ತವೆ ಎಂದು ಹೇಳಿದರು.
ವಿಜ್ಞಾನ, ಗಣೀತ ವಿಷಯಗಳನ್ನು ಒಳಗೊಂಡಿದ್ದ ಈ ಪ್ರದರ್ಶನದಲ್ಲಿ ಈ ವಿಷಯಗಳು ಇತರ ವಿಷಗಳೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧ, ಜಲಮಾಲಿನ್ಯದ ಪರಿಣಾಮಗಳು, ಸೌರವ್ಯೂಹ, ಕ್ಯೂ ಆರ್ ಕೋಡ್ ಜನರೇಶನ್ ರಚನೆ ವಿಧಾನ, ಆಂಗ್ಲಭಾಷೆಯ ಪ್ರಾಚೀನತೆಯ ಗ್ರಂಥಗಳು, ಪಪೆಟ್ ಶೋಗಳು, ಹಿಂದಿ ಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ ಮಾದರಿಗಳು, ಕನ್ನಡಭಾಷೆಯ ಅನುಭವ ಮಂಟಪದ ಶರಣರ ಸಂವಾದ ಮತ್ತು ಕವಿಗಳ ವೇಷ ಭೂಷಣ ಗಮನ ಸೆಳೆದವು. ಕಲಾ ವಿಭಾಗದರು ರೂಪಿಸಿದ ಮೈಸೂರು ಅರಮನೆ ಮಾದರಿ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಕ್ಕೆ ಸಾಕ್ಷಿಯಾಗಿತ್ತು.
ಈ ಸಂದರ್ಭದಲ್ಲಿ ಮಕ್ಕಳು ಕಂಪ್ಯೂಟರ್ ನಲ್ಲಿ ರಚಿಸಿದ ಆಟಗಳನ್ನು ಪಾಲಕರಿಗೆ ಆಟವಾಡಿಸಲಾಯಿತು.
ಶಾಲೆಯ ಪ್ರಾಚಾರ್ಯ ಡಾ. ಶೈಜೂಕ ನಾಯರ ಮತ್ತು ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಹಾಗೂ ಶಿಕ್ಷಕರ ಅವರ ಮಾರ್ಗದರ್ಶನದಲ್ಲಿ ಶನಡೆದ ಈ ಪ್ರದರ್ಶನ ಜನಮನ ಸೂರೆಗೊಂಡಿತು.

