ಮರಾಠಾ ಸಮಾಜ ಸಾಂಸ್ಕೃತಿಕ ಸೇವಾ ಸಮಿತಿಯ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾವೆಲ್ಲರೂ ಇಲ್ಲಿ ಒಗ್ಗಟ್ಟಿನಿಂದ ಇರುವ ಕಾರಣಕ್ಕೆ ವಿಜಯಪುರ ನಗರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ವಾರ್ಡ ನಂ.೧೫ ರಲ್ಲಿ ಬರುವ ಟ್ರೇಜರಿ ಕಾಲೊನಿಯ ಅಯ್ಯಪ್ಪ ದೇವಸ್ಥಾನ ಹತ್ತಿರ ಭಾನುವಾರ ೨೦೨೦-೨೧ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಿಸಲಾದ ರೂ.೧೦ ಲಕ್ಷ ಅನುದಾನದಲ್ಲಿ ಮರಾಠಾ ಸಮಾಜ ಸಾಂಸ್ಕೃತಿಕ ಸೇವಾ ಸಮಿತಿಯ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಅಪಪ್ರಚಾರ ನಡೆಸಿದರೂ ಯಾರ ಆಟವು ನಡೆಯಲಿಲ್ಲ. ಹಿಂದಿನ ಚುನಾವಣೆಗಿಂತಲೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದೆ. ಅದರ ಫಲವಾಗಿ ಎಂದೂ ಅಭಿವೃದ್ಧಿ ಕಾಣದ ಬಡಾವಣೆ, ಕಾಲನಿಗಳು ಸೇರಿ ನಗರದ ಒಳ ರಸ್ತೆಗಳು ಹಾಗೂ ಪ್ರಮುಖ ರಸ್ತೆಗಳು ಅಭಿವೃದ್ಧಿಗೊಂಡಿವೆ. ಇದರಿಂದ ನಮ್ಮ ನಗರ ದೂಳು ಮುಕ್ತವಾಗಿ, ಅಂದ ಹೆಚ್ಚಾಗುವ ಜೊತೆಗೆ ನಿವೇಶನಗಳ ಮೌಲ್ಯ ಸಹ ದ್ವಿಗುಣಗೊಂಡಿವೆ. ನಗರದ ಸಾರ್ವಜನಿಕರು ಸಮಸ್ಯೆಗಳಿಲ್ಲದೆ ಖುಷಿಯಿಂದ ಇದ್ದರೆ ಸಾಕು. ಪ್ರತಿಯೊಂದು ಸಮಾಜದ ಅಭಿವೃದ್ಧಿಗೂ ಪ್ರಾಮಾಣಿಕವಾಗಿ ಅನುಕೂಲ ಮಾಡಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮರಾಠಾ ಸಮಾಜ ಸಾಂಸ್ಕೃತಿಕ ಸೇವಾ ಸಮಿತಿ, ಸಮುದಾಯ ಭವನ ಆಡಳಿತ ಮಂಡಳಿ ಅಧ್ಯಕ್ಷ ವಿಜಯಕುಮಾರ ಚವ್ಹಾಣ, ಕಾರ್ಯದರ್ಶಿ ರಾಹುಲ್ ಜಾಧವ, ಸಹ ಕಾರ್ಯದರ್ಶಿ ಶಂಕರ ಕನಸೆ, ಖಜಾಂಚಿ ರಾಜು ಮೋರೆ, ಸದಸ್ಯರಾದ ವಸಂತ ಬುರ್ಕೆ, ಸಿದ್ದೋಬಾ ಚವ್ಹಾಣ, ಉಮೇಶ ಚವ್ಹಾಣ, ಬಾಳಕೃಷ್ಣ ಪವಾರ ಸೇರಿದಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.

