ಹೊನವಾಡದಲ್ಲಿ ವಕ್ಫ್ ಆಸ್ತಿ ಬರೀ 11 ಎಕರೆ | ಅನವಶ್ಯಕ ಗೊಂದಲ ಸೃಷ್ಟಿ | ಆತಂಕ ಬೇಡವೆಂದ ಸಚಿವ ಎಂ.ಬಿ.ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಕುರಿತಂತೆ ಕೆಲ ಜನಪ್ರತಿನಿಧಿಗಳು ಅನವಶ್ಯಕವಾಗಿ ಗೊಂದಲ ಸೃಷ್ಟಿ ಮಾಡಿ, ಚರ್ಚೆ ಹುಟ್ಟುಹಾಕಿದ್ದು ಇದಕ್ಕೆಲ್ಲ ಇತಿಶ್ರಿ ಹಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ರವಿವಾರ ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಉಪವಿಭಾಗಾಧಿಕಾರಿಗಳು ಮತ್ತು ತಹಸಿಲ್ದಾರರು ಇರಲಿದ್ದು, ಈ ಸಮಿತಿಯು ೧೯೬೪ ರಿಂದ ೧೯೭೪ ರವರೆಗಿನ ಜಿಲ್ಲೆಯ ಎಲ್ಲ ವಕ್ಫ್ ಆಸ್ತಿಗಳ ಭೂದಾಖಲೆಗಳನ್ನು ಪರಿಶೀಲನೆ ಮಾಡಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ವಕ್ಫ್ ೧೪೨೦೧ ಎಕರೆ ಆಸ್ತಿ ಹೊಂದಿತ್ತು. ಅದರಲ್ಲಿ ೧೧೮೩೫ ಎಕರೆ ಆಸ್ತಿಯನ್ನು ಸರಕಾರ ಈಗಾಗಲೆ ಹಂಚಿಕೆ ಮಾಡಿದೆ. ೧೪೫೯ ಎಕರೆ ಇಂದೀಕರಣ ಮಾಡಬೇಕಿದೆ. ಈಗ ವಕ್ಫ್ ಹೆಸರಿನಲ್ಲಿರುವುದು ೭೭೩ ಎಕರೆ ಆಸ್ತಿ ಮಾತ್ರ. ಹಂಚಿಕೆ ಮಾಡಲಾದ ೧೨೦೮೩ ಎಕರೆ ಭೂಮಿಯೆಲ್ಲವೂ ಬಹುತೇಕ ಮುಸ್ಲಿಂ ಆಸ್ತಿಗಳಾಗಿದ್ದು ಅದರಲ್ಲಿ ಶೇ.೨೫-೩೦ ರಷ್ಟು ಆಸ್ತಿಗಳನ್ನು ಅವರು ಹಿಂದುಗಳಿಗೆ ಮಾರಾಟ ಮಾಡಿದ್ದು ಇರುತ್ತದೆ. ಆದರೆ ರಾಜಕೀಯ ಲಾಭಕ್ಕೋಸ್ಕರ ಕೆಲವರು ಇದನ್ನು ಹಿಂದುಗಳ ಆಸ್ತಿ ಎಂದು ಸುಳ್ಳು ಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಅದಿಕಾರಿಗಳು ಒಟ್ಟು ೧೨೪ ನೋಟಿಸ್ ಗಳನ್ನು ಮಾತ್ರ ಜಾರಿ ಮಾಡಿದ್ದಾರೆ. ಆದರೆ ಇಂಡಿಯಲ್ಲಿ ೪೪ ಆಸ್ತಿಗಳಿಗೆ ಸಂಬಂಧಿಸಿದಂತೆ ಅಲ್ಲಿಯ ತಹಸಿಲ್ದಾರ ಅವರು ನೋಟಿಸ್ ಕೊಡದೇ ಇಂದೀಕರಣ ಮಾಡಿದ್ದು, ಅದನ್ನು ಉಪವಿಭಾಗಾಧಿಕಾರಿಗಳು ತಮ್ಮ ಪರಮಾಧಿಕಾರ ಬಳಸಿಕೊಂಡು ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು.
ಇನ್ನು ಸಿಂದಗಿ ತಾಲೂಕಿನ ಯರಗಲ್ ಗ್ರಾಮದ ಸ.ನಂ ೧೩೮ ರ ೧೩ ಎಕರೆ ಆಸ್ತಿ ೧೯೭೪ ಗೆಜೆಟ್ ನೊಟಿಫಿಕೇಶನ್ ಗಿಂತ ಮೊದಲು ೧೯೩೦ ಕ್ಕೂ ಮೊದಲಿನ ಪ್ರಕರಣವಾಗಿದ್ದು ಇದು ರೈತರ ಖಾಸಗಿ ಆಸ್ತಿಯಾಗಿದ್ದು ಇದನ್ನು ಕೈಬಿಡಲಾಗಿದೆ. ಅಲ್ಲದೇ ಸಿಂದಗಿಯ ವಿರಕ್ತಮಠದ ಆಸ್ತಿ (೧.೩೬ ಎಕರೆ) ಸ.ನಂ ೧೦೨೯ ಇದ್ದದ್ದು ತಪ್ಪಾಗಿ ೧೦೨೦ (ವಕ್ಫ್ ಆಸ್ತಿ) ಎಂದು ನಮೂದಾಗಿದ್ದು ಅದನ್ನೂ ಸಹ ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಮಹಾನಗರ ಪಾಲಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಇಂಡಿ ಉಪವಿಭಾಗಾಧಿಕಾರಿ ಅಬಿದ್ ಗದ್ಯಾಳ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಬಿರಾದಾರ, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಮತ್ತು ತಹಸಿಲ್ದಾರರು ಇದ್ದರು.
ಹೊನವಾಡ ಸಮಸ್ಯೆ ಇತ್ಯರ್ಥ
ಗೆಜೆಟ್ನಲ್ಲಿ ತಪ್ಪಾಗಿ ನಮೂದಿಸಿದ್ದರಿಂದಾಗಿ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ 1,200 ಎಕರೆ ವಕ್ಫ್ ಆಸ್ತಿ ಎನ್ನುವ ಗೊಂದಲ ಸೃಷ್ಟಿಯಾಗಿದ್ದಕ್ಕೆ ಕಾರಣ, ವಕ್ಫ್ ಆಸ್ತಿ ಇರುವುದು ವಿಜಯಪುರ ನಗರದ ವ್ಯಾಪ್ತಿಯಲ್ಲಿರುವ ಮಹಾಲಬಾಗಾಯತದಲ್ಲಿ. ಆದರೆ 1974ರ ಗೆಜೆಟ್ ನಲ್ಲಿ ಮಹಾಲಬಾಗಾಯತದ ಪಕ್ಕ ಬ್ರ್ಯಾಕೆಟ್ ನಲ್ಲಿ ಹೊನವಾಡ ಎಂದು ಬರೆದದ್ದು ರೈತರ ಆತಂಕಕ್ಕೆ ಕಾರಣವಾಗಿತ್ತು. ಆದರೆ ವಕ್ಫ್ ಮಂಡಳಿಯೇ 1977ರಲ್ಲಿ ತಿದ್ದುಪಡಿ ಮಾಡಿ, ಬ್ರಾಕೆಟ್ ನಲ್ಲಿದ್ದ ಹೊನವಾಡ ಹೆಸರನ್ನು ತೆಗೆದಿದೆ. ಇಲ್ಲಿ 11 ಎಕರೆ ಮಾತ್ರ ವಕ್ಫ್ ಗೆ ಸೇರಿದ್ದು, ಇದರಲ್ಲಿ 10 ಎಕರೆ 14 ಗುಂಟೆಯಲ್ಲಿ ಖಬರಸ್ತಾನವಿದೆ. ಉಳಿದ 24 ಗುಂಟೆಯಲ್ಲಿ ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ. ಉಳಿದ ಜಮೀನೆಲ್ಲ ರೈತರಿಗೆ ಸೇರಿದೆ. ಇದನ್ನು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದು ಈ ಸಮಸ್ಯೆಯನ್ನು ಅಂತ್ಯಗೊಳಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸ್ಪಷ್ಟಪಡಿಸಿದ್ದಾರೆ.

“ಯಾವುದು ನಿಯಮಾನುಸಾರ ವಕ್ಫ್ ಆಸ್ತಿಯೋ ಅದಷ್ಟೇ ಅವರಿಗೆ ಸೇರುತ್ತದೆ. ರೈತರಾಗಲಿ, ಖಾಸಗಿ ಮಾಲೀಕರಾಗಲಿ ಈ ಬಗ್ಗೆ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಕೆಲವರು ಹಿಂದು-ಮುಸ್ಲಿಂ ಸಾಮರಸ್ಯಕ್ಕೆ ಧಕ್ಕೆ ತರಲು ಪಕ್ಷ ರಾಜಕಾರಣ ಮಾಡುತ್ತಿದ್ದಾರೆ. ವಕ್ಫ್ ಆಸ್ತಿ ಕುರಿತ ತಪ್ಪು ಕಲ್ಪನೆ ಹೋಗಲಾಡಿಸಿ ಸಹಬಾಳ್ವೆಗೆ ದಾರಿ ಮಾಡಿಕೊಡಲಾಗುವುದು.”
– ಎಂ.ಬಿ.ಪಾಟೀಲ
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು,

