ಬಸವನ ಅಗಲಿಕೆಗೆ ಕಂಬನಿಯ ಅಶ್ರುದರ್ಪಣ | ಶ್ರೀಗಳು, ರೈತರ ಸಮ್ಮುಖದಲ್ಲಿ ಗೌರವಯುತ ಅಂತಿಮ ಸಂಸ್ಕಾರ
ಉದಯರಶ್ಮಿ ದಿನಪತ್ರಿಕೆ
– ಇಲಾಹಿ ಇ. ಜಮಖಂಡಿ
ಚಿಮ್ಮಡ: ಬಹುತೇಕ ರೈತರು ತಮ್ಮ ಕೃಷಿ ಕಾಯಕಗಳಿಗೆ ಬೆನ್ನೆಲುಬಾಗಿ ದುಡಿಯುವ ಆಕಳು, ಎಮ್ಮೆ, ಎತ್ತುಗಳು ದುಡಿಯಲು ಅಸಹಾಯಕ ಸ್ಥಿತಿ ತಲುಪಿದಾಗ ಅವುಗಳನ್ನು ಕಸಾಯಿಖಾನೆಗೋ ಅಥವಾ ಗೋಶಾಲೆಗೋ ಸಾಗಿಸಿ ಕೈತೊಳೆದುಕೊಂಡು ಬಿಡುತ್ತಾರೆ ಆದರೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ರೈತ ಪರಪ್ಪಾ ರಾಮಪ್ಪಾ ಪಾಲಭಾವಿಯವರು ನಿಸ್ಸಹಾಯಕ ಆಕಳು, ಎತ್ತುಗಳನ್ನು ಮನೆಯ ಸದಸ್ಯರಂತೆ ಸಾಕಿ, ಸಲಹಿ ಅವು ಅಗಲಿದಾಗ ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಸುಮಾರು ಇಪ್ಪತ್ನಾಲ್ಕು ವರ್ಷಗಳ ಹಿಂದೆ ಖರೀದಿಸಿದ ಎತ್ತೊಂದು ಗುರುವಾರ ಸಂಜೆ ವಯೋಸಹಜ ಅಸುನೀಗಿದಾಗ ತಮ್ಮ ಬಾಗದ ರೈತರಿಗೆಲ್ಲ ಕರೆ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಆಹ್ವಾನ ನೀಡಿ ಶ್ರೀ ಪ್ರಭು ಮಹಾಸ್ವಾಮಿಜಿ, ಶ್ರೀ ಜನಾರ್ಧನ ಮಹಾರಾಜರು ಹಾಗೂ ನೂರಾರು ಜನ ರೈತರ ಸಮ್ಮುಖದಲ್ಲಿ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಿದರು. ಅಗಲಿದ ಬಸವನಿಗೆ ತಮ್ಮ ಮನೆಯ ಹಿರಿಯರ ಸ್ಥಾನಮಾನ ನೀಡಿದ್ದ ಪಾಲಭಾವಿ ದಂಪತಿಗಳು ಈ ಹಿರಿ ಎತ್ತನ್ನು ಮನೆಯ ಸದಸ್ಯರಂತೆಯೇ ಪ್ರೀತಿಯಿಂದ ಸಲಹುತಿದ್ದರು, ಈಗಾಗಲೇ ಐದು ಹಿರಿ ಎತ್ತುಗಳ ಸಮಾಧಿಗಳು ಪಾಲಭಾವಿ ದಂಪತಿಗಳ ಮನೆಯ ಆವರಣದಲ್ಲಿದ್ದು ಪ್ರತೀವರ್ಷ ಬಸವ ಜಯಂತಿಯಂದು ಎಲ್ಲ ಸಮಾಧಿಗಳಿಗೆ ವಿಶೇಷ ಪೂಜೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಿಸುವ ಮೂಲಕ ತಮ್ಮಲ್ಲಿ ಒಬ್ಬರಾಗಿ ದುಡಿದ ಮೂಕಪ್ರಾಣಗಳಿಗೆ ಗೌರವ ತೋರುತಿದ್ದಾರೆ.
ತಂದೆಯ ಕಾಲದಿಂದಲೂ ಇದುವರೆಗೆ ಯಾವುದೇ ಆಕಳು, ಎತ್ತುಗಳನ್ನು ಕಸಾಯಿಖಾನೆ, ಗೋಶಾಲೆಗಳಿಗೆ ನೀಡಿದರೆ ಮನೆಯ ಸದಸ್ಯರನ್ನು ವೃದ್ದಾಶೃಮಕ್ಕೆ ಸೇರಿಸಿದಂತಾಗುತ್ತದೆ ಎಂಬ ಭಾವನೆ ಹೊಂದಿರುವ ಪರಪ್ಪಾ ಪಾಲಭಾವಿಯವರು ತಮ್ಮ ಮಕ್ಕಳಿಗೂ ಈ ಪರಂಪರೆ ಮುಂದುವರಿಸುವಂತೆ ಸಲಹೆ ನೀಡಿದ್ದಾಗಿ ತಿಳಿಸಿದ್ದಾರೆ.
“ಇಪ್ಪತ್ತರಿಂದ ಮೂವತ್ತು ವರ್ಷಗಳ ಕಾಲ ನಮ್ಮೊಂದಿಗೆ ಜೊತೆಯಾಗಿ ದುಡಿದು ನಮಗೆ ಅನ್ನ, ಆಶೀರ್ವಾದ ನೀಡಿದ ಮೂಕ ಪ್ರಾಣಿಗಳನ್ನು ಅವು ದುಡಿಯುವುದನ್ನು ನಿಲ್ಲಿಸಿವೆ ಎಂಬ ಒಂದೇ ಕಾರಣಕ್ಕಾಗಿ ನಾವು ಅವುಗಳನ್ನು ಅಗಲಿಸಿದರೆ, ಹಣಕ್ಕಾಗಿ ಕಸಾಯಿಖಾನೆಗೆ ಮಾರಾಟ ಮಾಡಿದರೆ ನಮ್ಮಂಥ ಕಠೋರ ಹೃದಯದವರು ಯಾರಿದ್ದಾರೆ? ಬಸವನನ್ನು ದೇವರೆಂದು ಭಾವಿಸಿ ಪೂಜಿಸುವ ನಾವು, ಅವುಗಳನ್ನು ಬದುಕಿರುವವರೆಗೂ ಸಾಕದಿದ್ದರೆ ಇದು ನಮ್ಮ ರೈತ ಕುಲಕ್ಕೆ ಅವಮಾನಕಾರಿ, ದೇಶದ ಸಂಸ್ಕೃತಿಗೇ ವಿರುದ್ದವಾದದ್ದು.”
– ಪರಪ್ಪಾ ರಾಮಪ್ಪಾ ಪಾಲಭಾವಿ
ಪ್ರಗತಿಪರ ರೈತರು, ಚಿಮ್ಮಡ

