ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಡಾ.ಬಿ.ಆರ್.ಅಂಬೇಡ್ಕರ್ ನಗರ ವಸತಿ ಯೋಜನೆ ಅಡಿಯಲ್ಲಿ ಅನಧಿಕೃತವಾಗಿ ಬರೋಬ್ಬರಿ ೫೪ ಜನರನ್ನು ನೇರವಾಗಿ ನಮೂನೆ-೪ಬಿಯಲ್ಲಿ ಹೆಸರು ಸೇರ್ಪಡೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಈ ಸಂಬಂಧ ವಸತಿ ವಿಭಾಗದ ಪ್ರಥಮ ದರ್ಜೆ ಸಹಾಯಕ ಖ್ಯಾತಪ್ಪ ಎಂ.ಕುಂಬಾರ ಎಂಬುವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಫಲಾನುಭವಿಗಳ ಬದಲಾಗಿ ಹಿಂದುಳಿದ ವರ್ಗಗಳ ಪ್ರವರ್ಗ-೨(ಎ) ಸೇರ್ಪಡೆ ಮಾಡಿರುವ ಸಂಬಂಧ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಲಿಖಿತ ರೂಪದ ಹೇಳಿಕೆಗೆ ಯಾವುದೇ ರೀತಿಯ ಸೂಕ್ತ ದಾಖಲೆಗಳನ್ನು ಒದಗಿಸಿದ ಕಾರಣ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಮಾನತ್ತುಗೊಳಿಸಿದ್ದಾರೆ.
ಪತ್ರಕರ್ತ ಶಿವಾನಂದ ಬಿ.ಆಲಮೇಲ ಅವರು ಈ ಪ್ರಕರಣದ ಕುರಿತು ದೂರು ಸಲ್ಲಿಸಿದ್ದರು. ಈ ಸಂಬಂಧ ಜಿಲ್ಲಾ ನಗರಾಭಿವೃದ್ಧಿ ಕೋಶದ ವಸತಿ ವಿಭಾಗದ ನಗರ ಮಟ್ಟದ ತಾಂತ್ರಿಕಕೋಶದ ತಜ್ಞರು ಸಿಂದಗಿ ಪುರಸಭೆಯ ವಸತಿ ಯೋಜನೆಗೆ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ೨೦೨೧-೨೨ನೇ ಸಾಲಿಗೆ ಸಿಂದಗಿ ಪುರಸಭೆಗೆ ಹೆಚ್ಚುವರಿಯಾಗಿ ಡಾ.ಬಿ.ಆರ್ ಅಂಬೇಡ್ಕರ್ ನಗರ ವಸತಿ ಯೋಜನೆ ಅಡಿಯಲ್ಲಿ ೧೮೧ ಹಾಗೂ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ೫೬೯ ಸೇರಿ ೭೫೦ ಗುರಿಗಳಲ್ಲಿ ಆಶ್ರಯ ಸಮಿತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಆಶ್ರಯ ಸಮಿತಿಯಲ್ಲಿ ೩೭, ಡಾ.ಬಿ.ಆರ್ ಅಂಬೇಡ್ಕರ್ ನಗರ ವಸತಿ ಯೋಜನೆ ಅಡಿಯಲ್ಲಿ ೧೭ ಸೇರಿದಂತೆ ೫೪ ಜನರ ಹೆಸರನ್ನು ಅನಧಿಕೃತವಾಗಿ ನೇರವಾಗಿ ಸೇರ್ಪಡೆ ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಖ್ಯಾತಪ್ಪ ಎಂ.ಕುಂಬಾರ ಎಂಬುವವರನ್ನು ಅಮಾನತ್ತುಗೊಳಿಸಲಾಗಿದೆ.
