ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಸ್ತೆಯ ಮೇಲೆ ಅನಧಿಕೃತವಾಗಿ ಶೆಡ್ಡುಗಳನ್ನು ನಿರ್ಮಿಸಿಕೊಳ್ಳುವ್ಯದರಿಂದ ನಗರ ಸೌಂದರ್ಯೀಕರಣಕ್ಕೂ ಮಾರಕ, ಸರಾಗ ಸಂಚಾರಕ್ಕೂ ಅಡ್ಡಿ. ಅಲ್ಲದೇ ಪುರಸಭೆಯ ಬೋಕ್ಕಸಕ್ಕೂ ಅಪಾರ ಹಾನಿಯಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕರು ಅತಿಕ್ರಮಣದಿಂದ ತೆರವಾದ ಅಂಗಡಿಕಾರರಿಗೆ ಪರಿಹಾರ ಹಾಗೂ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಈ ಹಿಂದೆ ತಾಲೂಕು ಸಾರ್ವಜನಿಕ ಕ್ರೀಡಾಂಗಣವನ್ನು ನಿರ್ಮಿಸುವಾಗ ಅಲ್ಲಿ ವಾಸವಿದ್ದ ಸಾಕಷ್ಟು ಬಡ ಕುಟುಂಬಗಳ ವಸತಿಗಳನ್ನು ತೆರವುಗೊಳಿಸಲಾಯಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷದವರು ಅಭಿವೃದ್ಧಿ ದೃಷ್ಟಿಯಿಂದ ವಿರೋಧ ವ್ಯಕ್ತಪಡಿಸಲಿಲ್ಲ. ಆಗ ನೀವೆಷ್ಟು ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಹಾಗೂ ವಾಸಕ್ಕೆ ಸೂರುಗಳನ್ನು ಒದಗಿಸಿಕೊಟ್ಟಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು
ಮಾಜಿ ಶಾಸಕರ ಕಳೆದ ೧೩ವರ್ಷಗಳ ಆಡಳಿತ ಅವಧಿಯಲ್ಲಿ ಮತಕ್ಷೇತ್ರದ್ಲಲಿ ಎಷ್ಟು ಅನುದಾನ ತಂದಿದ್ದಾರೆ, ಎಷ್ಟು ಅಭಿವೃದ್ಧಿ ಕಾರ್ಯಮಾಡಿದ್ದಾರೆ ಎನ್ನುವುದನ್ನು ಪುರಾವೆ ಸಹಿತ ಕೊಡಬೇಕು. ಈಗಿನ ಶಾಸಕರು ೧೭ ತಿಂಗಳ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ತಂದ ಅನುದಾನವೆಷ್ಟು ಎಂಬುದನ್ನು ನಾವು ಪುರಾವೆ ಸಹಿತ ಒದಗಿಸುತ್ತೇವೆ. ಇದೇ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ವೇದಿಕೆ ನಿರ್ಮಿಸಿ ಅಭಿವೃದ್ಧಿ ಕೆಲಸಗಳ ತುಲನೆ ಹಾಗೂ ಚರ್ಚೆಯಾಗಬೇಕು. ಇದಕ್ಕೆ ಪಂಥಾಹ್ವಾನ ನೀಡುತ್ತಿದ್ದೇವೆ. ಇದನ್ನು ಮಾಜಿ ಶಾಸಕರು ಸ್ವೀಕರಿಸಬೇಕು ಎಂದು ಭೂಸನೂರ ಅವರಿಗೆ ಸವಾಲು ಹಾಕಿದರು.
ಈ ವೇಳೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಅತಿಕ್ರಮಣ ಪುರಸಭೆಯ ನಿರ್ಧಾರ. ಇದಕ್ಕೆ ಕಾಂಗ್ರೆಸ್ ಪಕ್ಷದ ಒತ್ತಡ ಹಾಗೂ ಮುತುವರ್ಜಿಗಳೇನಿಲ್ಲ. ಸೌಂದರ್ಯೀಕರಣಕ್ಕೆ ಒತ್ತು ಕೊಟ್ಟಿರುವುದು ಸ್ವಾಗತಾರ್ಹ. ಅಭಿವೃದ್ಧಿ ಕಾರ್ಯದಲ್ಲಿ ಲೋಪವಿದ್ದರೆ ವಿರೋಧ ವ್ಯಕ್ತಪಡಿಸಿ. ಅದನ್ನು ಬಿಟ್ಟು ಯಾರದೋ ಹಿತಾಸಕ್ತಿಗಾಗಿ ವಿರೋಧ ವ್ಯಕ್ತಪಡಿಸಿದ್ದು ಬಾಲೀಶತನದಿಂದ ಕೂಡಿದ್ದು, ೧೩ವರ್ಷಗಳ ಮಾಜಿ ಶಾಸಕರ ಅವಧಿಯಲ್ಲಿ ಆಲಮೇಲದಿಂದ ಸ್ವಗ್ರಾಮ ದೇವಣಗಾವದವರೆಗಿನ ನರಕ ಸದೃಶ್ಯವಾದ ರಸ್ತೆಯನ್ನು ನಿರ್ಮಾಣ ಮಾಡಲಾಗಲಿಲ್ಲ. ಅದನ್ನು ನವಚೇತನಗೊಳಿಸಲು ಮನಗೂಳಿ ಅವರೆ ಬರಬೇಕಾಯಿತು. ಒಂದು ವರ್ಷದ ಹಿಂದಿದ್ದ ಆಲಮೇಲ ಪಟ್ಟಣ ಈಗ ಹೇಗಾಗಿದೆ ಎಂಬುದನ್ನು ಮಾಜಿಯವರು ಅವಲೋಕನ ಮಾಡಿಕೊಳ್ಳಬೇಕು ಎಂದು ತಿವಿದರು.
ಈ ವೇಳೆ ಮಹ್ಮದಪಟೇಲ್ ಬಿರಾದಾರ, ಸುರೇಶ ಮಳಲಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕುಮಾರ ದೇಸಾಯಿ, ಸೋಮನಗೌಡ ಬಿರಾದಾರ, ಮಲ್ಲಣ್ಣ ಸಾಲಿ ಸೇರಿದಂತೆ ಅನೇಕರಿದ್ದರು.
“ಅಭಿವೃದ್ಧಿ ಕಾರ್ಯಮಾಡುವಾಗ ಪರ ವಿರೋಧಗಳೆನೇ ಇದ್ದರೂ ಕೆಲ ತ್ಯಾಗಕ್ಕೆ ಸಿದ್ದರಾಗಬೇಕಾಗುತ್ತದೆ. ಅನದಿಕೃತ ಶೆಡ್ಡುಗಳನ್ನು ನಿರ್ಮಿಸಿ ಹತ್ತಾರು ಸಾವಿರ ಬಾಡಿಗೆ ಪಡೆಯುವವರು ಬೀದಿ ವ್ಯಾಪಾರಿಗಳು ಹೇಗಾಗುತ್ತಾರೆ? ನಿಜಕ್ಕೂ ಕೆಲ ಸಂತ್ರಸ್ಥರಿಗೆ ಹಾನಿ ಉಂಟಾಗಿದೆ. ಆದರೆ ಅವರಿಗೆ ಶಾಸಕರ ಕಡೆಯಿಂದ ಮುಂಬರುವ ದಿನಮಾನಗಳಲ್ಲಿ ನ್ಯಾಯ ಒದಗಿಸುವ ಕಾರ್ಯ ಮಾಡುತ್ತೇವೆ.”
– ಎಂ.ಎ.ಖತೀಬ
ಕಾಂಗ್ರೆಸ್ ಮುಖಂಡರು

