ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಎಲ್ಲ ಅಂಗಡಿಕಾರರು ತಮ್ಮ ಅಂಗಡಿಗಳ ನಾಮಫಲಕದಲ್ಲಿ ೬೦% ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರ ನಿಯಮ ರೂಪಿಸಿದೆ. ಎಲ್ಲರೂ ತಪ್ಪದೇ ಈ ನಿಯಮವನ್ನು ಪಾಲಿಸಬೇಕು ಎಂದು ತಹಶೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಬೇರೆ ಭಾಷೆಯ ನಾಮ ಫಲಕವನ್ನು ಬಳಸುವದರಿಂದ ಕನ್ನಡಕ್ಕೆ ಅಪಮಾನ ಮಾಡಿದಂತಾಗುತ್ತದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಖಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಸರ್ಕಾರದ ಆದೇಶವನ್ನು ಪಾಲಿಸುವದು ನಮ್ಮೆಲ್ಲರ ಕರ್ತವ್ಯ. ನ೧ ರಿಂದ ಎಲ್ಲ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ೬೦ ರಷ್ಟು ಕನ್ನಡ ಬಾಷೆಯನ್ನು ಬಳಸಬೇಕು. ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆಯೂ ಸಹ ಆದೇಶವಾಗಿದ್ದು ಅದನ್ನೂ ಕಡ್ಡಾಯವಾಗಿ ಎಲ್ಲ ಪಟಾಕಿ ವ್ಯಾಪಾರಸ್ಥರು ತಹಸೀಲ್ದಾರ ಕಚೇರಿಯಿಂದ ಅನುಮತಿ ಪಡೆದು ಪಾಲಿಸಬೇಕು. ನಿಯಮಗಳನ್ನ ಮೀರಿ ನಡೆದು ದಂಡಕ್ಕೆ ಪಾತ್ರರಾಗಬಾರದು ಎಂದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮಾತನಾಡಿ, ನಾಮಫಲಕದ ಬಗೆಗಿನ ನಿಯಮಗಳನ್ನು ಜಾಹೀರಾತು ತಯಾರಿಸಿ ಎಲ್ಲ ಅಂಗಡಿಗಳಿಗೆ ತಲುಪಿಸುವ ಕಾರ್ಯ ಪುರಸಭೆಯಿಂದ ಮಾಡುತ್ತೇವೆ. ಹಬ್ಬದ ದಿನಗಳಲ್ಲಿ ಪ್ರಮುಖ ವೃತ್ತಗಳಲ್ಲಿ ಬಾಳೆದಿಂಡು, ಚಂಡು ಹೂ ಮಾರುವದನ್ನು ಮಾಡಬಾರದು ಎಂದು ವ್ಯಾಪಾರಸ್ಥರಲ್ಲಿ ವಿನಂತಿಸುವದಾಗಿ ತಿಳಿಸಿದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ ಕೆಲ ಅಂಗಡಿಕಾರರು ದೀಪಾವಳಿ ಹಬ್ಬಕ್ಕೆ ಹೊಸ ನಾಮಫಲಕಗಳನ್ನು ಅಳವಡಿಸಲು ಯೋಚಿಸಿರುತ್ತಾರೆ. ಅವರೆಲ್ಲರೂ ಈಗಲೇ ಕಡ್ಡಾಯವಾಗಿ ಕನ್ನಡವನ್ನು ಬಳಸಿ. ಕನ್ನಡ ರಾಜ್ಯೋತ್ಸವದಂದು ಬರುವ ಅದ್ಧೂರಿ ಮೆರವಣಿಗೆಗೆ ತಮ್ಮ ಅಂಗಡಿಗಳ ಮೇಲೆ ಎರಡು ಕನ್ನಡ ಬಾವುಟವನ್ನು ಹಾಕುವ ಮೂಲಕ ಸ್ವಾಗತಿಸಿ ಮೆರವಣಿಗೆಯ ಮೆರಗು ಹೆಚ್ಚಿಸುವಂತೆ ವಿನಂತಿಸಿದರು.
ಅಗ್ನಿಶಾಮಕ ಠಾಣಾಧಿಖಾರಿ ಪ್ರಮೋದ ಸುಂಕದ ಮಾತನಾಡಿ, ಹಬ್ಬದಲ್ಲಿ ಪಟಾಕಿ ವ್ಯಾಪಾರಸ್ಥರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ, ನಾಲತವಾಡ ಪಟ್ಟಣದ ಪಂಚಾಯತ ನ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಮಾತನಾಡಿ ಪಟಾಕಿ ವ್ಯಾಪಾರಸ್ಥರು ನಾಲತವಾಡ ಭಾಗದ ಕಿರಾಣಿ ಸೇರಿದಂತೆ ಇನ್ನೀತರ ವರ್ತಕರು ಪಟಾಕಿ ಖರೀದಿಗೆ ಬಂದಲ್ಲಿ ಪಟ್ಟಣದ ಪಟಾಕಿ ವ್ಯಾಪಾರಸ್ಥರು ನೀಡದೇ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು. ಕನ್ನಡ ಪರ ಸಂಘಟನೆಗಳ ಪ್ರಮುಖರಾದ ರಾಜು ತುಂಬಗಿ, ಮಂಜುನಾಥ ಕೊಪ್ಪ ಮಾತನಾಡಿ, ನಾಮಫಲಕದ ಜೊತೆಗೆ ಬಿಲ್ಗಳನ್ನೂ ಸಹ ಕನ್ನಡ ಭಾಷೆಯಲ್ಲಿ ನೀಡುವಂತೆ ಮತ್ತು ಸರ್ಕಾರದ ನಿಯಮಗಳನ್ನು ಪಾಲಿಸದವರಿಗೆ ಕಪ್ಪು ಶಾಹಿಯಿಂದ ನಾಮಫಲಕಕ್ಕೆ ಬಳಿಯುವದಾಗಿ ತಿಳಿಸಿದರು. ಅಂಗಡಿಕಾರರ ಮುಖಂಡರಾದ ಅಪ್ಪು ದೇಗಿನಾಳ, ವಿಕ್ರಂ ಓಸ್ವಾಲ ಮಾತನಾಡಿ ಸರ್ಕಾರದ ನಿಯಮವನ್ನು ಕಡ್ಡಾಯವಾಗಿ ಪಾಲಿಸುವದಾಗಿ ತಿಳಿಸಿದರು. ಈ ವೇಳೆ ಪಿಎಸ್ಐ ಸಂಜಯ ತಿಪರೆಡ್ಡಿ,
ಸದಸ್ಯ ರಫೀಕ ದ್ರಾಕ್ಷಿ, ಕನ್ನಡ ಪರ ಹೋರಾಟಗಾರರಾದ ವಿರೇಶ ಗುರುಮಠ, ಸಂಗಯ್ಯ ಸಾರಂಗಮಠ, ಮಹಾಂತೇಶ ಬೂದಿಹಾಳಮಠ, ವಾಯ್.ಎಚ್.ವಿಜಯಕರ, ಗಣ್ಯ ವ್ಯಾಪಾರಸ್ಥ ವಾಸುದೇವ ಶಾಸ್ತಿç ಸೇರಿದಂತೆ ಮತ್ತೀತರರು ಇದ್ದರು.

