ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದು ಮತ ಮತಗಳ ಮಧ್ಯದಲ್ಲಿ ಅತೃಪ್ತ ವಾತಾವರಣ ಉಂಟಾಗುತ್ತಿದೆ. ಇಂತಹ ಅತೃಪ್ತ ವಾತಾವರಣವನ್ನು ಹೋಗಲಾಡಿಸಬೇಕಾದರೆ ಭಗವದ್ಗೀತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀಮದ್ ಮಜ್ಜಗದ್ಗುರು ಶಂರರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಸಂಸ್ಥಾನ ಮಠದ ಪೀಠಾಧೀಶರಾದ ಶ್ರೀಮದ್ ಗಂಗಾಧರೇಂದ್ರಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಭೀಮಾಶಂಕರ ಮಠದಲ್ಲಿ ಶಿರಸಿಯ ಶ್ರೀ ಸರ್ವಜ್ಷೇಂದ್ರ ಸರಸ್ವತಿ ಪ್ರತಿಷ್ಠಾನದ ವತಿಯಿಂದ ಜರುಗಿದ ಸಿಂದಗಿ ಶ್ರೀ ಭಗವದ್ಗೀತಾ ಅಭಿಯಾನ ಹಾಗೂ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಧರ್ಮದ ಆತ್ಮವೇ ಆಧ್ಯಾತ್ಮ. ಭಗವದ್ಗೀತೆ ಆಧ್ಯಾತ್ಮ ಆತ್ಮ. ಹಾಗಾಗಿಯೇ ಮೋದಿಜಿಯವರು ಹೊರ ದೇಶದ ನಾಯಕರುಗಳಿಗೆ ಭಗವದೀತೆಯ ಕೃತಿ ಅರ್ಪಣೆ ಮಾಡುವ ಪರಿಪಾಠ ಹಾಕಿಕೊಂಡಿದ್ದಾರೆ. ಇದರಿಂದಾಗಿ ವಿದೇಶಿಯರಿಗೂ ಭಗವದ್ಗೀತೆಯ ಮಹತ್ವ ಅರಿಯಲು ಸಹಾಯವಾಗುತ್ತದೆ. ಅಲ್ಲದೇ ಜಗತ್ತಿನ ಎಲ್ಲ ಭಾಷೆಗಳಲ್ಲಿ ಭಾಷಾಂತರಗೊಂಡ ಕೆಲವೇ ಗ್ರಂಥಗಳಲ್ಲಿ ಭಗವದ್ಗೀತೆ ಪ್ರಥಮ ಸಾಲಿನಲ್ಲಿ ನಿಲ್ಲುತ್ತದೆ. ಸಿಂದಗಿಯ ಭೀಮಾಶಂಕರ ಮಹಾರಾಜರು ೩೦೦ ವರ್ಷಗಳ ಹಿಂದೆಯೇ ಆದಿಲ್ ಶಾಹಿ ಕಾಲದಲ್ಲಿ ತಮ್ಮ ದಿವ್ಯ ಶಕ್ತಿಯ ತಪ್ಪಿಸಿನ ಮೂಲಕ ಪರಿಕಿಯರ ಆಳ್ವಿಕೆಯ ಕಾಲದಲ್ಲೂ ಧರ್ಮ ರಕ್ಷಣೆ ಮಾಡಿದ ಮಹಾನುಭಾವರು ಎಂದರು.
ಈ ವೇಳೆ ಸಿಂದಗಿ ಭೀಮಾಶಂಕರ ಶ್ರೀಮಠದ ದತ್ತಪ್ಪಯ್ಯ ಮಹಾಸ್ವಾಮಿಗಳು ಮಾತನಾಡಿ, ಗುರುವಿನ ದರುಶನಕ್ಕೆ ಶಿಷ್ಯರು ಹೋಗುವುದು ವಾಡಿಕೆ. ಆದರೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮಠದ ಪೀಠಾಧೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಭಕ್ತರಿಗೆ ದರುಶನ ಕರುಣಿಸಲು ಭಕ್ತರಿದ್ದಲ್ಲಿಯೇ ಆಗಮಿಸಿದ್ದು ಸಿಂದಗಿಯ ಪುರಜನರ ಪುಣ್ಯ ಎಂದರು.
ಈ ವೇಳೆ ಸಂಚಾಲಕ ಸಂಗನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಗಳು ಸತತ ೧೭ವರ್ಷಗಳಿಂದ ಭಗವದೀತೆಯ ಅಭಿಯಾನವನ್ನು ರಾಜ್ಯದಲ್ಲಿ ಹಮ್ಮಿಕೊಳ್ಳುತ್ತಾ ಬಂದಿದ್ದು, ಇದರ ಸಾರವನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕೆನ್ನುವ ಮಹದಾಸೆ ಈ ಅಭಿಯಾನದ್ದಾಗಿದೆ ಎಂದರು.
ಈ ವೇಳೆ ಅಶೋಕ ಅಲ್ಲಾಪೂರ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ವಿಪ ಸದಸ್ಯ ಅರುಣ ಶಹಾಪೂರ, ಸಾಯಬಣ್ಣ ದೇವರಮನಿ, ಮಹಾಂತೇಶ ಪಟ್ಟಣಶೆಟ್ಟಿ, ಮಲ್ಲು ಪೂಜಾರ, ಆರ್.ಡಿ.ಕುಲಕರ್ಣಿ, ಪ್ರದೀಪ ಕುಲಕರ್ಣಿ, ಎಂ.ಎಸ್.ಮಠ, ಶ್ರೀಧರ ಕುಲಕರ್ಣಿ, ಶ್ರೀಶೈಲ ಯಳಮೇಲಿ, ಸುನಂದಾ ಯಂಪುರೆ, ಶೈಲಜಾ ಸ್ಥಾವರಮಠ, ಪ್ರತಿಭಾ ಚೆಳ್ಳಗಿ, ಅಂಬಿಕಾ ಪಾಟೀಲ, ಶಾರದಾ ಮಂಗಳೂರ, ಸತೀಶ ಹಿರೇಮಠ, ಜಗದೀಶ ಪಾಟೀಲ, ಶಕುಂತಲಾ ಹಿರೇಮಠ, ಸಿದ್ದನಗೌಡ ಪಾಟೀಲ, ಬಸವರಾಜ ಮರಬದ, ಆನಂದ ಶಾಬಾದಿ, ಎಂ.ಎಂ.ಹಂಗರಗಿ, ಮುತ್ತು ಮುಂಡೇವಾಡಗಿ, ರಾಘವೇಂದ್ರ ಕುಲಕರ್ಣಿ, ಶ್ಯಾಮಲಾ ಮಂದೇವಾಲ ಸೇರಿದಂತೆ ಊರಿನ ಗಣ್ಯರು, ಮಹಿಳೆಯರು ಇದ್ದರು.

