ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ಡಾ.ತೊಂಟದ ಸಿದ್ದರಾಮ ಮಹಾಸ್ವಾಮೀಜಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮೀಣ ಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸದಾ ಶಿಕ್ಷಣಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ಕೊಟ್ಟವರು ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಎಂದು ಗದಗ-ಡಂಬಳ ತೋಂಟದಾರ್ಯ ಮಠದ ಜಗದ್ಗುರು ಡಾ.ತೊಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಊರಿನ ಹಿರಿಯಮಠದಲ್ಲಿ ಭಾವೈಕ್ಯತೆ ವೇದಿಕೆಯಲ್ಲಿ ಶುಕ್ರವಾರ ಗದಗ-ಡಂಬಳದ ನಿರಂಜನ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ೬ನೆಯ ಪುಣ್ಯ ಸ್ಮರಣೆ, ಮರಣವೇ ಮಹಾನವಮಿ ಆಚರಣೆ ಹಾಗೂ ಪ್ರೊ. ಬಿ.ಆರ್.ಪೊಲೀಸಪಾಟೀಲ ರಚಿತ ಉರಿಯ ಗದ್ದುಗೆ ಪುಸ್ತಕ ಲೋಕಾರ್ಪಣೆ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿ, ಲಿಂಗೈಕ್ಯೆ ಶ್ರೀಗಳು ಸಾಮಾನ್ಯರಲ್ಲೂ ಓದಿನ ಅಭಿರುಚಿ ಬೆಳೆಸಿದವರು. ಅನ್ನ, ಅಕ್ಷರ ಮತ್ತು ಪುಸ್ತಕ ದಾಸೋಹಿ ಮೂರ್ತಿಯಾಗಿ ನಿರಂತರ ಸಮಾಜ ಸೇವೆ ಮಾಡಿದವರು. ಆತ್ಮ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಕಾಯಕಗಳನ್ನು ತಮ್ಮ ಬದುಕಿನುದ್ದಕ್ಕೂ ನಡೆಸಿಕೊಂಡು ಬಂದವರು. ಬಹುಮುಖ ವ್ಯಕ್ತಿತ್ವದ ಅವರ ಬದುಕು ನಮಗೇಲ್ಲ ಆದರ್ಶಪ್ರಾಯ. ದುಡ್ಡೆ ದೊಡ್ಡಪ್ಪ ಆದರೆ ವಿದ್ಯೆ ಅದರಪ್ಪ ಎಂಬ ತತ್ವದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದವರು. ಕನ್ನಡ ಆಡಳಿತ ಭಾಷೆಯಾಗಲು, ಮಹಾದಾಯಿ ಹೋರಾಟ, ವನ್ಯ ಜೀವಿ ಸಂರಕ್ಷಣೆಗೆ ಕಪ್ಪತಗುಡ್ಡ ಹೋರಾಟ, ಜಲ ರಕ್ಷಣೆ ಸೇರಿದಂತೆ ಹತ್ತು ಹಲವಾರು ಸಮಾಜಮುಖಿ ಹೋರಾಟಗಳನ್ನು ಮಾಡುವ ಮೂಲಕ ಸಮಾಜೋದ್ಧಾರ ಸೇವೆ ಮಾಡಿದ್ದಾರೆ ಎಂದು ಹೇಳಿದ ಅವರು ಶ್ರೀಗಳ ಹುಟ್ಟೂರಾದ ಸಿಂದಗಿಯಲ್ಲಿ ಅವರ ಹೆಸರಿನಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವ ಕನಸು ಗದುಗಿನ ಶ್ರೀಮಠ ಹೊಂದಿದೆ ಎಂದರು.
ಈ ವೇಳೆ ಮಾಜಿ ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿ, ಲಿಂಗೈಕ್ಯ ಶ್ರೀಗಳು ಕರ್ನಾಟಕದ ವಿವೇಕಾನಂದರಾಗಿ ಗಟ್ಟಿ ತೂಕದ ವ್ಯಕ್ತಿತ್ವ ಹೊಂದಿದವರು. ಅವರ ಸ್ಮರಣೆಗಾಗಿ ಸಿಂದಗಿಯಲ್ಲಿ ವಿಶೇಷ ಕೊಡುಗೆ ಸ್ಥಾಪನೆಯಾಗಬೇಕು ಎಂದು ಮನವಿ ಮಾಡಿದರು.
ಕೃತಿಯ ಲೇಖಕ ಪ್ರೊ. ಬಿ.ಆರ್.ಪೊಲೀಸಪಾಟೀಲ ಮಾತನಾಡಿ, ಲಿಂಗೈಕ್ಯ ಶ್ರೀಗಳನ್ನು ಪುಸ್ತಕದ ಸ್ವಾಮಿಜಿ ಎಂದೇ ಈ ಸಮಾಜ ಕರೆಯುತ್ತಿದೆ. ಅವರೊಬ್ಬ ಶೈಕ್ಷಣಿಕ ಸಂತನಾಗಿ ಸಮಾಜವನ್ನು ಬೆಳಗಿದವರು ಎಂದ ಅವರು ಇಂದಿನ ಕಾಲಘಟ್ಟದಲ್ಲಿ ಪುಸ್ತಕಗಳನ್ನು ಓದುವರ ಸಂಖ್ಯೆ ಕಡಿಮೆಯಾಗುತ್ತಿದೆ. ಉತ್ತಮ ಪುಸ್ತಕಗಳು ನಮ್ಮ ಬದುಕನ್ನೆ ಬದಲಾಯಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ನರೋಣದ ಶ್ರೀ ಮಹಾಂತೇಶ್ವರ ಮಠದ ಡಾ.ಗುರುಮಹಾಂತ ಮಹಾಸ್ವಾಮಿಗಳು, ಆಲಮೇಲದ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು, ಅಧ್ಯಕ್ಷತೆ ವಹಿಸಿದ ಊರಿನ ಹಿರಿಯಮಠದ ಶಿವಾನಂದ ಶಿವಾಚಾರ್ಯರು, ನಿವೃತ್ತ ಪ್ರಾಚಾರ್ಯ ಎಂ.ಡಿ.ಬಳಗಾನೂರ ಮಾತನಾಡಿ, ಲಿಂಗೈಕ್ಯ ಶ್ರೀಗಳು ಮಾಡಿದ ಸೇವೆ ಮತ್ತು ಅವರ ವ್ಯಕ್ತಿತ್ವದ ಕುರಿತಾಗಿ ಮಾತನಾಡಿದರು.
ಈ ವೇಳೆ ಉರಿಯ ಗದ್ದುಗೆ ಪುಸ್ತಕ ಲೋಕಾರ್ಪಣೆಗೊಂಡಿತು.
ವೇದಿಕೆ ಮೇಲೆ ಅಕ್ಕಲಕೋಟ ವಿರಕ್ತಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ರಟಗಲ್ ಹಿರೇಮಠದ ಶ್ರೀ ರೇವಣಸಿದ್ದ ಶಿವಾಚಾರ್ಯರು, ಯಂಕಂಚಿ ಹಿರೇಮಠದ ಶ್ರೀ ಅಭಿನವ ರುದ್ರಮುನಿ ಶಿವಾರ್ಚಾರು, ಕಲಕೇರಿ ಪಂಚರಂಗಿ ಸಂಸ್ಥಾನಮಠದ ಗುರು ಮಡಿವಾಳೇಶ್ವರ ಮಹಾಸ್ವಾಮಿಗಳು, ಯರನಾಳದ ಸಂಗನಬಸವ ಶ್ರೀಗಳು, ಕಲಬುರ್ಗಿ ರೋಜಾಮಠದ ಕೆಂಚಬಸವ ಶ್ರೀಗಳು, ಕೆರೂಟಗಿಯ ಶಿವಬಸವ ಶಿವಾರ್ಚಾರು, ಗದಗದ ಶಿವಪ್ರಸಾದ ದೇವರು, ಸಿಂದಗಿಯ ಲಿಂಗದೇವರು, ಡಾ.ಅರವಿಂದ ಮನಗೂಳಿ, ಶಿವಪ್ಪಗೌಡ ಬಿರಾದಾರ, ಶಾಂತೇಶ ದುರ್ಗಿ ಲಿಂಗಯ್ಯ ಚಿಕ್ಕಯ್ಯನಮಠ ಇದ್ದರು. ಕಾರ್ಯಕ್ರಮದಲ್ಲಿ ಶ್ರೀಮಠದ ಅನೇಕ ಸದ್ಭಕ್ತರು ಭಾಗವಹಿಸಿದ್ದರು.
ವಾದ್ಯ ವೈಭವಗಳೊಂದಿಗೆ ಮೆರವಣಿಗೆ
ಶ್ರೀಗಳ ಭಾವಚಿತ್ರದ ಮೆರವಣಿಗೆಯು ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಎಚ್.ಜಿ.ಹೈಸ್ಕೂಲ ಮೈದಾನದಿಂದ ಪ್ರಾರಂಭವಾಗಿ ಸ್ವಾಮಿ ವಿವೇಕಾನಂದ ವೃತ್ತ, ಲಿಂ.ಡಾ ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆ ಮಾರ್ಗವಾಗಿ ಸಾಗಿ ಶ್ರೀಮಠಕ್ಕೆ ತಲುಪಿತು.

