ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಗೂಡಂಗಡಿಗಳನ್ನು ತೆರವುಗೊಳಿಸುವ ಕಾರ್ಯ ಯಾವುದೇ ಕಾಲಕ್ಕೂ ನಿಲ್ಲಿಸುವುದಿಲ್ಲ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರವನ್ನು ಸುಂದರಗೊಳಿಸಲು ಪಣತೊಟ್ಟಿರುವೆ. ಇದರಲ್ಲಿ ಯಾವುದೇ ಗೂಡಂಗಡಿಗಳನ್ನು ತೆರವುಗೊಳಿಸಲು ಯಾರಿಗೂ ಒತ್ತಾಯ ಮಾಡಿಲ್ಲ. ಎಲ್ಲರೂ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸುತ್ತಿದ್ದಾರೆ. ಆದರೆ ಮಾಜಿ ಶಾಸಕ ರಮೇಶ ಭೂಸನೂರ ಮತ್ತು ಸಂತೋಷ ಪಾಟೀಲ್ ಅವರು ತಿಳುವಳಿಕೆ ಉಳ್ಳವರು, ಅವರ ಈ ರೀತಿಯ ವರ್ತನೆ ಸರಿಯಲ್ಲ. ಜಿಲ್ಲಾಧಿಕಾರಿಗಳು ತೆರವುಗೊಳಿಸಲು ಅನುಮತಿ ನೀಡಿಲ್ಲ ಎಂದು ಹೇಳುವ ಅವರು ಡಿಸಿ ಅವರು ತೆರವುಗೊಳಿಸಬಾರದೆಂದು ಹೇಳಿದ್ದು ಪುರಾವೆ ಏನಾದರೂ ಇದ್ದರೆ ತೋರಿಸಬೇಕು. ನಾನು ಜಿಲ್ಲಾಧಿಕಾರಿಗಳ ಬಳಿ ಪರವಾನಿಗೆ ಕೇಳಲು ಹೋದಾಗ ಸ್ಥಳೀಯವಾಗಿ ಅಭಿವೃದ್ಧಿಪರ ಚಟುವಟಿಕೆಗಳಿಗೆ ನಮ್ಮ ಅನುಮತಿ ಬೇಕಾಗಿಲ್ಲ, ಸ್ಥಳೀಯವಾಗಿ ಇಲ್ಲಿಯ ವ್ಯವಸ್ಥೆಯನ್ನು ಸುಧಾರಣೆ ಮಾಡಲು ನೀವು ಸ್ವನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ ಎಂದರು.
೨೦ವರ್ಷದಿಂದ ಬಸ್ ನಿಲ್ದಾಣದ ಎದುರಿರುವ ಚರಂಡಿ ತುಂಬಿಹೋಗಿತ್ತು. ಅದನ್ನು ಮೂರು ದಿನಗಳಲ್ಲೇ ಸ್ವಚ್ಛಗೊಳಿಸಿದ್ದೇನೆ. ಬಿಜೆಪಿಯವರು ೧೩ವರ್ಷಗಳಿಂದ ತೆರವುಗೊಳಿಸದೇ ಇದ್ದ ಗೂಡಂಗಡಿಗಳನ್ನು ಈಗೇಕೆ ತೆರವುಗೊಳಿಸುತ್ತಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಇದರ ಅರ್ಥ ೧೩ವರ್ಷದಿಂದ ಅಭಿವೃದ್ಧಿ ಆಗದೇ ಇದ್ದರೆ ಈಗ ಅಭಿವೃದ್ಧಿ ಮಾಡಬಾರದು ಎಂದು ಅರ್ಥವೇ ಎಂದು ಪ್ರಶ್ನಿಸಿದ ಅವರು, ಇದರಲ್ಲಿ ನನ್ನ ಸ್ವಹಿತಾಸಕ್ತಿ ಇಲ್ಲ. ಬಡವರನ್ನು ನೋಯಿಸಬೇಕು ಎಂಬ ಇರಾದೆಯೂ ಇಲ್ಲ. ಪಟ್ಟಣವನ್ನು ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಮಾಡಬೇಕೆನ್ನುವ ಏಕೈಕ ಉದ್ದೇಶ ನನ್ನದು ಎಂದರು.
ಗೂಡಂಗಡಿಗಳೆಂದರೆ ತಳ್ಳುವ ಗಾಡಿಯ ಮೇಲೆ ವಸ್ತುಗಳನ್ನು ತೆಗೆದುಕೊಂಡು ಬಂದು ದಿನವೀಡಿ ವ್ಯಾಪಾರ ಮಾಡಿಕೊಂಡು ಸಾಯಂಕಾಲ ಗಾಡಿಗಳನ್ನು ಮನೆಗೆ ಒಯ್ಯುಯುವುದು. ಅದನ್ನು ಬಿಟ್ಟು ಅಲ್ಲಿ ಸುಸಜ್ಜಿತ ಶೇಡ್ಡುಗಳನ್ನು ನಿಲ್ಲಿಸಿ ಬೇರೆಯವರಿಗೆ ಬಾಡಿಗೆ ಕೊಡುವುದು ಅದು ಗೂಡಂಗಡಿ ಎನಿಸಿಕೊಳ್ಳುವುದಿಲ್ಲ. ನೂರಾರು ಜನರು ಈ ಕಾರ್ಯಕ್ಕೆ ಬೆಂಬಲಿಸುತ್ತಿರುವಾಗ ನಾಲ್ಕರು ಜನರಿಗಾಗಿ ಕಾರ್ಯ ಸ್ಥಗಿತಗೊಳಿಸುವ ಮಾತೆ ಇಲ್ಲ. ಶಾಸಕರು ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಅನುದಾನ ಪುರಸಭೆಗೆ ಒದಗಿಸಿಕೊಟ್ಟರೆ ಪಟ್ಟಣದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ ಎಂದು ಶಾಂತು ಬಿರಾದಾರ ಹೇಳಿದರು.
ಈ ವೇಳೆ ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಸಿಬ್ಬಂದಿ ಸಿದ್ದು ಅಂಗಡಿ, ಜೆಇ ಅಜರ್ ನಾಟಿಕಾರ್ ಇದ್ದರು.
ಬಜಾರ್ ಲೈನಗೆ ಅನ್ವಯಿಸದ ತೆರವು ಕಾರ್ಯ ಇಲ್ಲಿ ಏಕೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಎಲ್ಲ ಅಂಗಡಿ ಮಾಲೀಕರಿಗೆ ದಾಖಲಾತಿಗಳನ್ನು ಒದಗಿಸಲು ನೋಟಿಸ್ ಕಳುಹಿಸಿದ್ದೇನೆ. ಎಷ್ಟೇ ಪ್ರಭಾವಿಗಳಿದ್ದರೂ ರಸ್ತೆಯ ಮೇಲೆ ಅತಿಕ್ರಮಣ ಮಾಡಿದ್ದರೆ ತೆರವುಗೊಳಿಸುವ ಕಾರ್ಯ ಶೀಘ್ರ ಆರಂಭಿಸಲಾಗುವುದು ಎಂದು ಹೇಳಿದರು.
“ಅಂಬೇಡ್ಕರ್ ವೃತ್ತದ ಬಳಿಯಿರುವ ಅಂಗಡಿಗಳನ್ನು ತೆರವುಗೊಳಿಸಿದಾಗ ಪ್ರತಿಭಟನೆ ಮಾಡದೇ ಇದ್ದವರು ಬಸವೇಶ್ವರ ವೃತ್ತದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಮುಂದಾದಾಗ ಹೋರಾಟವೇಕೆ? ಅಲ್ಲಿ ಬಿಜೆಪಿ ಕಾರ್ಯಕರ್ತರ ಗೂಡಂಗಡಿಗಳು ಇರುವುದರಿಂದ ಮಾಜಿ ಶಾಸಕರು ಹಾಗೂ ಅವರ ಅನುಯಾಯಿಗಳು ತೆರವುಗೊಳಿಸಬಾರದು ಎಂದು ಪ್ರತಿಭಟನೆ ಮಾಡುವುದು ಸರಿಯಲ್ಲ.”
– ಶಾಂತವೀರ ಬಿರಾದಾರ
ಅಧ್ಯಕ್ಷರು, ಪುರಸಭೆ ಸಿಂದಗಿ

