ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಸಾರ್ವಜನಿಕರು ಕಟ್ಟಿರುವ ತೆರಿಗೆ ಹಣ, ಎಲ್ಲಿಗೆ ಹೋಗುತ್ತಿದೆ? ನಗರದಲ್ಲಿ ಕೆಲ ದಿನಗಳ ಹಿಂದಷ್ಟೇ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದ ವಾರ್ಡ್ ನಂಬರ್ ೨೪ರಲ್ಲಿ ಒಂದು ಮಗು ಜೀವವನ್ನೇ ಕಳೆದುಕೊಂಡು ಹಾಗೂ ಆಶ್ರಮ ರಸ್ತೆಯ ಹತ್ತಿರ ತಡೆಗೋಡೆ ಇಲ್ಲದ ಕಾರಣ ಕಳೆದ ವರ್ಷ ಮೂರು ಮಕ್ಕಳು ಜೀವ ಕಳೆದುಕೊಂಡರೂ ಕೂಡ ಮಹಾನಗರ ಪಾಲಿಕೆ ಗಾಢ ನಿದ್ರೆಯಿಂದ ಹೊರ ಬಂದಿಲ್ಲ ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಗರ ಪಾಲಿಕೆಯು ಅವಶ್ಯವಿರುವ ಸ್ಥಳಗಳಲ್ಲಿ ಸೂಕ್ತ ಡ್ರೈನೇಜ್ ವ್ಯವಸ್ಥೆ, ತಡೆಗೋಡೆಗಳು, ಅತಿಕ್ರಮಣಗೊಂಡ ರಾಜ ಕಾಲುವೆಗಳನ್ನು ಸ್ವಚ್ಛತೆ, ರಸ್ತೆಗಳು, ಬೀದಿ ದೀಪಗಳು ಜನತೆಗೆ ಅತೀ ಅವಶ್ಯವಿರುವ ಕೆಲಸ ಕಾರ್ಯಗಳನ್ನು ಮಾಡದೇ ಮೂಲಭೂತ ಸೌಕರ್ಯಗಳನ್ನು ಒದಗಿಸುವದು ಬಿಟ್ಟು, ಬಬಲೇಶ್ವರ ನಾಕಾದಲ್ಲಿ ಇಬ್ರಾಹಿಂ ಆದಿಲ್ ಶಾಹಿ ವೃತ್ತದ ಹೆಸರಿನಲ್ಲಿ ಹಾಗೂ ಹಾಸಿಂಪಿರ್ ದರ್ಗಾ ಹತ್ತಿರ (ಆರ್ಚ್ಗಳನ್ನು) ಕಮಾನುಗಳನ್ನು ನಿರ್ಮಿಸಲು ರೂ.೪೦ ಲಕ್ಷ (ನಲವತ್ತು ಲಕ್ಷ)ಗಳ ಟೆಂಡರ್ ಕರೆದು, ಸಾರ್ವಜನಿಕರು ಕಟ್ಟಿರುವ ತೆರಿಗೆ ಹಣವನ್ನು ದುಂದುವೆಚ್ಚು ಮಾಡಲು ಹೊರಟಿರುವ ಮಹಾನಗರ ಪಾಲಿಕೆಯ ಕಾರ್ಯವೈಖರಿಗೆ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ವಿಷಯವನ್ನು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ತೆರಿಗೆ ಹಣವನ್ನು ರಕ್ಷಿಸಿ ಮೂಲಭೂತ ಸಮಸ್ಯೆಗಳ ಬಗ್ಗೆ ಒತ್ತು ನೀಡಲು ಅಣ್ಣಿಗೇರಿ ಆಗ್ರಹಿಸಿದ್ದಾರೆ.

