ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ (ಸೂಕ್ಷ್ಮ ನೀರಾವರಿ) ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕಗಳ ನಿರ್ವಹಣೆ ಮತ್ತು ಗುಣ ನಿಯಂತ್ರಣ ಕುರಿತು ಅ.೨೧ರಿಂದ ೨೩ರವರೆಗೆ ಜಿಲ್ಲೆಯ ವಿಸ್ತರಣಾಧಿಕಾರಿಗಳಿಗೆ ತರಬೇತಿ ಜರುಗಿತು.
ತರಬೇತಿ ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ರೂಪಾ ಎಲ್. ಅವರು ಉದ್ಘಾಟಿಸಿ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸಿದ ವಿಸ್ತರಣಾಧಿಕಾರಿಗಳು ಸೂಕ್ಷ್ಮ ನೀರಾವರಿ ಘಟಕಗಳು ಹಾಗೂ ಟಾರ್ಪಲಿನ್ಗಳ ಗುಣಮಟ್ಟ ಪರಿಶೀಲನೆ, ಪರೀಕ್ಷಾ ಮಾದರಿ ತೆಗೆಯುವ ವಿಧಾನ ಕುರಿತು ಮಾಹಿತಿ ಪಡೆಯುವ ಮೂಲಕ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮೈಸೂರಿನ ಸಿಪೆಟ್ ಸಂಸ್ಥೆಯ ಅಧಿಕಾರಿಗಳಾದ ಡಾ.ಶ್ರೀಕಾಂತ, ರಘು ಹಾಗೂ ಬಾಲರಾಜ ರಂಗರಾವ್, ಜೈನ್ ಇರಿಗೇಷನ್ ಸಿಸ್ಟಮ್ಸ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಎಂ.ಕೆ.ಬಿರಾದಾರ, ಪ್ರಭಾಕರ ಯಾಳವಾರ ಅವರು ಸೂಕ್ಷ್ಮ ನೀರಾವರಿ ಅಳವಡಿಕೆಯ ಮಹತ್ವ, ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ, ಚಂದ್ರಕಾಂತ ಪವಾರ, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ವಿಜಯಲಕ್ಷ್ಮಿ ಚವ್ಹಾಣ, ಶ್ರೀಮತಿ ಪಾರ್ವತಿ ಪಾಟೀಲ, ಕೃಷಿ ಅಧಿಕಾರಿಗಳಾದ ಎಂ.ಆರ್.ಮೈದರಗಿ, ಲಿಂಗರಾಜ ತಾಳಿಕೋಟ, ಶ್ರೀಮತಿ ಗೀತಾ ಭಜಂತ್ರಿ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಫಾತಿಮಾ ಬಾನು ಸುತಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
