ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕವಿ ದಾರ್ಶನಿಕರನ್ನು ಮೀರಿದ ಜ್ಞಾನಿ ವಾಲ್ಮೀಕಿ. ಅವರನ್ನು ಜಾತಿಯಿಂದಲ್ಲ ನೀತಿಯಿಂದ ನೋಡಬೇಕಿದೆ ಎಂದು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ್ ಎನ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ‘ಪ್ರಸ್ತುತ ಸಾಮಾಜಿಕ ನೆಲೆಯಲ್ಲಿ ವಾಲ್ಮೀಕಿ ರಾಮಾಯಣ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವರ್ಣಾಶ್ರಮದ ಕಾಲಘಟ್ಟದಲ್ಲಿ ತನ್ನ ಅಪಾರವಾದ ಜ್ಞಾನದಿಂದ ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಮೇಧಾವಿ ವಾಲ್ಮೀಕಿ. ರಾಮಾಯಣದ ಪ್ರತಿಯೊಂದು ಪದದಲ್ಲಿಯೂ ವಿಶೇಷವಾದ ಅರ್ಥವಿದೆ. ಅದನ್ನು ಅರಿತುಕೊಂಡಾಗ ಮಾತ್ರ ವಾಲ್ಮೀಕಿಯ ಜ್ಞಾನದ ನಿಜವಾದ ಪರಿಚಯವಾಗುತ್ತದೆ. ನಾವು ಮನಷ್ಯರಾಗಿ ಹುಟ್ಟಿಲ್ಲ ಮನುಷ್ಯರಾಗಲು ಹುಟ್ಟಿದ್ದೇವೆ ಎಂಬುದನ್ನು ರಾಮಾಯಣ ನಮಗೆ ತೋರಿಸಿಕೊಡುತ್ತದೆ.
ರಾಮಾಯಣ ಕೇವಲ ಮನುಷ್ಯರನ್ನಷ್ಟೇ ಒಳಗೊಂಡಿಲ್ಲ, ಪ್ರಾಣಿ, ಪಕ್ಷಿ, ಮರಗಿಡಗಳು, ಪರಿಸರ ಎಲ್ಲವನ್ನೂ ಒಳಗೊಂಡಿದೆ. ಅಲ್ಲಿ ಪ್ರಜಾಪ್ರಭುತ್ವ, ಆಡಳಿತ, ಸಮಾನತೆ, ಸ್ತ್ರೀವಾದ, ಭ್ರಾತೃತ್ವ ಹೀಗೆ ಎಲ್ಲದರ ಪರಿಕಲ್ಪನೆ ಇದೆ ಎಂದು ಅಭಿಪ್ರಾಯಪಟ್ಟರು.
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಎಸ್. ಸೋಮನಾಳ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ರಾಮಾಯಣದ ಜೀವನ ಮೌಲ್ಯಗಳನ್ನು ನಾವು ಪಾಲನೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲ ಮಾತನಾಡಿ, ರಾಮಾಯಣ ಇಂದು ಹಲವು ಅವತರಣಿಕೆಗಳನ್ನು ಕಂಡಿದೆ, ಆದರೂ ಅದರ ಮೂಲ ತತ್ವ ಹಾಗೇ ಉಳಿದುಕೊಂಡಿದೆ. ರಾಮಾಯಣವು ನೋಡುವವರ ದೃಷ್ಟಿಕೋನವನ್ನು ಅವಲಂಭಿಸಿದೆ. ನಾವು ಯಾವ ಮನಸ್ಥಿತಿಯಿಂದ ಅದನ್ನು ವಿಶ್ಲೇಷಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದರು.
ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್. ಎಂ. ಚಂದ್ರಶೇಖರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ/ಪಂಗಡ ಘಟಕದ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಲ್ಮೀಕಿ ಅಧ್ಯಯನ ಪೀಠದ ಸಂಯೋಜಕ ಸಂದೀಪ್ ವಂದಿಸಿದರು. ಡಾ.ತಹಮೀನಾ ಕೋಲಾರ್ ಕಾರ್ಯಕ್ರಮ ನಿರೂಪಿಸಿದರು.

