ತುಘಲಕ್ ದರ್ಬಾರಿನಂತೆ ವರ್ತಿಸುತ್ತಿರುವ ಹಣಕಾಸು ವಿಭಾಗ | ನೇಮಕಾತಿಗೆ ಹೊಸ ನಿಯಮ ಕಾಲದೂಡುವ ಉಪಾಯ | ಮಾಜಿ ಎಂಎಲ್ಸಿ ಅರುಣ ಶಹಾಪುರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರ ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಬಗೆಗಿನ ತನ್ನ ನಿಲುವನ್ನು ಸ್ಪಷ್ಟಪಡಿಸುವ ಕಾಲ ಇದೀಗ ಪಕ್ವವಾಗಿದೆ. ಈಗಾಗಲೇ ಸೇವೆ ಸಲ್ಲಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರು ನಿವೃತ್ತಿಯ ಅಂಚಿನಲ್ಲಿದ್ದು, ಸರಕಾರದ ಯಾವುದೇ ವೇತನ ತೆಗೆದುಕೊಳ್ಳದೇ ನಿವೃತ್ತಿಯಾಗುವುದರಿಂದ ಅವರ ಕೌಟುಂಬಿಕ ಹಾಗೂ ಆರ್ಥಿಕ ಅಭದ್ರತೆಗೆ ಸರಕಾರವೇ ನೇರ ಹೊಣೆಯಾಗುತ್ತಿದೆ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಂಗಳವಾರ ಸಂಜೆ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೫ರ ನಂತರ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳಿಗಾಗಿ ಸರಕಾರವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಹೊಸ ನಿಯಮ ಜಾರಿ ಮಾಡಿದ್ದು, ಆದರೆ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕೇತರ ಸಿಬ್ಬಂದಿಯ ನೇಮಕಾತಿ ಇಲ್ಲ. ಅಲ್ಲದೇ ಗಣಕಯಂತ್ರದ ವ್ಯವಸ್ಥೆಯಿಲ್ಲ. ಆನ್ಲೈನ್ ಮಾಡಬೇಕಾದರೆ ಸಾಫ್ಟ್ವೇರ್ ಅಭಿವೃದ್ದಿ ಪಡಿಸಬೇಕು. ಅದಕ್ಕಾಗಿ ವರ್ಷಗಟ್ಟಲೇ ಅವಧಿಬೇಕು. ಇದರ ಒಟ್ಟಾರೆ ಉದ್ದೇಶ ಸರಕಾರ ಹುದ್ದೆಗಳನ್ನು ಅನುದಾನಕ್ಕೆ ಒಳಪಡಿಸಿ ಆದೇಶ ಹೊರಡಿಸಲು ಕಾಲದೂಡುವ ಉಪಾಯವೇ ಹೊರತು ಬೇರೆನೂ ಅಲ್ಲ ಆರೋಪಿಸಿದರು.
ಕೆಲವೊಂದು ಶಿಕ್ಷಣ ಸಂಸ್ಥೆಗಳನ್ನು ೧೯೯೫ರ ನಂತರ ಅನುದಾನಕ್ಕೆ ಒಳಪಡಿಸಲು ಹೊರಡಿಸಲಾದ ಸುತ್ತೋಲೆಯಲ್ಲಿ ವಿಧಿಸಿರುವಂತಹ ಕಟ್ಟುಪಾಡುಗಳು ಶಿಕ್ಷಣ ಸಂಸ್ಥೆಗಳು ಅನುದಾನಕ್ಕೊಳಪಡಲು ಆಗದೇ ಇರುವಷ್ಟು ಕಠಿಣವಾಗಿವೆ. ಅನುದಾನಕ್ಕೆ ಒಳಪಟ್ಟ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡಲು ಕಡತಗಳನ್ನು ಹಣಕಾಸು ವಿಭಾಗದ ಅನುಮೋದನೆ ಪಡೆಯಲು ಕಳುಹಿಸಬೇಕೆಂಬ ಹೊಸ ನಿಯಮ ಜಾರಿ ಮಾಡಿದ್ದು, ಇದು ಭ್ರಷ್ಟತನಕ್ಕೆ ಮಾರ್ಗ ಮಾಡಿಕೊಡುವುದಲ್ಲದೇ ಹಣಕಾಸು ವಿಭಾಗ ತುಘಲಕ್ ದರ್ಬಾರಿನಂತೆ ವರ್ತಿಸುತ್ತಿದೆ. ಇಲ್ಲಿಂದ ಕಡತಗಳು ಅನುಮೋದನೆಗೊಂಡು ಹೊರಬರಬೇಕಾದರೆ ಅಭ್ಯರ್ಥಿಯು ತನ್ನ ಹೊಲ-ಮನೆ ಮಾರಬೇಕಾದ ಅನಿವಾರ್ಯತೆಯಿದೆ. ಇದು ಹೊಲ ಮಾರಿ ಭಾವಿ ತೊಡಿದ ಹಾಗಿದೆ ಎಂದರು.
ಜೋಳಿಗೆ ಹಾಕಿ ಸಂಸ್ಥೆ ಕಟ್ಟಿದ ಮಹಾನುಭಾವರು ಸರಕಾರದ ದ್ವಿಮುಖ ನೀತಿಯಿಂದಾಗಿ ಮುಚ್ಚುವ ಸ್ಥಿತಿಯಲ್ಲಿದ್ದು, ಅಭ್ಯರ್ಥಿಗಳ ಸ್ಥಿತಿ ಮುಳ್ಳಿನ ಮೇಲೆ ನಡೆದಂತಿದೆ. ಒಟ್ಟಾರೆಯಾಗಿ ಸರಕಾರ ಶಿಕ್ಷಕರ ರಕ್ಷಣೆ ಮಾಡಲು ಕಾರ್ಯಪ್ರವೃತ್ತವಾಗಬೇಕು. ಇಲ್ಲದಿದ್ದರೆ ಶಿಕ್ಷಣದ ವ್ಯವಸ್ಥೆಯೇ ಹದಗೆಡುವ ದಿನಮಾನ ದೂರವಿಲ್ಲ ಎಂದು ಅರುಣ ಶಹಾಪೂರ ವಿಷಾದ ವ್ಯಕ್ತಪಡಿಸಿದರು.
ಈ ವೇಳೆ ಭೀಮಾಶಂಕರ ತಾರಾಪೂರ, ಸಿದ್ದನಗೌಡ ಪಾಟೀಲ ಕನ್ನೊಳ್ಳಿ, ಶಿವಾನಂದ ರೋಡಗಿ, ಮಲ್ಲಿಕಾರ್ಜುನ ಅಲ್ಲಾಪೂರ, ಜಗದೀಶ ಪಾಟೀಲ ಇದ್ದರು.
“೩೦ ವರ್ಷಗಳಿಂದ ಸರಕಾರದ ಯಾವುದೇ ಅನುದಾನವಿಲ್ಲದೇ ನಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವುದು ಕಷ್ಟಕರ. ಸಂವಿಧಾನದ ಪ್ರಕಾರ ೮ನೆಯ ತರಗತಿಯವರೆಗೆ ಉಚಿತ ಕಡ್ಡಾಯ ಶಿಕ್ಷಣ ಕೊಡಬೇಕಿದೆ. ಈ ಆಶಯ ಈಡೇರಿಸುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಂಹಪಾಲು ಇದೆ. ತಮ್ಮ ಬೇಡಿಕೆಗಾಗಿ ಪ್ರತಿಭಟನೆ ನಿರತರಾದ ಶಿಕ್ಷಕರ ಬೇಡಿಕೆಗಳಿಗೆ ಕ್ಯಾರೇ ಎನ್ನದ ಸರಕಾರದ ನಿಲುವು ಖಂಡನೀಯ.”
– ಅರುಣ ಶಹಾಪೂರ
ವಿಪ ಮಾಜಿ ಸದಸ್ಯರು

