ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಯುವಜನಾಂಗ ದೇಶಿಯವಾದ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಮಹತ್ವ ನೀಡಬೇಕು ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.
ಪಟ್ಟಣದಲ್ಲಿ ಗೆಳೆಯರ ಬಳಗದಿಂದ ಇತ್ತೀಚಿಗೆ ಜರುಗಿದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಯುವಜನತೆ ಈಗೀಗ ಕ್ರಿಕೆಟ್, ಟೆನಿಸ್, ಪುಟ್ಬಾಲ್ನಂತ ಕ್ರೀಡೆಗಳತ್ತ ಹೆಚ್ಚಾಗಿ ಗಮನ ಹರಿಸುತ್ತಿದ್ದಾರೆ. ಆದರೆ ಇವುಗಳು ಮನರಂಜನೆ ಮಾತ್ರ ನೀಡಬಹುದು ವಿನಹಃ ದೈಹಿಕ ಬೆಳವಣಿಗೆಗಳನ್ನಲ್ಲ. ಆದ್ದರಿಂದ ಮಾನಸಿಕ, ದೈಹಿಕ ಬೆಳವಣಿಗೆಗೆ ಪೂರಕವಾದ ಗ್ರಾಮೀಣ ಕ್ರೀಡೆಗಳೆನಿಸಿದ ಕುಸ್ತಿ, ಕಬಡ್ಡಿಯಂತ ಆಟಗಳ ಕುರಿತು ಗಮನ ನೀಡಬೇಕು ಎಂದರು.
ಮಾಜಿಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಇಂದು ಗೆಳೆಯರ ಬಳಗದಿಂದ ಕೈಗೊಂಡಿರುವ ಕುಸ್ತಿ ಪಂದ್ಯಾವಳಿ ಅತ್ಯಂತ ಸಮಯೋಚಿತ. ಇಂತಹ ದೇಶಿಯ ಕ್ರೀಡಾಕೂಟಗಳು ಇಂದು ಅಗತ್ಯವಾಗಿವೆ ಎಂದರು.
ಪಂದ್ಯಾವಳಿಯಲ್ಲಿ ಮಕ್ಕಳು ಸಹಿತ ಹಿರಿಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಪೈನಲ್ ಪಂದ್ಯಾವಳಿಯ ಸಮಯದಲ್ಲಿ ತುಂತುರು ಮಳೆಯಿಂದ ಅಡಚಣೆಯಾದ ಕಾರಣ ಜೊತೆಗೆ ಫಲಿತಾಂಶ ಸಮನಾದ ಕಾರಣ ಇಬ್ಬರೂ ಸ್ಪರ್ಧಿಗಳಿಗೆ ಬಹುಮಾನದ ಮೊತ್ತವನ್ನು ಹಂಚಲಾಯಿತು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ರಾಜಕುಮಾರ ಸಿಂದಗೇರಿ, ಪ್ರಕಾಶ ಗುಡಿಮನಿ, ಸಂಪತ್ ಜಮಾದಾರ, ಪ್ರಕಾಶ ಮಲ್ಲಾರಿ, ರಮೇಶ ಈಳಗೇರ, ಕಾಸು ವಾಡೇದಮನಿ, ಸೋಮು ದೇವೂರ, ಶಾಂತೇಶ ದುರ್ಗಿ, ಸಲಾಹುದ್ಧಿನ್, ರಾಜು ಕಾಖಂಡಕಿ ಸೇರಿದಂತೆ ಪಟ್ಟಣ ಪಂಚಾಯಿತಿ ಹಾಗೂ ಗೆಳೆಯರ ಬಳಗದ ಸದಸ್ಯರು, ಸ್ಪರ್ಧಾಳುಗಳು ಇದ್ದರು.

