ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಜಿಫೆಸ್ಟ್ ಸಮ್ಮೇಳನಗಳು ಪರೀಕ್ಷೆ ತಯಾರಿಯಲ್ಲಿರುವ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯ ಸಮಕುಲಪತಿ ಡಾ. ಅರುಣ ಇನಾಮದಾರ ಹೇಳಿದರು.
ಡೀಮ್ಡ್ ವಿವಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದಲ್ಲಿ ಅ.18 ಶುಕ್ರವಾರ ನಡೆದ ಸ್ನಾತಕೋತ್ತರ ಪದವಿ ಪ್ರಾಯೋಗಿಕ ಪರೀಕ್ಷೆ ಆಧಾರಿತ ಮುಂದುವರೆದ ವೈದ್ಯಕೀಯ ಶಿಕ್ಷಣ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇಂಥ ಸಮ್ಮೇಳನಗಳಲ್ಲಿ ಅನುಭವಿ ಮತ್ತು ನುರಿತ ಪ್ರಾಧ್ಯಾಪಕರು ಭಾಗವಹಿಸುವುದರಿಂದ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಸಂದೇಹಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಮಹಾವಿದ್ಯಾಲಯದಲ್ಲಿ ವಿಶಿಷ್ಠ ಮತ್ತು ನವೀನ ಪ್ರಾಯೋಗಿಕ ಸಮ್ಮೇಳನ ಹಾಗೂ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯದ ಖ್ಯಾತ ವೈದ್ಯಕೀಯ ಲೇಖಕ ಹಾಗೂ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನ ಸಹಾಯಕ ಡೀನ್ ಡಾ. ರಾಜಗೋಪಾಲ ಶೆಣೈ ಅವರು ವಿದ್ಯಾರ್ಥಿಗಳಿಗೆ ಸರ್ಜಿಫೆಸ್ಟ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಅಲ್ಲದೇ, ಬಿ.ಎಲ್.ಡಿ.ಇ ಆಸ್ಪತ್ರೆಗೆ ತಾವು ನೀಡುತ್ತಿರುವ 4 ನೇ ಭೇಟಿ ಇದಾಗಿದ್ದು, ಇಲ್ಲಿಯ ಅಭಿವೃದ್ಧಿ ಕಾರ್ಯಗಳು ಪ್ರಶಂಸಾರ್ಹವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಮತ್ತು ಸಂಘಟನಾ ಅಧ್ಯಕ್ಷ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಣಕು ಪರೀಕ್ಷೆಯನ್ನು ಪ್ರಥಮ ಬಾರಿಗೆ ಆಯೋಜಿಸಿದ್ದು, ಇದಕ್ಕೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಜಿಫೆಸ್ಟ ಮುಖ್ಯ ಪ್ರಾಯೋಗಿಕ ಪರೀಕ್ಷೆಯ ಎಲ್ಲ ಬಗೆಯ ವಿಭಾಗಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಈ ಸಮ್ಮೇಳನದಲ್ಲಿ ರಾಜ್ಯದ ಶಸ್ತ್ರ ಚಿಕಿತ್ಸಾ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಹುಬ್ಬಳ್ಳಿ ಕೆ.ಎಂ.ಸಿ. ಪ್ರಾಚಾರ್ಯ ಡಾ.ಗುರುಶಾಂತಪ್ಪ ಯಲಗಚ್ಚಿನ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ ಬಳೂರಕರ, ಸಂಘಟನಾ ಕಾರ್ಯದರ್ಶಿ ಡಾ.ದಯಾನಂದ ಬಿರಾದಾರ, ಬೆಳಗಾವಿ ಜೆ.ಎನ್.ಎಂ.ಸಿ ಡಾ.ಶ್ರೀಶೈಲ ಮೆಟಗುಡ್ಡ, ಗದುಗಿನ ಜಿಮ್ಸ ಡಾ.ಜ್ಯೋತಿ ಕರೆಗೌಡರ, ಬಾಗಲಕೋಟೆ ಎಸ್ಎನ್ಎಂಸಿ ಡಾ.ಈಶ್ವರ ಕಲಬುರ್ಗಿ, ಸೋಲಾಪುರದ ಅಶ್ವಿನಿ ಮೆಡಿಕಲ್ ಕಾಲೇಜು ಡಾ.ಲಕ್ಷ್ಮಣ ಅಹಿರಸಂಗ, ಹುಬ್ಬಳ್ಳಿಯ ಖ್ಯಾತ ಸರ್ಜನ್ ಡಾ.ಚೇತನ ಹೊಸಕಟ್ಟಿ, ಬಿ.ಎಲ್.ಡಿ.ಇ. ಡೀಮ್ಡ್ ವಿವಿ ಡೀನ್ ಫ್ಯಾಕಲ್ಟಿ ಆಫ್ ಮೆಡಿಸಿನ್ ಡಾ.ತೇಜಸ್ವಿನಿ ವಲ್ಲಭ, ಡಾ.ವಿಜಯಾ ಪಾಟೀಲ, ಡಾ.ಶೃತಿ ಶೀಳಿನ, ಉಪಪ್ರಾಚಾರ್ಯ ಡಾ. ಎಂ.ಬಿ.ಪಾಟೀಲ, ಪ್ರಾಧ್ಯಾಪಕರಾದ ಡಾ.ರವಿಕುಮಾರ ಚೌಧರಿ, ಡಾ.ಪ್ರಸಾದ ಸಾಸನೂರ, ಡಾ.ಗಿರೀಶ ಕುಲ್ಲೊಳ್ಳಿ, ಡಾ.ನಿಶಿಕಾಂತ ಗುಜರ, ಡಾ.ಸುಶೀಲಾ ಗರಗ, ಡಾ.ಆನಂದ ಝಳಕಿ, ಡಾ.ರಾಜಕುಮಾರ ಹಿರೇಮಠ, ಡಾ.ಸಂಜೀವ ರಾಠೋಡ, ಡಾ.ಶೃತಿ ಶೀಳಿನ, ಡಾ.ವೀಣಾ, ಡಾ.ಮಂಜುನಾಥ ಸಾವಂತ, ಡಾ.ನಾಗರಾಜ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

