ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ವಕ್ಫ್ ಆಸ್ತಿ ಎಂದು ನೋಟಿಸು ಬಂದಿರುವ ಹಿನ್ನೆಲೆಯಲ್ಲಿ ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ” ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ರವಿವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ತಿಕೋಟಾ ತಾಲೂಕಿನ ಹೊನವಾಡ ಕೆಲವು ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನೋಟಿಸ್ ಜಾರಿ ಮಾಡುತ್ತಾರೆ ಎಂಬ ಆತಂಕದ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಮಾಡಿದ ಹೊನವಾಡದ ಕೆಲವು ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, “ಅನಗತ್ಯವಾಗಿ ಯಾವುದೇ ಖಾಸಗಿ ಆಸ್ತಿ ಅಥವಾ ಜಮೀನುಗಳು ವಕ್ಫ್ ಹೆಸರಿನಲ್ಲಿ ದಾಖಲಾಗುವುದಿಲ್ಲ. ಯಾವುದೇ ನೋಟಿಸ್ ಪಡೆದರೆ ಅದಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ಈಗಾಗಲೆ ಜಿಲ್ಲಾಧಿಕಾರಿಗಳೊಂದಿಗೆ ಈ ವಿಷಯ ಚರ್ಚಿಸಿದ್ದೇನೆ. ಮುಂದಿನವಾರ ಜಿಲ್ಲಾ ಮಟ್ಟದ ಸಭೆಯನ್ನು ನಡೆಸಿ, ಕೂಲಂಕುಷವಾಗಿ ಎಲ್ಲ ವಿಷಯಗಳನ್ನು ಚರ್ಚಿಸಲಾಗುವುದು. ಜನರು ಅನಗತ್ಯವಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ” ಎಂದರು.
ಹೊನವಾಡದ ರೈತರು ಮಾತನಾಡಿ, “ನಾಲ್ಕೈದು ತಲೆಮಾರಿನಿಂದ ಹೊನವಾಡದಲ್ಲಿ ಸಾಗುವಳಿ ಮಾಡುತ್ತಾ ಬಂದಿರುವ ನಾವು ನಮ್ಮ ಕಬ್ಜೆಯಲ್ಲಿರುವ 89 ಸರ್ವೇಗಳ ಜಮೀನುಗಳ 1200 ಎಕರೆ ಪ್ರದೇಶವು ವಕ್ಫ್ ಆಸ್ತಿ ಎಂದು ಜಿಲ್ಲಾ ವಕ್ಫ್ ಸಂಸ್ಥೆ ಹೇಳುತ್ತಿದ್ದು, ಸಚಿವರು ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿ ಕೊಡಬೇಕು” ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ, ಗ್ರಾಮಸ್ಥರಾದ ಬಸವರಾಜ ಪಾಂಡೆಗಾವಿ, ವಿಠ್ಠಲ ಚವಳಚಿ, ಭೀಮು ದೇವನಾಯಕ, ಮಹಾದೇವ ಜಾಧವ, ಬಾಪು ಮೊಳೆ, ಭೀರಪ್ಪ ಪಾಂಡೆಗಾವಿ, ವಿಠ್ಠಲ ಗಡದಿ, ಧರೇಪ್ಪ ತೊದಲಬಾಗಿ, ರಮೇಶ ನಾಟಿಕಾರ, ಮುತ್ತು ಹಿರೇಮಠ, ರವಿ ಟಕ್ಕಳಕಿ, ಲಕ್ಷ್ಮಣ ಕಾತ್ರಾಳ, ಸಾಬು ಕಾತ್ರಾಳ, ಸಚಿನ ಮಾನೆ, ಗುರುಸಿದ್ದ ಗೊಟ್ಯಾಳ, ಮಂಜು ಗೊಳಚಿ ಸೇರಿದಂತೆ ಮತ್ತಿತರಿದ್ದರು.
ಅಲ್ಲದೇ, ಉಪಸ್ಥಿತರಿದ್ದ ತಹಶೀಲ್ದಾರ ಪ್ರಶಾಂತ ಚನಗೊಂಡ ಅವರಿಗೆ “ವಕ್ಫ್ ನೋಟಿಸು ಮತ್ತು ಸಂಬಂಧಿತ ಆಸ್ತಿಗಳ ಕುರಿತು ಸಂಪೂರ್ಣ ವಿವರಗಳನ್ನು ಮುಂದಿನ ಸಭೆಯಲ್ಲಿ ಒದಗಿಸುವಂತೆ” ಸಚಿವರು ಸೂಚಿಸಿದರು.

