ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಇಂದಿರಾ ನಗರ ಬಡಾವಣೆಯಲ್ಲಿ ತೆರವುಗೊಳಿಸಲಾದ ಶೆಡ್ ನ ನೊಂದ ದಲಿತ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ನಗರದ ಎಸ್ಸಿಎಸ್ಟಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ತಾಲೂಕು ದಂಡಾಧಿಕಾರಿಗಳ ಮೂಲಕ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.
ತೆರವು ಜಾಗೆಯಿಂದ ಶುರುವಾದ ಪ್ರತಿಭಟನೆ ಪಟ್ಟಣದ ತಂಗಡಗಿ ಮುಖ್ಯ ರಸ್ತೆ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯವರೆಗೆ ಸಾಗಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಡಿಎಸ್ಎಸ್ ಮುಖಂಡ ಹರೀಶ ನಾಟೆಕಾರ ಮಾತನಾಡಿ, ದುಡಿದು ತಿನ್ನುವ ನಮ್ಮ ಜನರ ಮನೆಗಳನ್ನು ನೆಲಸಮ ಮಾಡಲಾಗಿದೆ ಈ ಘಟನೆಯನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ನಿವಾಸಿಗಳ ಬಳಿ ಕೊಳಚೆ ಮಂಡಳಿ ನೀಡಿದ ಹಕ್ಕುಪತ್ರ, ನ್ಯಾಯಾಲಯದ ಸ್ಟೇ ಪ್ರತಿ ಇದ್ದರೂ ಕೂಡ ಯಾವುದನ್ನೂ ಲೆಕ್ಕಿಸಿಲ್ಲ. ಹುಡ್ಕೋ ಗೇಟ್ ಬಳಿ ಇರುವ ಬೆಂಗಳೂರು ಬೇಕರಿ ಕಿತ್ತದೇ ನಮ್ಮವರ ಮನೆಗಳನ್ನು ಕಿತ್ತಿದ ಇವರ ನಡವಳಿಕೆ ಎಸ್ಸಿಎಸ್ಟಿ ಜನಾಂಗದ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ ತೋರಿಸಿ ಕೊಡುತ್ತಿದೆ. ಕೂಡಲೇ ತೆರವುಗೊಳಿಸಿದ ಎಲ್ಲ ನೊಂದ ಕುಟುಂಬಗಳಿಗೆ ಪರಿಹಾರವನ್ನು ಘೋಶಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಇದೇ ವೇಳೆ ಡಿಎಸ್ಎಸ್ ನ ಹಿರಿಯ ಮುಖಂಡ ಡಿ.ಬಿ.ಮುದೂರ, ಪ್ರಮುಖರಾದ ಪ್ರಕಾಶ ಸರೂರ, ದೇವರಾಜ ಹಂಗರಗಿ ಮತ್ತೀತರರು ಮಾತನಾಡಿ ಘಟನೆಯನ್ನು ಖಂಡಿಸಿದರು. ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಪುರಸಭೆ ಸದಸ್ಯ ಶಿವಪ್ಪ ಶಿವಪೂರ, ಪರಶುರಾಮ ನಾಲತವಾಡ, ಪರಶುರಾಮ ಮುರಾಳ, ಬಲಭೀಮ ನಾಯಕಮಕ್ಕಳ, ಶೇಕು ಆಲೂರ ಸೇರಿದಂತೆ ಹಲವರು ಇದ್ದರು.
ನೆಲಸಮ ಮಾಡಲಾದ ಶೆಡ್ ಮನೆಗಳ ೩೫ಕುಟುಂಬಗಳಿಗೆ ತಲಾ ೩ಲಕ್ಷ ಪರಿಹಾರ ಧನ ವಿತರಿಸಬೇಕು. ನ್ಯಾಯಾಂಗ ನಿಂದನೆ ಮಾಡಿರುವ ಪುರಸಭೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಯ ಮೇಲೆ ನ್ಯಾಯಾಂಗ ನಿಂದನೆ ಮತ್ತು ಎಸ್ಸಿಎಸ್ಟಿ ಕೇಸು ದಾಖಲಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

