ಮೋರಟಗಿಯಲ್ಲಿ ಈದ್ ಮಿಲಾದ್ ಆಚರಣೆ | ಶಾಸಕ ಅಶೋಕ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಮೊಹಮ್ಮದ ಪೈಗಂಬರ್ ಅವರು ಕುರಾನ್ ಮೂಲಕ ಪ್ರಪಂಚಕ್ಕೆ ಅಮೂಲ್ಯ ಸಂದೇಶ ನೀಡಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಇಲ್ಲಿನ ಅಂಜುಮನ್ ಎ ಇಸ್ಲಾಂ ಸಮಿತಿ ಈದ್ ಮಿಲಾದ್ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೊಹಮದ್ ಪೈಗಂಬರ್ ಅವರು ೫ನೇ ಶತಮಾನದಲ್ಲಿ ಹೇಳಿದ ಸಂದೇಶವನ್ನೇ ಬಸವಣ್ಣನವರು ೧೨ನೇ ಶತಮಾನದಲ್ಲಿ ಹೇಳಿದ್ದಾರೆ. ಇವರಿಬ್ಬರಿಗೂ ಮುನ್ನ ಗೌತಮ ಬುದ್ಧರು ಕೂಡ ತಮ್ಮ ಉಪದೇಶಗಳಲ್ಲಿ ಇದೇ ಸಂದೇಶಗಳನ್ನು ಸಾರಿದ್ದಾರೆ. ಇವರೆಲ್ಲ ಜಾತಿಗಿಂತ ಮಾನವಕುಲಕ್ಕೆ ಒತ್ತು ಕೊಟ್ಟಿದ್ದಾರೆ.
ಕುರಾನ್ ನಲ್ಲಿ ದಾನ, ಧರ್ಮಕ್ಕೆ ಆದ್ಯತೆ ನೀಡಲಾಗಿದೆ. ಬಡವರಿಗೆ ಸಹಾಯ ಮಾಡಬೇಕು ಮತ್ತು ಇನ್ನೊಂದು ಧರ್ಮಕ್ಕೆ ಅನ್ಯಾಯವಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಎಲ್ಲರೂ ಇಸ್ಲಾಂ ಧರ್ಮದ ಆಚಾರ ವಿಚಾರಗಳನ್ನು ಅನುಸರಿಸಬೇಕು ಎಂದರು.
ಇಂದು ಗಣೇಶ ಉತ್ಸವವನ್ನು ಇಸ್ಲಾಂ ಬಾಂಧವರು ಕೂಡ ಆಚರಿಸುತ್ತಿದ್ದಾರೆ. ಆಲಮೇಲದಲ್ಲಿ ಮಹಿಬೂಬ್ ಮಸಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿದ್ದಾರೆ. ಇದೇ ನಿಜವಾದ ಸೌಹಾರ್ದ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಜೇರಟಗಿ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು.
ಜಿಲ್ಲಾ ದಸಂಸ ಕಾರ್ಯದರ್ಶಿ ವೈ.ಸಿ.ಮಯೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೇರಟಗಿ ವೀರಕ್ತಮಠ ಮಹಾಂತಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಬಿಳಿಯಾನಿಸಿದ್ದ ಒಡಿಯರ್ ಸಾನಿದ್ಯ ವಹಿಸಿದ್ದರು, ಶ್ರೀಶೈಲಗೌಡ ಪಾಟೀಲ್, ಮಾಜಿ ಜಿ ಪಂ ಸದಸ್ಯ ಎನ್ ಆರ್ ತಿವಾರಿ, ಸಿಂದಗಿ ಪುರಸಭೆ ನೂತನ ಅಧ್ಯಕ್ಷ ಶಾಂತನಗೌಡ ಬಿರಾದಾರ, ಹಾಸಿಮಪೀರ್ ಆಳಂದ, ವೀರನಗೌಡ ಪಾಟೀಲ್, ನಿಂಗನಗೌಡ ಪಾಟೀಲ್, ಜಿ ಕೆ ನೆಲ್ಲಗಿ, ಸಿದ್ದಣ್ಣಸಾಹು ಮಸಳಿ, ಎಂ ಟಿ ಸಿಂಗೆ, ಮೈಬುಸಾಬ ಕಣ್ಣಿ, ರಜಾಕ ಬಾಗವಾನ, ಹಸನಸಾಬ ಶಿರಾಷ್ಯಾಡ್, ಸಲೀಮ್ ಕಣ್ಣಿ, ಸೇರಿದಂತೆ ಸರ್ವ ಸಮುದಾಯದ ಹಿರಿಯರು, ಯುವಕರು ಇದ್ದರು.
ಪೋಲೀಸ್ ಅಧಿಕಾರಿಗಳಿಗೆ ಸನ್ಮಾನ
ಕಳೆದ ವರ್ಷ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಸಿಂದಗಿ ತಾಲೂಕಿನ ಕೆಲವು ಹಳ್ಳಿಯಲ್ಲಿ ಪಟ್ಟಣದಲ್ಲಿ ಗಲಾಟೆಗಳು ನಡೆದು ಕೇಸ್ ದಾಖಲಾಗಿದ್ದವು. ಈ ವರ್ಷ ಪ್ರತಿ ಹಳ್ಳಿಗಳಲ್ಲಿ ಸಂಚರಿಸಿ ಶಾಂತಿಸಭೆ ಮಾಡುವ ಮೂಲಕ ಶಿಸ್ತುಬದ್ದವಾಗಿ ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ಗಣೇಶ ವಿಸರ್ಜನೆ ಯಶಸ್ವಿಯಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಪಿಐ ನಾನಾಗೌಡ ಪಾಟೀಲ್ ಹಾಗೂ ಪಿಎಸ್ಐ ಆರಿಫ್ ಮುಷ್ಯಾಫಿರ್ ಅವರಿಗೆ ಗ್ರಾಮಸ್ಥರು ಹಾಗೂ ಅಂಜುಮನ್ ಸಮೀತಿ ಪರವಾಗಿ ಜಂಟಿಯಾಗಿ ವಿಶೇಷ ಸನ್ಮಾನ ಮಾಡಲಾಯಿತು.

