ಕೋರವಾರ ಮಹಾಂತೇಶ್ವರ ಹಿರೇಮಠದಲ್ಲಿ ಜರುಗಿದ ಧರ್ಮಸಭೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಎಲ್ಲ ಧರ್ಮಗಳ ತಿರುಳು ಮಾನವ ಕಲ್ಯಾಣವಾಗಿದೆ ಎಂದು ಅಫಜಲಪೂರ ಸಂಸ್ಥಾನ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರಶ್ರೀಗಳು ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದ ಮಹಾಂತೇಶ್ವರ ಹಿರೇಮಠದಲ್ಲಿ ಭಾನುವಾರ ಜರುಗಿದ ಧರ್ಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವು ನುಡಿದಂತೆ ನಡೆಯುವುದೇ ಧರ್ಮ. ನುಡಿಯುವುದು ಒಂದು, ನಡೆಯುವುದು ಇನ್ನೊಂದು ಆದಾಗ ಸಮಾಜದ ಎಲ್ಲ ರಂಗಗಳಲ್ಲಿ ಅವ್ಯವಸ್ಥೆ, ಅರಾಜಕತೆ, ಅತೃಪ್ತಿಯ ಮನೋಭಾವ ಕಂಡು ಬರುತ್ತದೆ. ಇವುಗಳಿಗೆ ಧರ್ಮಸಭೆ, ಧಾರ್ಮಿಕ ಕಾರ್ಯಕ್ರಮಗಳು ಪರಿಹಾರವಾಗಿ ನೆಮ್ಮದಿ ನೀಡಬಲ್ಲವು ಎಂದರು.
ಸಾನಿಧ್ಯ ವಹಿಸಿದ್ದ ಮಾಗಣಗೇರಿ ಸಂಸ್ಥಾನ ಹಿರೇಮಠದ ಡಾ.ವಿಶ್ವಾರಾಧ್ಯಶ್ರೀಗಳು ಮಾತನಾಡಿ, ಧರ್ಮ ಎನ್ನುವುದು ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಇದ್ದ ಹಾಗೇ, ಅಂತೆಯೇ ಭೂಮಿತಾಯಿ, ಗಾಳಿ, ನೀರುಗಳಿಗೆ ಒಂದು ಧರ್ಮ ಹಾಗೂ ಜವಾಬ್ದಾರಿಯಿದೆ. ಆದ್ದರಿಂದ ನಾವು ಸಹ ನಮ್ಮ ಧರ್ಮ, ಜವಾಬ್ದಾರಿ ಅರಿತು ನಡೆಯಬೇಕು ಎಂದರು.
ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಧರ್ಮಸಭೆ ಉದ್ಘಾಟಿಸಿ ಮಾತನಾಡುತ್ತಾ, ಗುರುವಿನ ಸೇವೆಯಿಂದ, ಆಶೀರ್ವಾದಿಂದ ನಾವು ಏನನ್ನಾದರೂ ಪಡೆಯಬಹುದು ಎಂದರು.
ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರತಜ್ಞ ಪ್ರಭುಗೌಡ ಬಿ.ಎಲ್. ಮಾತನಾಡಿ, ಎಲ್ಲ ಸಂಪತ್ತುಗಳಿಗಿಂತ ಮಿಗಿಲಾದದು ಆರೋಗ್ಯ ಸಂಪತ್ತು. ಪ್ರತಿಯೊಬ್ಬರು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ನೇತೃತ್ವ ವಹಿಸಿದ ಸ್ಥಳೀಯ ಮಠದ ಬಸವಲಿಂಗಶ್ರೀಗಳು, ಕಡಕೋಳ ಮಡಿವಾಳೇಶ್ವರ ಸಂಸ್ಥಾನಮಠದ ರುದ್ರಮುನಿಶ್ರೀ, ಕೊಕನೂರ ಹಿರೇಮಠದ ಚನ್ನಮಲ್ಲಶ್ರೀಗಳು ಆಶೀರ್ವಚನ ನೀಡಿದರು. ನಂತರ ಮಹಾಪ್ರಸಾದ ಜರುಗಿತು.
ಪ್ರವಚನಕಾರ ಪುಟ್ಟರಾಜ ಶಾಸ್ತಿç, ಬಸನಗೌಡ ಪಾಟೀಲ(ಯಡೆಪೂರ), ಕೆ.ಶ್ರೀನಿವಾಸರೆಡ್ಡಿ, ಪ್ರಶಾಂತ ಕಟ್ಟಿಮನಿ, ಶರಣಕುಮಾರ ಯಾಳಗಿ, ಅಡವೀಶಕುಮಾರ ಬೆಳಗಾವಿ ಮಾಂತಪ್ಪ ಜಾಲವಾದಿ ಸೇರಿದಂತೆ ಗ್ರಾಮದ ಸದ್ಭಕ್ತರು ಇದ್ದರು.

