ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 18ನೇ ವಾರ್ಷಿಕ ಸಾಮಾನ್ಯ ಸಭೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಡಳಿತ ಮಂಡಳಿ, ಗ್ರಾಹಕರ ಸಹಕಾರ, ವಿಶ್ವಾಸ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಶ್ರಮದಿಂದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ 2023-24ನೇ ಸಾಲಿನಲ್ಲಿ ರೂ.18.81 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸೌಹಾರ್ದದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 18ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ 18 ಪರ್ಸೆಂಟೆಜ್ ಡಿವಿಡೆಂಡ್ ನೀಡಲಾಗುವುದೆಂದು ಘೋಷಿಸಿದರು.
2024-25ನೇ ಸಾಲಿಗೆ ನಮ್ಮ ಸೌಹಾರ್ದ ರೂ.5,000 ಕೋಟಿ ಬಂಡವಾಳದ ಗುರಿ ಹೊಂದಲಾಗಿದ್ದು, ಪ್ರಸ್ತುತ 49 ಕೋಟಿ ಶೇರು ಬಂಡವಾಳ, 3,453 ಕೋಟಿ ದುಡಿಯುವ ಬಂಡವಾಳ, 3,248 ಕೋಟಿ ಠೇವಣಿಗಳು, 2,051 ಕೋಟಿ ಸಾಲ ಮುಂಗಡ, 57 ಕೋಟಿ ಕಾಯ್ದಿಟ್ಟ ನಿಧಿ, 42 ಕೋಟಿ ನಿಶ್ಚಿತ ಆಸ್ತಿಗಳು, ರೂ.432 ಕೋಟಿ ಹೂಡಿಕೆ ಹೊಂದಿದೆ ಎಂದು ತಿಳಿಸಿದರು.
2023-24ನೇ ಸಾಲಿನಲ್ಲಿ ಸಿದ್ಧಸಿರಿ ಸಿಬ್ಬಂದಿ ಸುರಕ್ಷತಾ ನಿಧಿ ಯೋಜನೆಯಡಿ 13 ಸಿಬ್ಬಂದಿಗಳ ಕುಟುಂಬದ ಸದಸ್ಯರಿಗೆ ಚಿಕಿತ್ಸೆಗಾಗಿ ಮತ್ತು ಸಿಬ್ಬಂದಿ ಆಕಸ್ಮಿಕ ಮರಣ ಹೊಂದಿದ ಕುಟುಂಬಗಳಿಗೆ ರೂ.16.70 ಲಕ್ಷ ಸೌಲಭ್ಯ, ಭವಿಷ್ಯ ನಿಧಿ ಯೋಜನೆಯಡಿ 6 ಸಿಬ್ಬಂದಿಗಳಿಗೆ ರೂ. 23,68 ಲಕ್ಷ ಸೌಲಭ್ಯ ಕಲ್ಪಿಸಲಾಗಿದ್ದು, ಅಲ್ಲದೇ ಪ್ರತಿ ತಿಂಗಳು ರೂ.14 ಸಾವಿರ ಸಹಾಯ ಧನ ನೀಡಲಾಗುತ್ತಿದೆ. ಸಾಲಗಾರರ ಸುರಕ್ಷತಾ ಕ್ಷೇಮ ನಿಧಿ ಯೋಜನೆಯಡಿ 217 ಸಾಲಗಾರರ ಸುಮಾರು ರೂ.1.51 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಇಎಸ್ಐ ಯೋಜನೆಯಡಿ 5 ಸಿಬ್ಬಂದಿಗಳು ಹಾಗೂ ಮಾತೃತ್ವ ರಜೆ ಯೋಜನೆಯಡಿ 5 ಸಿಬ್ಬಂದಿಗಳು ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು.
ಬರದ ನಾಡು ವಿಜಯಪುರವನ್ನು ಮಲೆನಾಡನ್ನಾಗಿ ಮಾಡಲು ಹಾಗೂ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳ ಕುರಿತು ಹೆಚ್ಚಿನ ಪ್ರಚಾರ ಪಡಿಸಲು ವೃಕ್ಷೋತ್ಥಾನ ಹೆರಿಟೇಜ್ ರನ್ ಅಭಿಯಾನಕ್ಕೆ ನಮ್ಮ ಸಹಕಾರಿಯಿಂದ ರೂ.10 ಲಕ್ಷ ದೇಣಿಗೆ ಹಾಗೂ ಎಬಿವಿಪಿ ಚಿಂತನ ಮಂಥನ ಕಾರ್ಯಕ್ರಮಕ್ಕೆ ರು.50 ಸಾವಿರ, ಸಿದ್ದಗಂಗಾ ಮಠಕ್ಕೆ ರೂ.80 ಸಾವಿರ, ಶಿವಬಸವ ಯೋಗಾಶ್ರಮದ ವಜ್ರ ಮಹೋತ್ಸವಕ್ಕೆ ರೂ.1 ಲಕ್ಷ ದೇಣಿಗೆ ಹಾಗೂ ನಗರದಲ್ಲಿ 32 ಕಡೆಗಳಲ್ಲಿ ಶುದ್ದ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಬೋಜಾ ರಹಿತ ಸಾಲ
ನಾಡಿನ ಬಡ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ರಾಜ್ಯದಲ್ಲಿ ಪ್ರಥಮವಾಗಿ ಸೌಹಾರ್ದ ಸಹಕಾರಿ ಅಡಿಯಲ್ಲಿ ಸಂಸ್ಕರಣ ಘಟಕ ಮತ್ತು ಶೀತಲ ಘಟಕ ಸ್ಥಾಪಿಸಲಾಗಿದೆ. ದ್ರಾಕ್ಷಿ ಬೆಳೆಯುವ ಹಂಗಾಮಿನಲ್ಲಿ ಹಣದ ಅವಶ್ಯಕತೆ ಅನುಗುಣವಾಗಿ ಶೇ 15 ಬಡ್ಡಿ ದರದಲ್ಲಿ 1 ಎಕರೆ ದ್ರಾಕ್ಷಿಗೆ ರೂ.1 ಲಕ್ಷ ಸಾಲ ವಿತರಿಸಲಾಗುತ್ತದೆ. ಕೇಸರಿ ಸ್ವಾವಲಂಬಿ ಸಾಲ ಯೋಜನೆ, ಆಶ್ರಯ ಸಾಲ ಯೋಜನೆ, ಎಕ್ಸಪ್ರೆಸ್ ಸಾಲ ಯೋಜನೆ, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಯೋಜನೆ ಸಹ ಆರಂಭಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ 159 ಶಾಖೆಗಳು ಸಂಪೂರ್ಣ ಗಣಕೃತವಾಗಿದ್ದು, 16 ಸ್ವಂತ ಕಟ್ಟಡಗಳು, 22 ಖಾಲಿ ನಿವೇಶನಗಳನ್ನು ಹೊಂದಲಾಗಿದೆ. ವಿಜಯಪುರದಲ್ಲಿ 5100 ಟನ್ ಸಾಮಾರ್ಥ್ಯದ ಸಿದ್ಧಸಿರಿ ಕೋಲ್ಡ್ ಸ್ಟೋರೇಜ್, ಜೇವರ್ಗಿಯಲ್ಲಿ ಸಿದ್ಧಸಿರಿ ಇಂಧನ ಕೇಂದ್ರ, 5 ಸಿದ್ಧಸಿರಿ ಕೃಷಿ ಕೇಂದ್ರಗಳು (ವಿಜಯಪುರ, ಬಿಜ್ಜರಗಿ, ಬಬಲೇಶ್ವರ, ಸಿಂದಗಿ, ಝಳಕಿ), ಚಿಂಚೋಳಿಯಲ್ಲಿ ಪ್ರತಿ ದಿನ 5 ಸಾವಿರ ಟನ್ ಕಬ್ಬು ನುರಿಸುವ ಸಾಮಾರ್ಥ್ಯದ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಉತ್ಪಾದನಾ ಘಟಕವನ್ನು ಸ್ಥಾಪನೆ ಹಾಗೂ 22 ಸಿದ್ಧಸಿರಿ ಇ-ಸ್ಟಾಂಪ್ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.
ಇದೇ ವೇಳೆ ಶೇರು ಸದಸ್ಯರಾದ ಉಮೇಶ್ ಪೈಯಿಕ್ ಹಾಗೂ ಮಹಾದೇವ ಹಿರೋಳಿ ಅವರು ಬಸನಗೌಡ ಪಾಟೀಲ ಯತ್ನಾಳರನ್ನು ಬೆಳ್ಳಿಯ ಗೋಮಾತೆಯ ವಿಗ್ರಹ ನೀಡಿ ಸನ್ಮಾನಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ, ಸೌಹಾರ್ದದ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಮೇಶ ಬಿರಾದಾರ, ವಿಜಯಕುಮಾರ್ ಚವ್ಹಾಣ, ಅಶೋಕಗೌಡ ತೊರವಿ, ಶೈಲಜಾ ಪಾಟೀಲ, ಸೀಮಾ ಕೋರೆ, ಸೋಮಶೇಖರ ಬಂಡಿ, ಗಣಪತಿ ಜಾಧವ, ವ್ಯವಸ್ಥಾಪಕ ನಿರ್ದೇಶಕ ಜೊತಿಬಾ ಖಂಡಾಗಳೆ ಸೇರಿದಂತೆ ಮತ್ತಿತರರು ಇದ್ದರು.
ಸೌಹಾರ್ದದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಸ್ವಾಗತಿಸಿದರು. ಜನರಲ್ ಮ್ಯಾನೇಜರ್ ಆರ್.ಟಿ.ಪಾಟೀಲ ನಿರೂಪಿಸಿದರು.
ಪ್ರಾಮಾಣಿಕ ಶ್ರಮಿಕರಿಗೆ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕಾಮಧೇನು ಕಲ್ಪವೃಕ್ಷವಾಗಿದೆ.”
– ಬಸನಗೌಡ ಪಾಟೀಲ ಯತ್ನಾಳ, ಶಾಸಕರು

