ಪತ್ರಕರ್ತರಿಗೆ ಸಮರ್ಪಿಸಿದ ಕಾರ್ಯಕ್ರಮ | ಸಸಿಗಳನ್ನು ನೆಡುವಿಕೆ | ಮಾನವ ಸರಪಳಿ ನಿರ್ಮಾಣ
ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ್ದು ಭಾರತ. ಈ ಸದ್ಯ ಅತ್ಯಂತ ಭವ್ಯ, ಶಕ್ತಿಶಾಲಿ ಮತ್ತು ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ಭಾರತ ದೇಶವಾಗಿದೆ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ತಾಲ್ಲೂಕಿನ ಜೇವೂರ ಗ್ರಾಮದ ಅರಣ್ಯ ಇಲಾಖೆಯ ವನ್ಯಧಾಮದಲ್ಲಿ ಇಂಡಿ ಮತ್ತು ಚಡಚಣ ತಾಲ್ಲೂಕಿನ ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಡೆದ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಅದಲ್ಲದೆ ಇಡೀ ಕಾರ್ಯಕ್ರಮವನ್ನು ಪತ್ರಕರ್ತರಿಗೆ ಸಮರ್ಪಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಪತ್ರಕರ್ತರಾದ ಉಮೇಶ್ ಕೊಳೆಕರ, ಶಂಕರ್ ಜಮಾದಾರ ಮಾತನಾಡಿ, ಪ್ರಜ್ಞಾವಂತ ಜನರು ಅನ್ಯಾಯದ ವಿರುದ್ಧ ಮೌನ ತಾಳಬಾರದು. ಪ್ರಶ್ನೆ ಮಾಡುವ ಶಿಕ್ಷಣ ಶಕ್ತಿ ಹೊಂದಬೇಕು.
ಬಾಬಾ ಸಾಹೇಬರು ಪ್ರಜಾಪ್ರಭುತ್ವದ ಬಗ್ಗೆ ಆಳವಾಗಿ ಚಿಂತಿಸಿ, ಅವರ ತಿಳಿವನ್ನು ಹರಳುಗಟ್ಟಿಸಿ ಪ್ರಜಾಪ್ರಭುತ್ವಕ್ಕೆ ಒಂದು ವ್ಯಾಖ್ಯಾನ ಕೊಡುತ್ತಾರೆ, ‘ರಕ್ತಪಾತವಿಲ್ಲದೆ ಪ್ರಜೆಗಳ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರ್ಕಾರದ ಒಂದು ಸ್ವರೂಪ ಮತ್ತು ಒಂದು ವಿಧಾನ’ ಪ್ರಜಾಪ್ರಭುತ್ವ. ಅಸಮಾನತೆ ಇರಬಾರದು. ಅಸಮಾನತೆ ಹೆಚ್ಚಾದರೆ ಇದರ ಹೊಟ್ಟೆಯೊಳಗೆ ಹಿಂಸೆಯ ಬೀಜಗಳು ಮೊಳೆಯುತ್ತವೆ ಎನ್ನುತ್ತಾರೆ. ಆಡಳಿತ ಪಕ್ಷವನ್ನು ಕಠಿಣ ಪರೀಕ್ಷೆಗೆ ಒಳಪಡಿಸುವ ಒಂದು ಪ್ರಭಲ ವಿರೋಧ ಪಕ್ಷ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ. ಆಡಳಿತ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನವಾಗಿರಬೇಕು. ಸಂವಿಧಾನದ ಮೌಲ್ಯಗಳನ್ನು ಮೀರಿದಾಗ, ಒಂದು ಗಂಭೀರ ತಪ್ಪು ಮಾಡಿದಾಗ ಆಗುವ ವೇದನೆಯಾಗಿ ಮನುಷ್ಯ ಪರಿವರ್ತನೆ ಆಗಬೇಕು. ಈ ಬಗೆಯ ಸಂವಿಧಾನಿಕ ನೈತಿಕತೆ ಜನರಲ್ಲಿ ನೆಲೆಗೊಂಡಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕ ರವಿ ಅರಳಿ ಉಪನ್ಯಾಸ ನೀಡಿದರು.
ಮಹಾಂತೇಶ ಶಾಸ್ತ್ರಿಗಳು, ತಹಸೀಲ್ದಾರ ಬಿ.ಎಸ್.ಕಡಕಬಾವಿ, ವಲಯ ಅರಣ್ಯಾಧಿಕಾರಿ ಎಸ್.ಜೆ.ಸಂಗಾಲಕ, ದುಂಡಪ್ಪ ಮುಜಗೊಂಡ ಮಾತನಾಡಿದರು.
ವೇದಿಕೆಯ ಮೇಲೆ ಗ್ರಾ.ಪಂ ಅಧ್ಯಕ್ಷೆ ಶಾಂತಾಬಾಯಿ ಮೇಲಿನಮನಿ,ಇಒ ಬಾಬು ರಾಠೋಡ,ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ, ಪಶು ವೈದ್ಯಾಧಿಕಾರಿ ರಾಜಕುಮಾರ ಅಡಕಿ, ಚಡಚಣ ಇಒ ಸಂಜಯ ಖಡಗೇಕರ ಸೇರಿದಂತೆ ಇಂಡಿ ಮತ್ತು ಚಡಚಣ ತಾಲೂಕಿನ ಎಲ್ಲ ಪರ್ತಕರ್ತರು ಪಾಲ್ಗೊಂಡಿದ್ದರು.
ಇದೇ ವೇಳೆ ಸಸಿಗಳನ್ನು ನೇಡಲಾಯಿತು. ಮತ್ತು ಮಾನವ ಸರಪಳಿ ನಿರ್ಮಿಸಲಾಗಿತ್ತು.

