“ಬಂಜಾರ ಭಾಷೆ, ಶಿಕ್ಷಣ ಮತ್ತು ಸಮಾಜ” ರಾಜ್ಯ ಮಟ್ಟದ ವಿಚಾರ ಸಂಕಿರಣ
ವಿಜಯಪುರ: ಬಂಜಾರ ಸಂಸ್ಕೃತಿಯು ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದ್ದು, ಇದನ್ನು ಕಾಪಾಡಿಕೊಂಡು ಹೋಗುವುದು ಅತಿ ಅವಶ್ಯಕ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ “ಬಂಜಾರ ಭಾಷೆ, ಶಿಕ್ಷಣ ಮತ್ತು ಸಮಾಜ” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾರಂಪರಿಕ ಕಲೆಯಾದ ಕಸೂತಿಯನ್ನು ಆಧುನೀಕರಣಕ್ಕೆ ಒಳಪಡಿಸಿ ಅಂತಾರಾಷ್ಟ್ರೀಯ ಮಟ್ಟದ ಉದ್ಯಮವನ್ನಾಗಿ ಬೆಳೆಸುವುದು ಅವಶ್ಯಕವಾಗಿದೆ. ಹಾಗೆಯೇ ಬಂಜಾರ ಭಾಷೆ ಮತ್ತು ಸಾಹಿತ್ಯ ಅತ್ಯಂತ ಶ್ರೀಮಂತವಾಗಿರುವುದರಿಂದ ಅದನ್ನು ದಾಖಲಿಸುವುದು ಅವಶ್ಯಕವಾಗಿದೆ. ಈ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಮಾರ್ಗೊಪಾಯಗಳನ್ನು ಕಂಡು ಹಿಡಿಯುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಬಂಜಾರ ಸಮುದಾಯವು ಕಾಯಕ ಜೀವಿಗಳಾಗಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಪ್ರೊ. ನಾರಾಯಣ ಪವಾರ ಬಂಜಾರ ಭಾಷೆ ಅಳಿವು-ಉಳಿವು ಕುರಿತು ವಿಷಯ ಮಂಡಿಸಿದರು. ಡಾ. ಸವಿತಾ ಲಮಾಣಿಯವರು ಬಂಜಾರ ಸಮುದಾಯದಲ್ಲಿ ಸಾಮಾಜಿಕ ಬದಲಾವಣೆ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಂಗೀತಾ ನಾಯಕ ಬಂಜಾರ ಸಮುದಾಯ ಮತ್ತು ಶಿಕ್ಷಣ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸದಸ್ಯೆ ಡಾ.ಸುರೇಖಾ ಜಿ ರಾಠೋಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಆರ್.ಬಿ.ನಾಯಕ, ವಸಂತ ಚವ್ಹಾಣ ಮತ್ತು ಬಂಜಾರ ಸಮುದಾಯದ ಮುಖಂಡರು, ಹಿರಿಯರು, ನೃತ್ಯ ತಂಡದವರು, ಕವಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಇಂದುಮತಿ ಚವ್ಹಾಣ ಸಂತ ಸೇವಲಾಲ್ ಅವರ ಪ್ರಾರ್ಥನಾ ಗೀತೆಯನ್ನು ಹಾಡಿದರು. ಡಾ. ಬಾಬು ಲಮಾಣಿ ಅತಿಥಿಗಳನ್ನು ಪರಿಚಯಿಸಿದರು. ಮಂಜುಳಾ ಚವ್ಹಾಣ ನಿರೂಪಿಸಿದರು. ಡಾ.ಗುಲಾಬ್ ರಾಠೋಡ ವಂದಿಸಿದರು.

