ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ
ಇಂಡಿ: ಮುಂಬರುವ ೨ ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಶುದ್ದ ಕುಡಿಯುವ ನೀರು, ವಿದ್ಯುತ್, ಆರೋಗ್ಯ, ರಸ್ತೆಗಳನ್ನು ಮಾಡಲಾಗುವದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.
ಭಾನುವಾರ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ೨೭.೫ ಕೋಟಿ ಅನುದಾನದಲ್ಲಿ ಇಂಡಿ-ಆಲಮೇಲ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಜಲಧಾರೆ ಯೋಜನೆಯ ಅಡಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದಿಂದ ವಿಜಯಪೂರ, ಇಂಡಿ ಮತ್ತು ಬಸವನಬಾಗೇವಾಡಿ ತಾಲುಕುಗಳ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗುವದು. ಈಗಾಗಲೇ ಈ ಯೋಜನೆ ಕೈಗೆತ್ತಿಕೊಂಡಿದ್ದು ಕೆಲಸ ಭರದಿಂದ ಸಾಗಿದೆ. ಇದರಂತೆ ಸಿಂದಗಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳ ಎಲ್ಲಾ ಗ್ರಾಮಗಳಿಗೆ ನಾರಾಯಣಪೂರ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುವದು. ಈ ಎಲ್ಲಾ ಕೆಲಸಗಳು ಬರುವ ೨ ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.
ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ನೀಡಲು ಶ್ರಮಿಸಲಾಗುತ್ತಿದ್ದು, ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಬರುವ ೨ ವರ್ಷಗಳಲ್ಲಿ ದಿನದ ೨೪ ಗಂಟೆಗಳ ಕಾಲ ವಿದ್ಯುತ್ ನೀಡಲು ಸಂಕಲ್ಪ ಮಾಡಲಾಗಿದೆ ಎಂದರು.
ಇಂಡಿ ತಾಲೂಕಿಗೆ ಅನುಕೂಲವಾಗಲಿರುವ
ಪ್ರಸಕ್ತ ಸಾಲಿನಲ್ಲಿ ನನಗೆ ನೀಡಿದ ೨೫ ಕೋಟಿ ಅನುದಾನದಲ್ಲಿ ಸಾಲೋಟಗಿ ಗ್ರಾಮದ ಶಿವಯೋಗೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ೧ ಕೋಟಿ ಅನುದಾನ ನೀಡಲಾಗಿದೆ. ಇನ್ನುಳಿದ ಅನುದಾನದಲ್ಲಿ ಕೆಲವು ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವದು ಎಂದು ಹೇಳಿದರು.
ವಕೀಲ ಬಿ.ಜಿ.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸೋಮಯ್ಯ ಹಿರೇಪಟ್ಟ, ಶಿವಯೋಗೆಪ್ಪ ನೇದಲಗಿ, ಜೀತಪ್ಪ ಕಲ್ಯಾಣಿ, ಬಾಬುಸಾಹುಕಾರ ಮೇತ್ರಿ, ಜಾವೀದ ಮೋಮಿನ, ಲಿಂಬಾಜಿ ರಾಠೋಡ, ಮಲ್ಲುಗೌಡ ಪಾಟೀಲ, ಇಲಿಯಾಸ್ ಬೋರಾಮಣಿ, ಎಸ್.ಎಸ್.ಕಣಮುಚನಾಳ ಇದ್ದರು.
ರೇವಣಸಿದ್ದೇಶ್ವರ ಏತ ನೀರಾವರಿಗೆ ರೂ.೨೭೫೫ ಕೋಟಿ ಅನುದಾನ
” ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸರ್ಕಾರ ೨೭೫೫ ಕೋಟಿ ಅನುದಾನ ತೆಗೆದಿರಿಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಇಂಡಿ ಮತ್ತು ಚಡಚಣ ತಾಲೂಕುಗಳ ಬಹುತೇಕ ಕೃಷಿ ಕ್ಷೇತ್ರ ನೀರಾವರಿಗೆ ಒಳಪಡಲಿದೆ ಎಂದ ಅವರು ತಾಲೂಕಿನಲ್ಲಿರುವ ೧೮ ಕೆರೆಗಳನ್ನು ಸದಾ ತುಂಬಿಸುವ ವ್ಯವಸ್ಥೆ ಮಾಡಿದ್ದೇನೆ. ಇದರಿಂದ ಅಂತರ್ ಜಲ ಹೆಚ್ಚಾಗಲಿದೆ. ಬಾವಿ, ಕೊಳವೇ ಬಾವಿಗಳು ರೀಚಾರ್ಜ ಆಗಲಿವೆ. ನೀರಾವರಿಗೆ ಸರಕಾರ ಹೆಚ್ಚಿನ ಆಧ್ಯತೆ ನೀಡಿ ತಾಲೂಕಿನಲ್ಲಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವದು.”
– ಯಶವಂತರಾಯಗೌಡ ಪಾಟೀಲ
ಶಾಸಕರು, ಇಂಡಿ
ಜ.೨೬ಕ್ಕೆ ಇಂಡಿ-ಆಲಮೇಲ ಹೊಸ ರಸ್ತೆ ಉದ್ಘಾಟನೆ
ಇಂಡಿ-ಆಲಮೇಲ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ೨೭.೫ ಕೋಟಿ ಅನುದಾನ ಬಿಡುಗಡೆ ಮಾಡಿಸಿ, ರಸ್ತೆ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ. ಬರುವ ಜನೇವರಿ ೨೬ ರಂದು ಇಂಡಿ-ಆಲಮೇಲ ಹೊಸ ರಸ್ತೆಯನ್ನು ಉದ್ಘಾಟಿಸುತ್ತೇವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.

