– ಗುರು ಆರ್ ಹಿರೇಮಠ ( ದೇವನಗಾಂವ)
ಆಲಮೇಲ: ಕುತೂಹಲ ಕೆರಳಿಸಿದ್ದ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ, ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಗದ್ದುಗೆ ಏರಲು ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಪಕ್ಷೇತರ ಸದಸ್ಯರು ತೆರೆಮರೆಯಲ್ಲಿ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಒಟ್ಟಾರೇಯಾಗಿ ಅಧಿಕಾರ ಹಿಡಿಯುವ ತವಕದಲ್ಲಿದ್ದಾರೆ.
ಆಲಮೇಲ ಪಟ್ಟಣ ಪಂಚಾಯ್ತಿ ಒಟ್ಟು 19 ಸದಸ್ಯರ ಬಲ ಹೊಂದಿದೆ. ಅದರಲ್ಲಿ ಬಿಜೆಪಿ 9, ಕಾಂಗ್ರೆಸ್ 7, ಪಕ್ಷೇತರ 3. ಅಧಿಕಾರಕ್ಕೆ ಏರಲು 10 ಜನ ಸದಸ್ಯರ ಬಲಬೇಕು.
ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಅ) ,ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಬ) ಮೀಸಲಾತಿ ಘೋಷಣೆಯಾಗಿದೆ.
ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತಯಾಗಿ ಮೇಲ್ದರ್ಜೆಗೆರಿದ್ದಾಗ ಮೊದಲ ಅವಧಿಗೆ ಬಿಜೆಪಿಗೆ ಅಧಿಕಾರ ಹಿಡಿದಿತ್ತು. ಆಗ ಬಿಜೆಪಿ ಶಾಸಕರಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಅ) ಇದ್ದು ಈ ಸ್ಥಾನಕ್ಕೆ ಬಿಜೆಪಿಯಲ್ಲಿ 5 ಜನ ಹಾಗೂ ಕಾಂಗ್ರೆಸ್ ನಲ್ಲಿ 2 ಜನ,ಪಕ್ಷೇತರ 1, ಒಟ್ಟು 8 ಜನ ಮಧ್ಯೆ ಪೈಫೋಟಿ ನಡೆಸುತ್ತಿದ್ದಾರೆ.
ಬಿಜೆಪಿಯ 02 ನೇ ವಾರ್ಡಿನಿಂದ ಬಿಸ್ಮಿಲ್ಲಾ ಮಹಿಬೂಬಸಾಬ ಮಸಳಿ, 5ನೇ ವಾರ್ಡಿನ ಹಣಮಂತ ಈರಣ್ಣ ಹೂಗಾರ, 7ನೇ ವಾರ್ಡಿನ ಜುಬೇದಾ ಸೈಪನಮುಲ್ಕ ಸುಂಬಡ,11ನೇ ವಾರ್ಡಿನ ಶ್ರೀಶೈಲಸಿಂಗ್ ಠಾಕೂರ ರಜಪೂತ,18 ನೇ ವಾರ್ಡಿನ ಚಂದ್ರಕಾಂತ ಕಾಂಬಳೆ, ಕಾಂಗ್ರೆಸ್ ನಿಂದ 3 ನೇ ವಾರ್ಡಿನ ವಿಜಯಲಕ್ಷ್ಮೀ ಸಂತೋಷ ಜರಕರ,9ನೇ ವಾರ್ಡಿನ ಸಾಧೀಕ ಫರೀಧಸಾಬ ಸುಂಬಡ ಹಾಗೂ ಪಕ್ಷೇತರ 15 ನೇ ವಾರ್ಡಿನ ಸದಸ್ಯ ಉಮರ ಮಹಿಬೂಬಸಾಬ ಬಿಳವಾರ ಇವರೆಲ್ಲರೂ ಅಧ್ಯಕ್ಷ
ಸ್ಥಾನಕ್ಕೆ ಅರ್ಹತೆಯನ್ನು ಹೊಂದಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ 4ನೇ ವಾರ್ಡಿನ ಸುಮಾ ವೀರಭದ್ರಪ್ಪ ಕತ್ತಿ,18 ನೇ ವಾರ್ಡಿನ ಚಂದ್ರಕಾಂತ ಶಿವಪ್ಪ ಹಳೇಮನಿ,ಕಾಂಗ್ರೆಸ್ ನಿಂದ 8ನೇ ವಾರ್ಡಿನ ಅಶೋಕ ಮಹಾದೇವಪ್ಪ ಕೊಳಾರಿ,ಪಕ್ಷೇತರ 10ನೇ ವಾರ್ಡಿನ ಸದಸ್ಯೆ ಶಾರದಾ ಈರಣ್ಣ ಕಲ್ಲೂರ ಇವರು ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹತೆಯನ್ನು ಹೊಂದಿದ್ದಾರೆ.
ಅಧಿಕಾರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಪೂರ್ಣ ಸಂಖ್ಯಾಬಲ ಹೊಂದದ ಬಿಜೆಪಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿರುವ ಮೀಸಲಾತಿಗೆ ಅರ್ಹತೆ ಹೊಂದಿದ ಅಭ್ಯರ್ಥಿಗಳಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಯಿಂದ ಆಯ್ಕೆಯಾದ ಶಾಸಕರಿದ್ದು, ಬಿಜೆಪಿಗೆ ಕೇವಲ ಒಬ್ಬ ಸದಸ್ಯ ಅವಶ್ಯಕತೆ ಇದೆ ಆದರೆ ಕಾಂಗ್ರೆಸ್ 7 ಸದಸ್ಯ ಬಲ ಹೊಂದಿದ್ದು ಅವರಿಗೆ ಮೂರು ಜನ ಸದಸ್ಯ ಬೆಂಬಲ ಬೇಕು.ಒಬ್ಬ ಪಕ್ಷೇತರ ಸದಸ್ಯ ಬೆಂಬಲ ಸೂಚಿಸಿದರೆ ಬಿಜೆಪಿ ಅಧಿಕಾರ ಹಿಡಿಯಬಹುದು, ಕಾಂಗ್ರೆಸ್ ಮೂರು ಜನ ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದರೇ ಮಾತ್ರ ಅವರು ಅಧಿಕಾರದ ಗದ್ದುಗೆ ಹಿಡಿಯಬಹುದು ಆದರೆ ಪಕ್ಷೇತರ ಸದಸ್ಯರು ಮಾತ್ರ ಇನ್ನೂವರೆಗೆ ತಟಸ್ಥರಾಗಿದ್ದಾರೆ.
ಪಕ್ಷೇತರನ್ನು ಸೆಳೆಯುವ ತೀವ್ರ ಪೈಪೋಟಿ ನಡೆದಿದೆ.
ಬಿಜೆಪಿ ಸದಸ್ಯರಿಗೆ ಕೇವಲ ಒಬ್ಬ ಸದಸ್ಯ ಅವಶ್ಯಕತೆ ಇರುವುದರಿಂದ ಸಂದರ್ಭ ಬಂದರೆ ಅಧಿಕಾರಕ್ಕಾಗಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಪಕ್ಷೇತರ ಅಭ್ಯರ್ಥಿಗೆ ಬಿಟ್ಟು ಕೊಡಲು ಬಿಜೆಪಿಯವರು ಸಿದ್ಧರಿದ್ದಾರೆ ಎಂಬ ಮಾತು ಪಟ್ಟಣದಲ್ಲಿ ಕೇಳಿ ಬರುತ್ತಿದೆ.

“ಆಲಮೇಲ ಪಟ್ಟಣ ಪಂಚಾಯತ ಕಾಂಗ್ರೆಸ್ ಸದಸ್ಯರೆಲ್ಲರೂ ಒಗ್ಗಟ್ಟಾಗಿದ್ದಾರೆ ಸದ್ಯಕ್ಕೆ ನಾನು ಏನು ಹೇಳಲಾರೆ ಚುನಾವಣೆ ದಿನಾಂಕ ಪ್ರಕಟವಾಗಲಿ ಆಮೇಲೆ ನೋಡೋಣ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ ಮತಕ್ಷೇತ್ರ

“ಆಲಮೇಲ ಪಟ್ಟಣದ ಜನ ನಮಗೆ ಆಶೀರ್ವಾದ ಮಾಡಿ 9ಜನರ ಬಲವನ್ನು ಕೊಟ್ಟಿದ್ದಾರೆ. ನಮಗೆ ಕೇವಲ ಒಬ್ಬ ಸದಸ್ಯ ಬಲ ಅವಶ್ಯಕತೆ ಇರುವುದರಿಂದ ನಮಗೆ ಪಕ್ಷೇತರ ಸದಸ್ಯರು ಬೆಂಬಲ ಸೂಚಿಸುತ್ತಾರೆ. ಇದು ಗುಟ್ಟಾದ ವಿಷಯವಾಗಿದ್ದು, ಒಟ್ಟಾರೆಯಾಗಿ ಆಲಮೇಲ ಪಟ್ಟಣ ಪಂಚಾಯತ ಅಧಿಕಾರ ಹಿಡಿಯುವುದು ನಾವೇ.”
– ರಮೇಶ ಭೂಸನೂರ
ಮಾಜಿ ಶಾಸಕರು, ಸಿಂದಗಿ ಮತಕ್ಷೇತ್ರ

“ನಮಗೆ ಕೇವಲ ಮೂರು ಜನ ಸದಸ್ಯ ಬಲದ ಅವಶ್ಯಕತೆ ಇರುವುದರಿಂದ ಪಕ್ಷೇತರ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ಶಾಸಕ ಕಾಂಗ್ರೆಸ್ ನವರು ಇರುವುದರಿಂದ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.”
– ಸಾಧೀಕ ಸುಂಬಡ
ಪ.ಪಂ ಸದಸ್ಯ ಮತ್ತು ಆಲಮೇಲ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ.

“ಪಟ್ಟಣ ಪಂಚಾಯ್ತಿಗೆ ಅಧಿಕಾರ ಹಿಡಿಯಲು ನಮ್ಮ ಕೇವಲ ಒಬ್ಬ ಸದಸ್ಯ ಅವಶ್ಯಕತೆ ಇರುವುದರಿಂದ ನಮಗೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಪಕ್ಷೇತರ ಸದಸ್ಯರು ನಮಗೆ ಭರವಸೆ ನೀಡಿದ್ದಾರೆ.”
– ಅಶೋಕ ವಾರದ
ಆಲಮೇಲ ಬಿಜೆಪಿ ಮಂಡಲ ಅಧ್ಯಕ್ಷ.

