ಮುದ್ದೇಬಿಹಾಳ: ಪತ್ರಿಕಾ ಮಾಧ್ಯಮಕ್ಕೆ ಇರುವ ಗೌರವ ಕಳಚಿ ಬಿದ್ದಿದೆ. ಇಂದಿನ ಮಾಧ್ಯಮಗಳು ಯಾವುದಕ್ಕೆ ಎಷ್ಟು ಮಹತ್ವ ಕೊಡಬೇಕು ಅದಕ್ಕೆ ಮಹತ್ವ ಕೊಡುತ್ತಿಲ್ಲ ಎಂದು ಶಾಸಕ, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಎಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ನ ಸಭಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್, ಅಸ್ಕಿ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಅಖಿಲ ಭಾರತ ವೀರಶೈವ ಮಹಾಸಭೆ, ಮನೆಯಲ್ಲಿ ಮಹಾಮನೆ ಬಳಗ, ವಿಕಲಚೇತನರ ಒಕ್ಕೂಟ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ೭೮ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಡೆದ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರಧಾನ, ಸೌಲಭ್ಯ ವಿತರಣೆ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಟಿವಿ ಮಾಧ್ಯಮಗಳು ಬರೀ ಜೈಲಿನ ಬಗ್ಗೆಯೇ ತೋರಿಸುತ್ತಿವೆ. ಯಾವುದನ್ನು ತೋರಿಸಬೇಕು ಯಾವುದನ್ನ ತೋರಿಸಬಾರದು ಎಂಬ ಬಗ್ಗೆ ಪರಿಶೀಲಿಸುತ್ತಿಲ್ಲ. ಇದರಿಂದ ತಪ್ಪು ಮಾಡಿ ಜೈಲಿಗೆ ಹೋದರೆ ರಾಜಾರೋಷವಾಗಿ ಇರಬಹುದು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿವೆ. ಇದರಿಂದ ಸಮಾಜದ ಸ್ವಾಸ್ಥö್ಯ ಹಾಳಾಗುತ್ತಿದೆ. ಪತ್ರಿಕೆಗಳು ಕನ್ನಡಿ ಇದ್ದ ಹಾಗೆ ಇರಬೇಕು. ಯಾವತ್ತೂ ನೈಜತೆಯನ್ನು ತೋರಿಸಬೇಕು ಅಂದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ ಸಂಸ್ಥಾಪಕರೂ ಆಗಿರುವ ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ದೇವರು ಮಾತನಾಡಿ, ಪತ್ರಕರ್ತರು ನಿರಂತರ ಅಧ್ಯಯನ ಶೀಲರಾಗಿರಬೇಕು. ಪತ್ರಕರ್ತರು ಮಠ ಮತ್ತು ಶಿಕ್ಷಣ ಸಂಸ್ಥೆಗಳ ತರಹ ತಪ್ಪುಮಾಡಿದವರಿಗೊಂದು ಅವಕಾಶ ನೀಡಿ ತಿದ್ದಿ ಸುಂದರವಾದ ಮೂರ್ತಿಯನ್ನಾಗಿ ಮಾಡಲು ಮುಂದಾಗಬೇಕು ಎಂದರು.
ಸಮಾಜ ಸೇವಕ ಸಿ.ಬಿ.ಅಸ್ಕಿ, ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಮಾತನಾಡಿದರು. ಕಾನಿಪ ಸಂಘದ ೧೧ ಸದಸ್ಯರಿಗೆ ಕೆಯುಡಬ್ಲೂಜೆ ತಾಲೂಕು ಪ್ರಶಸ್ತಿ ನೀಡಿ ಗೌರವಿಸಿದರೆ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಶರಣು ಸಜ್ಜನ, ವೀರಶೈವ ಮಹಾ ಸಭಾ ತಾಲೂಕು ಅಧ್ಯಕ್ಷ ವೆಂಕನಗೌಡ ಪಾಟೀಲರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪತ್ರಿಕಾ ವಿತಕರಕರಿಗೆ ಎರಡು ಜೊತೆ ಬಟ್ಟೆ, ಕಾನಿಪದಿಂದ ೭೮ನೇ ಸ್ವಾತಂತ್ರೋತ್ಸವದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಭಾಷಣ ಸ್ಪರ್ದೆಯ ವಿಜೇತರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಕಾನಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ಡವಡವಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಅಧ್ಯಕ್ಷ ಮುತ್ತಣ್ಣ ವಡವಡಗಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಬೆಣ್ಣೂರ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ತಾರನಾಳ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ದಿ ಕರ್ನಾಟಕ ಕೋಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ, ಬಾಪುಗೌಡ ಪಾಟೀಲ ಸೇರಿದಂತೆ ಮತ್ತೀತರರು ವೇದಿಕೆಯ ಮೇಲಿದ್ದರು.
ಸಂಗಮೆಶ ಶಿವಣಗಿ ತಂಡದವರು ಸಂಗೀತ ಸೇವೆ ನೀಡಿದರು. ಕಾನಿಪ ಸಂಘದ ಹಿರಿಯ ಸದಸ್ಯ ಎಚ್.ಆರ್.ಬಾಗವಾನ ಸ್ವಾಗತಿಸಿದರು. ಶಿಕ್ಷಕ, ಹಾಸ್ಯ ಕಲಾವಿದ ಗೋಪಾಲ ಹೂಗಾರ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

