ಸಿಂದಗಿ: ವಿಧಾನ ಸಭಾ ಕ್ಷೇತ್ರದ ಪುರಸಭೆಗೆ ಸನ್೨೦೨೧-೨೨ನೆಯ ಸಾಲಿನ ವಾಜಪೇಯಿ ನಗರದ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ವಸತಿ ನಗರ ಯೋಜನೆಯ ಅಡಿಯಲ್ಲಿನ ೭೫೦ ಮನೆಗಳ ಫಲಾನುಭವಿಗಳ ಅನುದಾನವನ್ನು ತೆಡೆಹಿಡಿಯಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಹೆಚ್ಚುವರಿ ಗುರಿಗೆ ಫಲಾನುಭವಿಗಳನ್ನು ಆಶ್ರಯ ಸಮಿತಿಯ ಆ.೦೭, ೨೦೨೩ರಂದು ಠರಾವು ಸಂಖ್ಯೆ ೦೧ರಲ್ಲಿ ಸಾಮಾನ್ಯ ಹಾಗೂ ಅಲ್ಪ ಸಂಖ್ಯಾತರು ಸೇರಿ ೫೬೯ ಹಾಗೂ ಪ.ಜಾತಿ ಮತ್ತು ಪ.ಪಂಗಡ ೧೮೧ ಫಲಾನುಭವಿಗಳನ್ನು ಆಯ್ಕೆ ಮಾಡಿರುತ್ತಾರೆ. ಆದರೆ ಡಾ.ಬಿ.ಆರ್.ಅಂಬೇಡ್ಕರ್ ನಗರ ವಸತಿ ಯೋಜನೆಯಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿ ಬದಲಾಗಿ ಇತರ ಸಾಮಾನ್ಯ ವರ್ಗದ ಫಲಾನುಭವಿಗಳನ್ನು ಆಯ್ಕೆ ಮಾಡಿರುತ್ತಾರೆ ಎಂದು ನೀಡಿರುವ ದೂರಿನನ್ವಯ ನಗರ ಮಟ್ಟದ ತಾಂತ್ರಿಕ ಕೋಶದ ಸಿಬ್ಬಂದಿ ತಂಡ ರಚಿಸಿ ತನಿಖೆ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಈ ತನಿಖಾ ತಂಡವು ಪರಿಶೀಲನೆ ಮಾಡಿ ವರದಿ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನಗರ ವಸತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳನ್ನು ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಿದ್ದು, ಆದರೆ ವಸತಿ ವಿಷಯ ನಿರ್ವಾಹಕ ಖ್ಯಾತಪ್ಪ ಕುಂಬಾರ ಆಯ್ಕೆ ಮಾಡಲಾದ ಫಲಾನುಭವಿಗಳನ್ನು ಕೈಬಿಟ್ಟು, ಇತರೆ ವರ್ಗದ ಹೆಸರನ್ನು ನಿಯಮಬಾಹಿರವಾಗಿ ನೇರವಾಗಿ ೪ಬಿಯಲ್ಲಿ ಸೇರ್ಪಡೆ ಮಾಡಿ ದಾಖಲೀಕರಣ ಮಾಡಿರುತ್ತಾರೆ. ಅಲ್ಲದೇ ಇದೇ ರೀತಿಯಾಗಿ ಇನ್ನೂ ೦೯ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಿರುತ್ತಾರೆ ಎಂದು ತನಿಖಾ ವರದಿಯಲ್ಲಿ ತಿಳಿಸಿರುತ್ತಾರೆ. ಇದರಿಂದಾಗಿ ವಿಷಯ ನಿರ್ವಾಹಕ ಹಾಗೂ ಹಿಂದಿನ ಮುಖ್ಯಾಧಿಕಾರಿ ಕರ್ತವ್ಯ ಲೋಪ ಎಸಗಿದ್ದಾರೆ.
ಅಲ್ಲದೇ ೭೫೦ ಆಯ್ಕೆ ಮಾಡಲಾದ ಫಲಾನುಭವಿಗಳ ಪೈಕಿ ೧೫೫ ಅರ್ಜಿಗಳು ಮತ್ತು ದಾಖಲೆಗಳು ಪರಿಶೀಲನೆಗಾಗಿ ಹಾಜರಪಡಿಸಿದ್ದು, ಇನ್ನೂಳಿದ ೫೯೫ ಅರ್ಜಿಗಳನ್ನು ಪರಿಶೀಲನೆಗೆ ತನಿಖಾ ಕಾಲಕ್ಕೆ ಹಾಜರಪಡಿಸಿರುವುದಿಲ್ಲ. ಹೀಗಾಗಿ ಆಯ್ಕೆ ಮಾಡಲಾದ ಪೈಕಿ ಇನ್ನೂ ೫೯೫ ಫಲಾನುಭವಿಗಳ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸ್ಪಷ್ಟವಾಗಿ ಕಂಡು ಬರುವುದಾಗಿ ತಿಳಿಸಿ ಈಗಾಗಲೇ ಆಯ್ಕೆ ಮಾಡಿ ಜಿಪಿಎಸ್ ಹಂತದಲ್ಲಿರುವ ಎಲ್ಲ ಮನೆಗಳ ಅನುದಾನವನ್ನು ತಡೆಹಿಡಿಯುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದರಿ ತನಿಖಾ ತಂಡದ ವರದಿಯನ್ನು ಪರಿಶೀಲಿಸಲಾಗಿ, ಸಿಂದಗಿ ಪುರಸಭೆಗೆ ೭೫೦ ಹೆಚ್ಚುವರಿ ಮನೆಗಳ ಜಿಪಿಎಸ್ ಹಾಗೂ ದಾಖಲೀಕರಣ ಸಮಯದಲ್ಲಿ ಲೋಪದೋಷಗಳು ಎಸಗಿರುವ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ತನಿಖೆ ನಡೆಸಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ವರದಿ ನೀಡುವವರೆಗೆ ಸಿಂದಗಿ ಪುರಸಭೆಯ ೭೫೦ ಹೆಚ್ಚುವರಿ ಮನೆಗಳ ಅನುದಾನವನ್ನು ತಡೆಹಿಡಿಯುವಂತೆ ಜಿಲ್ಲಾಧಿಕಾರಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ್ ವ್ಯವಸ್ಥಾಪಕ ನಿರ್ದೇಶಕರಿಗೆ ಕೋರಿ ಪತ್ರ ಬರೆದಿದ್ದಾರೆ.
“ಈಗಾಗಲೇ ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. ತಪಿತಸ್ಥರಿಗೆ ಅತೀ ಶೀಘ್ರದಲ್ಲೇ ನೋಟೀಸ್ ನೀಡಲಾಗುವುದು.”
– ಬಿ.ಎ.ಸೌದಾಗರ್
ಕಾರ್ಯನಿರ್ವಾಹಕ ಅಧಿಕಾರಿ, ವಿಜಯಪುರ ನಗರಾಭಿವೃದ್ಧಿ ಕೋಶ
