ನಿವೃತ್ತ ದೈ.ಶಿಕ್ಷಕ ಬಸವರಾಜ ಅನಂತಪುರ ದಂಪತಿಗೆ ಸಂಪ್ರೇಮದ ಸನ್ಮಾನ
ಚಿಕ್ಕಪಡಸಲಗಿ: ಸುಮಾರು 39 ವಸಂತಕಾಲದವರೆಗೆ ದೈಹಿಕ ಶಿಕ್ಷಣದ ವೃತ್ತಿ ಕಾಯಕವನ್ನು ಅತ್ಯಂತ ಶಿಸ್ತು ಬದ್ದತೆಯಿಂದ ಪೂರೈಸಿ ಈಚೆಗೆ ವಯೋಸೇವಾ ನಿವೃತ್ತರಾದ ಬಸವರಾಜ ಅನಂತಪುರ ತಮ್ಮ ಸೇವಾವಧಿಯಲ್ಲಿ ಆದರ್ಶತನದ ಕಾಯಕ ನಿಷ್ಠೆ ಮೆರೆದಿದ್ದಾರೆ. ಅವರ ಶಿಕ್ಷಣ ಪ್ರೇಮದ ಜೀವನ ಮಾದರಿಯಾಗಿದೆ ಎಂದು ಕಲಬುರಗಿ ಆಕಾಶವಾಣಿ, ದೂರದರ್ಶನ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಸೋಮಶೇಖರ ಎಸ್.ರುಳಿ ಶ್ಲಾಘಿಸಿದರು.
ಜಮಖಂಡಿ ನಗರದಲ್ಲಿನ ಬಸವರಾಜ ಅನಂತಪುರ ಅವರ ಸ್ವಗ್ರಹಕ್ಕೆ ತೆರಳಿ ನಿವೃತ್ತರಾದ ಪ್ರಯುಕ್ತ ಬಂಗಾರ ಉಂಗುರದೊಂದಿಗೆ ಸಂಪ್ರೇಮದಿಂದ ಶಾಲು ಹೊದಿಸಿ ಅನಂತಪುರ ದಂಪತಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಅನಂತಪುರ ಗುರುಗಳು ಸಾತ್ವಿಕ ಸಂಪನ್ನರು. ಅವರ ವೃತ್ತಿ ಬದುಕು ಬದ್ದತೆಯ ಹೂರಣದಲ್ಲಿ ನಡೆದಿದೆ. ಹೆಜ್ಜೆ ಗುರುತು ಅನುಪಮವಾಗಿವೆ ಅವರ ಶಿಕ್ಷಣ ರಂಗದ ಜೀವನ ಮಾದರಿಯಾಗಿದೆ. ವೃತ್ತಿಯ ಮೇಲೆ ಹಿಡಿತ ಸಾಧಿಸಿ ಗ್ರಾಮೀಣ ಮಕ್ಕಳಲ್ಲಿ ಕ್ರೀಡೆಗಳ ಅಭಿರುಚಿ ಬೆಳೆಸಿ ಕ್ರೀಡಾ ಸಂಹವನ ಸುಲಭವಾಗಿಸಿದ್ದಾರೆ. ಸಮಾಜಮುಖಿಯಾಗಿ ಬೆರೆಯುವ ವಿಶೇಷ ಗುಣ ಸ್ವಭಾವದ ನಡುವಳಿಕೆಯಿಂದ ಮೆಚ್ಚುಗೆ ಪಾತ್ರರಾಗಿದ್ದಾರೆ. ಎಲ್ಲರನ್ನು ಗೌರವಯುತವಾಗಿ ಕಾಣುವ ಹೃದಯವಂತ ಅನಂತಪುರ ಅವರು ಈ ಇಳಿವಯಸ್ಸಿನಲ್ಲೂ ಶಿಸ್ತುಬದ್ಧ ಪಯಣ ಸಾಗಿಸುತ್ತಿರುವುದು ಇಂದಿನ ಯುವಜನತೆ ಜೀವನಕ್ಕೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಅನಂತಪುರ ಅವರು ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಹಾಗೂ ಬಳ್ಳಾರಿ ಜಿಲ್ಲೆಯ ಬಾಚಿಗೊಂಡೆನಹಳ್ಳಿ ಕೌದಿ ಮಹಾಂತೇಶ ಪ್ರೌಢಶಾಲೆಯಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಚಿಕ್ಕಪಡಸಲಗಿ ಶಾಲೆಯಲ್ಲಿ ಈಚೆಗೆ ಸೇವಾ ನಿವೃತ್ತಿಗೊಂಡಿದ್ದಾರೆ. ಅವರು ನಮಗೆ ಆತ್ಮೀಯರಾಗಿದ್ದರಿಂದ ಅಭಿಮಾನದಿಂದ ಪ್ರೀತಿಯ ಸನ್ಮಾನ ಮಾಡಿರುವೆವು. ಅವರು ಸನ್ಮಾನಕ್ಕೆ ಅಭಿನಂದನಾರ್ಹವಾಗಿದ್ದಾರೆ ಎಂದರು.
ಸರಳತೆಯ ನಡೆ-ನುಡಿಗಳ ಆಯಾಮದಿಂದ ಅವರಿಗೆ ಶ್ರೇಯಸ್ಸು ಸಲ್ಲಿವೆ.ಶಾಲಾ ಮಕ್ಕಳ ಮೇಲೆ ಇವರ ಪ್ರಭಾವ ಬೀರಿವೆ. ಬದುಕಿನಲ್ಲಿ ಗುರುವಿನ ಮಹತ್ವ ಅನಂತಪುರ ಅವರು ಸಾರಿದ್ದಾರೆ. ಅವರಲ್ಲಿ ಉತ್ಸುಕತೆಯ ಕ್ರೀಡಾ ತುಡಿತ ಬಲವಾಗಿದೆ. ಲವಲವಿಕೆಯ ಭಾವದೊಂದಿಗೆ ಇಂದಿಗೂ ಚಿರಯುವಕರಂತೆ ಓಡಾಡುತ್ತಾರೆ. ಆರೋಗ್ಯ ಭಾಗ್ಯದ ಸತ್ವತೆ ದೇವರು ಕರುಣಿಸಿದ್ದಾರೆ. ಅವರ ಅವಿರತ ಪರಿಶ್ರಮ ಗಣನೀಯವಾಗಿದೆ. ಯಶಸ್ಸು ಅಗಿದೆ. ಆಸಕ್ತಿದಾಯಕ ಮನೋಭಿಲಾಷೆಯಿಂದ ಸಕಲರ ನಂಬಿಕೆ, ವಿಶ್ವಾಸ ಗಳಿಸಿದ್ದಾರೆ ಎಂದು ಸೋಮಶೇಖರ ರುಳಿ ಅಭಿಪ್ರಾಯಿಸಿದರು.
ನಿಷ್ಕಲ್ಮಶದಿಂದ ಗೈಯುವ ಕಾಯಕಕ್ಕೆ ವಯಸ್ಸು ಅಡ್ಡಿಯಾಗದು. ಶಾಲಾ ಮಕ್ಕಳಿಗೆ ಕ್ರೀಡೆಗಳ ಜೊತೆಗೆ ಉತ್ತಮ ಸಂಸ್ಕಾರ ನೀಡಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ವೃತ್ತಿಯನ್ನು ಬಿಟ್ಟು ಬೇರೆನು ಕಂಡಿಲ್ಲ. ವೃತ್ತಿಗೆ ಮೊದಲು ಆದ್ಯತೆ ನೀಡಿದ್ದಾರೆ. ಶಾಲೆ ಮತ್ತು ಮಕ್ಕಳ ಅಭ್ಯುದಯಕ್ಕೆ ಈಗಲು ಆದ್ಯತೆ ನೀಡಿ ಸೇವೆ ಮುಂದುವರೆಸಿಕೊಂಡು ಹೊರಟಿದ್ದಾರೆ.ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯವರು ಈ ಸುದೈವದ ಅವಕಾಶ ಕಲ್ಪಿಸಿರುವುದು ನಿಜಕ್ಕೂ ಸೇವಾಭಾವದ ಕಾಯಕಕ್ಕೆ ಸ್ಪೂರ್ತಿಯಾಗಿದೆ ಎಂದರು.
ಯಾದಗಿರಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಸಹಾಯಕ ಪ್ರಾಧ್ಯಾಪಕಿ ಡಾ,ಶಶಿಕಲಾ ಎಸ್.ರುಳಿ ಮಾತನಾಡಿ, ಮಧ್ಯಮ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಅನಂತಪುರ ಗುರುಗಳು ಕ್ರಿಯಾಶೀಲರು. ವಿಶೇಷ ಪರಿಶ್ರಮ, ಸಮರ್ಪಣೆ ಭಾವ ಹಾಗೂ ಶಿಸ್ತಿನ ವಿಧಾನಗಳ ಮೂಲಕ ಸರಳ,ವಿರಳ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಶಾಲಾ ಮಕ್ಕಳ ಬಗ್ಗೆ ಸದಾ ಕಾಳಜಿ ವಹಿಸಿ ಸೌಜನ್ಯದಿಂದ ನಡೆದು ವೃತ್ತಿ ಘನತೆ ಪಡೆದಿದ್ದಾರೆ. ಸಮಚಿತ್ತದಿಂದ ಸಾರ್ಥಕ ಸೇವೆ ಸಲ್ಲಿಸಿ ಸುಖ್ಯಾಂತದಿಂದ ನಿವೃತ್ತರಾಗಿ ಜೀವನದ ಸೆಲೆಯಲ್ಲಿ ಸಂತೃಪ್ತಿ ನೆಲೆ ಕಂಡಿದ್ದಾರೆ. ಒಳ್ಳೆಯ ಮನಸ್ಸಿನಿಂದ ಮಾಡುವ ಪ್ರತಿಯೊಂದು ಮಾನವೀಯತೆಯ ಕೆಲಸವು ಫಲ ನೀಡುತ್ತದೆ ಎಂಬುದಕ್ಕೆ ಮಾದರಿಯಾಗಿದ್ದಾರೆ. ಆ ದಿಸೆಯಲ್ಲಿ ಅನಂತಪುರ ಗುರುಗಳು ಸಂವೇದನಾ ಸಾಮರ್ಥ್ಯದಿಂದ ಶಿಕ್ಷಣ ರಂಗದ ಕ್ರೀಡಾ ಸತ್ಕಾರ್ಯಗಳನ್ನು ಗೈದು ಸಾಮಾಜಿಕ, ಸಾಮರಸ್ಯ ಕಂಪುಗೊಳಿಸಿದ್ದಾರೆ ಎಂದರು.
ಈ ವೇಳೆ ಭಗವಂತರಾಯ ಆಲಗೊಂಡ,ಕಾಸಪ್ಪ ಅನಂತಪುರ, ಪಾರ್ವತಿ ಅನಂತಪುರ, ವನಿತಕ ಅಗಸಿಬಾಗಿಲ, ಸರೋಜನಿ ಬಿರಾದಾರ, ಅಕ್ಷಯ ಅನಂತಪುರ, ಅಪೂವಾ೯ ಅನಂತಪುರ, ಸಂಗನಗೌಡ ಬಿರಾದಾರ, ಗಾಯತ್ರಿ ಅನಂತಪುರ, ಖುಷಿ ಅನಂತಪುರ, ಆಧ್ಯಾ ಅನಂತಪುರ ಸೇರಿದಂತೆ ಹಲವರಿದ್ದರು.

