ಇಂಡಿ: ಹೆಚ್ಚಿನ ಸದಸ್ಯರಿದ್ದರೂ ಪುರಸಭೆ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದ್ದು, ೮ ಸದಸ್ಯರ ಬಲ ಹೊಂದಿದ ಕಾಂಗ್ರೇಸ್ ಪಕ್ಷ ಪುರಸಭೆಯ ಗದ್ದುಗೆ ಏರಿದ್ದರಿಂದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
೨೩ ಸದಸ್ಯರ ಬಲ. ಓರ್ವ ಸಂಸದ, ಓರ್ವ ಶಾಸಕರ ಬಲ ಸೇರಿ ಒಟ್ಟು ೨೫ ಸಂಖ್ಯಾಬಲ ಹೊಂದಿದ ಇಂಡಿ ಪುರಸಭೆ ಸೋಮವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೇಸ್ ತೆಕ್ಕೆಗೆ ಸೇರಿಕೊಂಡು, ಬಿಜೆಪಿಗೆ ಭಾರಿ ನಿರಾಸೆ ಅನುಭವಿಸುವಂತಾಗಿದೆ.
ಕಾಂಗ್ರೇಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಸ್ಥಾನಕ್ಕೆ ಜಹಾಂಗೀರ ಸೌದಾಗರ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸಾಯಬಣ್ಣ ವಾಸುದೇವ ಮೂರಮನ್, ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ತಿಪ್ಪಣ್ಣ ಉಟಗಿ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷ-ಉಪಾಧ್ಯಕ್ಷ ಸ್ಪರ್ಧಿಗಳ ಪೈಕಿ ೧೫ ಮತಗಳು ಲಭಿಸಿದರೆ, ಬಿಜೆಪಿ ಪಕ್ಷದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಕೇವಲ ೬ ಮತಗಳು ಲಭಿಸಿದವು. ಹೀಗಾಗಿ ಹೆಚ್ಚಿಗೆ ಮತ ಪಡೆದ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಸ್ಥಾನದ ಜಹಾಂಗೀರ ಸೌದಾಗರ ಅವರ ಗೆಲುವು ೧೫ ಮತಗಳ ಅಂತರದಿಂದ ಆಗಿದೆ ಎಂದು ಚುನಾವಣಾ ಅಧಿಕಾರಿ, ತಹಸೀಲ್ದಾರ ಬಿ.ಎಸ್. ಕಡಕಭಾವಿ ಘೋಷಿಸಿದರು.
ಸಂಭ್ರಮಾಚರಣೆ: ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೇಸ್ ಕಾರ್ಯಕರ್ತರು ಗುಲಾಲು ಎರಚಿ , ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಬಿಜೆಪಿಗೆ ಮುಖಭಂಗ: ೧೧ ಸದಸ್ಯರ ಬಲವಿದ್ದರೂ ಬಿಜೆಪಿ ಪಕ್ಷ ತನ್ನ ಪಕ್ಷದ ಸದಸ್ಯರ ಮತಗಳನ್ನೇ ಪಡೆಯುವಲ್ಲಿ ವಿಫಲವಾಗಿದ್ದು ಸ್ಥಳೀಯ ನಾಯಕರ ಒಗ್ಗಟ್ಟಿನ ಕೊರತೆ ಹಾಗೂ ಸದಸ್ಯರ ಭಿನ್ನಾಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಮಾತನಾಡುವ ಪರಿಸ್ಥಿತಿಗೆ ತಲುಪಿದವು.
ಕೊನೆಗೆ ಬಿಜೆಪಿ ಕಾರ್ಯಕರ್ತರೆ ತಮ್ಮ ಪಕ್ಷದ ಮುಖಂಡರ ನಿಷ್ಕಾಳಜಿಯ ಬಗ್ಗೆ ಮಾತನಾಡಿಕೊಳ್ಳುತ್ತಿರುವುದು ಕಂಡು ಬಂತು. ಬಿಜೆಪಿ ಪಕ್ಷದಲ್ಲಿ ನಾಯಕತ್ವದ ಕೊರತೆಯಿಂದಲೇ ಈ ರೀತಿಯಾಗುತ್ತಿದೆ. ಸ್ಥಳೀಯ ಶಾಸಕ ಯಶವಂತ್ರಾಯಗೌಡ ಪಾಟೀಲರ ಚಾಣಾಕ್ಷ ನಡೆಯಿಂದ ಪ್ರತಿ ಬಾರಿಯೂ ಬಿಜೆಪಿ ಪಕ್ಷಕ್ಕೆ ಮುಖಭಂಗವಾಗುತ್ತಿದೆ. ಬಿಜೆಪಿ ಪಕ್ಷದ ಸದಸ್ಯರು ತಮ್ಮ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದವು.
ಬಿಜೆಪಿ ಸದಸ್ಯರ ಪ್ರಾಥಮಿಕ ಸದಸ್ಯತ್ವ ಉಚ್ಛಾಟನೆ:
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಬಿಜೆಪಿ ಪುರಸಭೆ ಸದಸ್ಯರಾದ ಸೈಪನ್ ಪವಾರ, ಜ್ಯೋತಿ ಪ್ರಕಾಶ ರಾಠೋಡ, ಕವಿತಾ ಜಯಚಂದ್ರ ರಾಠೋಡ ಅವರನ್ನು ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕ ಚುನಾವಣೆಗೆ ಟಿಕೆಟ್ ಕೇಳಲು ಬಿಜೆಪಿ ಪಕ್ಷದಿಂದ ಹತ್ತಾರು ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಾರೆ. ಆದರೆ ಇಂತಹ ಚುನಾವಣೆಯಲ್ಲಿ ತಮಗೆ ಸಂಬಂಧವಿಲ್ಲದಂತೆ ಕೂಡುತ್ತಾರೆ. ಹೀಗಾಗಿ ಇಲ್ಲಿ ಓರ್ವ ಸಮರ್ಥ ನಾಯಕನ ಆಗಮನದವರೆಗೂ ಬಿಜೆಪಿಗೆ ಇಂಡಿ ಕ್ಷೇತ್ರದಲ್ಲಿ ಮನ್ನಣೆ ಸಿಗಲ್ಲ ಎಂಬುದು ಅದೇ ಪಕ್ಷದ ಕಾರ್ಯಕರ್ತರ ಮಾತಾಗಿದೆ.
ಸೋಮವಾರ ನಡೆದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ೧೫ ಮತಗಳನ್ನು ಪಡೆಯುವ ಮೂಲಕ ಬಿಜೆಪಿಗೆ ಹೀನಾಯ ಸೋಲಿನ ಬಿಸಿ ಮುಟ್ಟಿಸಿದ್ದಾರೆ. ನಗರ ನಿವಾಸಿಗಳು ಬಿಜೆಪಿ ಗೆಲುವಿನ ಬಗ್ಗೆ ಅತ್ಯಂತ ವಿಸ್ವಾಸದ ಹಾಗೂ ನಿರೀಕ್ಷೆಯಿಟ್ಟುಕೊಂಡಿದ್ದರು. ಮ್ಯಾಜಿಕ್ ನಂಬರ್ ೧೩ ಇದ್ದರೆ, ಬಿಜೆಪಿಯಲ್ಲಿ ೧೧, ಜೆಡಿಎಸ್ ೨ ಹಾಗೂ ಸತತ ಗೆಲುವಿನ ನಗೆಯಲ್ಲಿರುವ ಚಾಣಾಕ್ಷ ಲೋಕಸಭಾ ಸದಸ್ಯ ಸೇರಿದಂತೆ ೧೪ ಮತಗಳನ್ನು ಪಡೆದು ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಲೋಕಸಭಾ ಸದಸ್ಯರ ಚಾಣಾಕ್ಷ ನೀತಿ, ಬಿಜೆಪಿ ಪಕ್ಷದ ನಾಯಕರ ದಂಡು ಹಾಗೂ ಮೈತ್ರಿ ಪಕ್ಷದ ಶಕ್ತಿ ಮೇಲೆ ಜನರು ವಿಶ್ವಾಸವಿಟ್ಟಿದ್ದರು. ಆದರೆ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಸೆ ತಂದಿದೆ.

