ಇಂಡಿ ಕೊಳವೆ ಬಾವಿ ದುರಂತ | ಯಂತ್ರೋಪಕರಣಗಳ ಮಾಲಿಕರಿಗೆ ಮರೀಚಿಕೆಯಾದ ಬಾಡಿಗೆ ಹಣ
– ಶಂಕರ ಜೆ ಎಮ್
ಇಂಡಿ: ಭೀಮೆಯ ಗಡಿಭಾಗದ, ಪವಾಡ ಪ್ರದೇಶದಲ್ಲಿ ಇತ್ತೀಚಿಗೆ 2 ವರ್ಷದ ಮುಗ್ದ ಮಗು ಕೊಳವೆ ಬಾವಿಯಲ್ಲಿ ಬಿದ್ದಿರುವ ದುರಂತದ ಘಟನೆಯೊಂದು ನಡೆದಿದ್ದು, ಅಕ್ಷರಶಃ ನಿರವ ಮೌನದಲ್ಲಿ ಇಡೀ ರಾಜ್ಯವೇ ಮೊಳಗಿದ್ದು, ಮಗುವಿನ ಪ್ರಾಣ ರಕ್ಷಣೆಗಾಗಿ ಪ್ರಾರ್ಥನೆಯಲ್ಲಿಯೂ ಮೊಳಗಿದ್ದರು. ಆದರೆ ಇಡೀ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸ್ಥಳದಲ್ಲೇ ಬೀಡು ಬಿಟ್ಟು ಮಗುವಿನ ಪ್ರಾಣ ರಕ್ಷಣೆಯಲ್ಲಿ ಹಗಲು ಇರಳು ನಿರಂತರವಾಗಿ 22 ಘಂಟೆ ಕಾಲ ಕಾರ್ಯಾಚಾರಣೆ ನಡೆಸಿದ ಪರಿಣಾಮ ಆ ಮಗು ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿತ್ತು. ಅದಲ್ಲದೇ ಈ ಕಾರ್ಯಕ್ಕೆ ಜಿಲ್ಲಾ ಆಡಳಿತಕ್ಕೆ ಹಾಗೂ ರಾಜ್ಯ ಸರಕಾರಕ್ಕೆ ಜನರಿಂದ ಮೆಚ್ಚುಗೆಯ ಮಹಾಪೂರ ಹಾಗೂ ಎಲ್ಲೆಲ್ಲಿಯೂ ಪ್ರಶಂಸೆ ವ್ಯಕ್ತವಾಯಿತು. ಆದರೆ ಪ್ರಾಣಪಣಕ್ಕಿಟ್ಟು ಮಗುವಿನ ರಕ್ಷಣೆಯಲ್ಲಿ ನಿರಂತರವಾಗಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಮತ್ತು ಬಹು ಮುಖ್ಯ ಪಾತ್ರವಹಿಸಿರುವ ಯಂತ್ರೋಪಕರಣಗಳು ಮಾಲಿಕರು ಇಂದಿಗೂ ಆತಂಕದಲ್ಲಿದ್ದಾರೆ. ಏನು ಕಾರಣ ಗೊತ್ತಾ..? ಅವರ ಕಥೆ ಕಾಗಕ್ಕ ಗುಬ್ಬಕ್ಕನಾ ವ್ಯಥ್ಯೆಯಾಗಿದೆ.
ಹೌದು, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಸ್ವಾತಿಕ ಎಂಬ ಎರಡು ವರ್ಷದ ಪುಟ್ಟ ಮಗು ಆಡುತ್ತಾ ಹೋಗಿ ಆಕಸ್ಮೀಕ ಕೊಳವೆ ಬಾವಿಯಲ್ಲಿ ಬಿದ್ದು ಸಾವು ಬದುಕಿನ ಮದ್ಯ ಹೋರಾಟ ಮಾಡುತ್ತಿರುವ ಘಟನೆ ನಡೆದಿತ್ತು. ಈ ಸುದ್ದಿ ತಿಳಿದ ತಾಲೂಕು ಹಾಗೂ ಜಿಲ್ಲಾ ಆಡಳಿತ ಸ್ಥಳಕ್ಕೆ ದೌಡಾಯಿಸಿ ಅವಶ್ಯಕವಿರುವ ಎಲ್ಲಾ ರೀತಿಯ ಯೋಜನೆಗಳು ರೂಪಿಸಿ ಕಾರ್ಯಾಚರಣೆ ಮಾಡಿ ಮಗುವಿನ ಪ್ರಾಣ ರಕ್ಷಣೆಯಲ್ಲಿ ಯಶಸ್ವಿಯಾದರು. ಆದರೆ ಅದಕ್ಕೆ ಶ್ರಮಪಟ್ಟಿರುವ 220 ಹಿಟ್ಯಾಚಿ 2, ಟ್ರಾಕ್ಟರ್ ಬ್ರೇಕರ್ 4, ಜೆಸಿಬಿ 3, ಟ್ಯಾಕ್ಟರ್ 3, ವಾಟರ್ ಟ್ಯಾಂಕರ್ 1, ಹ್ಯಾಂಡ್ ಡ್ರಿಲ್ಲಿಂಗ್ ಮಶೀನ್ 1, ಕಟಿಂಗ್ ಮಶೀನ್ 1 ಯೊಂದನ್ನು ಒಟ್ಟು 22 ಘಂಟೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಆ ಯಂತ್ರೋಪಕರಣಗಳ ಬಳಕೆ ಒಟ್ಟು ಖರ್ಚು 3 ಲಕ್ಷ 70 ಸಾವಿರ 18 ರೂಪಾಯಿ ಹಣ ಸಂದಾಯ ಮಾಡಬೇಕಾಗಿತ್ತು. ಆದರೆ ಸುಮಾರು 6 ತಿಂಗಳ ಗತಿಸಿದರೂ ಇಲ್ಲಿಯವರೆಗೆ ಆ ಹಣ ದೊರೆಯದೆ ಹಿನ್ನೆಲೆಯಲ್ಲಿ, ಅಧಿಕಾರಿಗಳ ಕಾಗಕ್ಕ ಗುಬ್ಬಕ್ಕನಾ ಕಥೆ ಕೇಳುವುದಾಗಿದೆ. ಒಟ್ಟಾರೆಯಾಗಿ ಆ ಯಂತ್ರೋಪಕರಣಗಳ ಮಾಲಿಕರಿಗೆ ಅತೀ ಶೀಘ್ರದಲ್ಲೇ ಹಣಬಿಡುಗಡೆಗೊಳಿಸಿ ಆತಂಕದಿಂದ ಮುಕ್ತಗೊಳಿಸಬೇಕೆಂಬುದು ಮಾಲಿಕರ ಆಗ್ರಹವಾಗಿದೆ.
“ಕಳೆದ ಐದು ತಿಂಗಳ ಹಿಂದೆ ಲಚ್ಯಾಣ ಗ್ರಾಮದಲ್ಲಿ ಎರಡು ವರ್ಷದ ಮಗು ಕಳವೆ ಭಾವಿಗೆ ಬಿದ್ದಿತ್ತು. ಆ ಮಗುವಿನ ರಕ್ಷಣಾ ಕಾರ್ಯಕ್ಕೆ ನಮ್ಮ ಜೆಸಿಬಿ ವಾಹನ ಸೇರಿದಂತೆ ಹಲವು ಜನರ ವಾಹನಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಕಾರ್ಯಾಚರಣೆಯ ನಂತರ ಹಣ ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಹಣ ನೀಡಿಲ್ಲ.”
– ನಾಗಪ್ಪ ಮೇತ್ರಿ
ಜೆಸಿಬಿ ಮಾಲೀಕರು
“ಏಪ್ರಿಲ್ ತಿಂಗಳಿನಲ್ಲಿ ಲಚ್ಯಾಣದಲ್ಲಿ ಕೊಳವೆ ಭಾವಿಗೆ ಬಿದ್ದ ಮಗುವನ್ನು ರಕ್ಷಣೆ ಮಾಡಲು ೨೨ ಘಂಟೆಗಳ ಕಾಲ ಹಲವು ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಆ ವಾಹನಗಳ ಬಾಡಿಗೆ ನೀಡಲು ಲೋಕೋಪಯೋಗಿ ಇಲಾಖೆಯ ಮೂಲಕ ಅಂದಾಜು ಪತ್ರಿಕೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲು ಮನವಿ ಸಲ್ಲಿಸಿದ್ದೇವೆ. ಅನುದಾನ ಬಿಡುಗಡೆಗೊಳಿಸಿದ ನಂತರ ವಾಹನ ಮಾಲೀಕರಿಗೆ ಹಣ ನೀಡಲಾಗುತ್ತದೆ.”
– ಅಬೀದ್ ಗದ್ಯಾಳ
ಕಂದಾಯ ಉಪವಿಭಾಗಾಧಿಕಾರಿ, ಇಂಡಿ

