ಹುಣಶ್ಯಾಳದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಮನವಿ
ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದಲ್ಲಿ ಎಗ್ಗಿಲ್ಲದೆ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆದು ಕೂಲಿ ಕಾರ್ಮಿಕರ ಸುಗಮ ಸಂಸಾರ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ಗ್ರಾಮಸ್ಥರು ಗ್ರಾಮವ್ಯಾಪ್ತಿಯಲ್ಲಿ ಮಾಡಲಾಗುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೈನುದ್ದೀನ್ ಬಾಗವಾನ ಮಾತನಾಡಿ, ಗ್ರಾಮದ ನಬಿಲಾಲ ಉಸ್ತಾದ, ಬಾಬು ಉಸ್ತಾದ, ಮಕ್ತಮಸಾಬ್ ಪೋಲಾಸಿ, ಹುಸೇನಬಿ ಪೋಲಾಸಿ, ರೋಜಾಬಿ ಪೋಲಾಸಿ, ಮಲ್ಲಪ್ಪ ಬೋರಗಿ, ದಸ್ತಗೀರ್ ಉಸ್ತಾದ, ಮಾಂತಪ್ಪ ತಳವಾರ ಇವರುಗಳು ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಯುವಕರು ಕುಡಿಯುವ ಚಟಕ್ಕೆ ಅಂಟಿಕೊಂಡು ಹಗಲು ರಾತ್ರಿ ಕುಡಿಯುತ್ತಿದ್ದಾರೆ. ಜೊತೆಗೆ ಹಾದಿಯಲ್ಲಿ ಹೋಗುವ ಮಹಿಳೆಯರನ್ನು ಚುಡಾಯಿಸುವುದು, ಅವಾಚ್ಯ ಶಬ್ದಗಳಿಂದ ಹೀಯಾಳಿಸುವ ಮೂಲಕ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆ ಹಾಗೂ ಕಲಕೇರಿ ಪೊಲೀಸ್ ಠಾಣೆಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಸ್ವತಃ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳೇ ಅಕ್ರಮ ಮಾರಾಟಗಾರರಿಗೆ ದೂರವಾಣಿ ಕರೆ ಮಾಡಿ ನಾಳೆ ವಿಚಾರಣೆಗೆ ಬರುತ್ತೇವೆ ಸರಾಯಿ ಎಲ್ಲಾದರೂ ದೂರ ತೆಗೆದಿಡಿ ಎಂದು ಮಾಹಿತಿ ನೀಡುವ ಮೂಲಕ ಮಾರಾಟಗಾರರೊಂದಿಗೆ ಶಾಮೀಲಾಗಿದ್ದಾರೆ. ಈ ಕುರಿತು ತಾವು ಕೂಡಲೇ ಅಗತ್ಯ ಕ್ರಮ ವಹಿಸಬೇಕು. ಇಲ್ಲದಿದ್ದರೇ ಗ್ರಾಮ ಪಂಚಾಯಿತಿ ಮುಂದೆ ಗ್ರಾಮದ ಮಹಿಳೆಯರು ಹಾಗೂ ಯುವಕರು ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಎಚ್ಚರಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಅಬಕಾರಿ ಇಲಾಖೆಯೊಂದಿಗೆ ಸೇರಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಶಾಂತಗೌಡ ಕೋಟಿಖಾನಿ, ಶಫೀಕ್ ಸಿಪಾಯಿ, ಮಹ್ಮದ್ ಬಾಗವಾನ, ಅಶ್ಪಾಕ್ ತಾಳಿಕೋಟಿ, ಇಬ್ರಾಹಿಂ ಹವಾಲ್ದಾರ್, ಸದ್ದಾಂ ಬಿಂಜಲಭಾವಿ, ಶಕೀಲ್ ಪೋಲಾಸಿ, ಸಂತೋಷ ಪಾಕಿ, ಸದ್ದಾಂ ಬಡೇಮ್ಗೋಳ, ಹನೀಫ್ ಬಡೇಮ್ಗೋಳ ಇದ್ದರು.

