ಇಂಡಿ: ಈ ವರ್ಷ ಮುಂಗಾರಿಯಲ್ಲಿ ಆಗಷ್ಟ ೨೦ರ ವರೆಗೆ ತಾಲ್ಲೂಕಿನಲ್ಲಿ ಸರಾಸರಿ ೨೬೦ ಮಿಲಿ ಮೀಟರ್ ಮಳೆ ಬೀಳಬೇಕಿತ್ತು ಇದರ ಬದಲಾಗಿ ತಾಲ್ಲೂಕಿನಲ್ಲಿ ಆಗಷ್ಟ ೨೦ರ ವರೆಗೆ ಸರಾಸರಿ ೪೯೧.೦ ಮಳೆಯಾಗಿದ್ದು, ಸರಾಸರಿಗಿಂತ ಹೆಚ್ಚಿನ ಮಳೆಯಾಗಿದೆ. ತೊಗರಿ ತಾಲ್ಲೂಕಿನಲ್ಲಿ ಪ್ರಮುಖ ಮುಂಗಾರಿ ಬೆಳೆಯಾಗಿದ್ದು, ಇಲ್ಲಿಯವರೆಗೆ ಬೆಳೆ ಚೆನ್ನಾಗಿ ಬೆಳೆದಿದೆ. ಇದೀಗ ಮೊಗ್ಗು, ಹೂವು ಬಿಡುವ ಹಂತದಲ್ಲಿದೆ. ಇನ್ನು ಮೇಲೆ ಸುಮಾರು ೧೫ ರಿಂದ ೨೦ ದಿವಸಗಳ ಕಾಲ ಮಳೆಯಾಗದಿದ್ದರೆ ಮುಂಗಾರಿ ಬೆಳೆಗಳು ಒಳ್ಳೆಯ ಇಳುವರಿ ನೀಡುತ್ತವೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಮುಂಗಾರಿ ಹಂಗಾಮಿನಲ್ಲಿ ವಿವಿಧ ಬೆಳೆಗಳ ಬಿತ್ತನೆಯ ಕರ್ಯ ಪೂರ್ಣಗೊಂಡಿದ್ದು, ಶೇಕಡಾ ೯೯.೧ ರಷ್ಟು ಬಿತ್ತನೆಯಾಗಿದೆ. ಮುಸುಕಿನ ಜೋಳ ೧೫೭೧೬ ಹೆಕ್ಟರ್ ಗುರಿಯ ಬದಲಾಗಿ ೧೯೪೧೦ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸಜ್ಜೆ ೭೦೪೦ ಹೆಕ್ಟರ್ ಬದಲಿಗೆ ೫೧೬೫ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತಾಲ್ಲೂಕಿನಲ್ಲಿ ತೊಗರಿ ಪ್ರಮುಖ ಮುಂಗಾರಿ ಬೆಳೆಯಾಗಿದ್ದು, ೯೧೭೫೦ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇತ್ತು, ಇದರ ಬದಲಿಗೆ ಈ ವರ್ಷ ೯೯೪೦೫ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹೆಸರು ೮೫ ಹೆಕ್ಟರ್ ಪ್ರದೇಶದಲ್ಲಿ, ಶೇಂಗಾ ೪೮೦ ಹೆಕ್ಟರ್ ಪ್ರದೇಶದಲ್ಲಿ, ಸೂರ್ಯಕಾಂತಿ ೧೩೦ ಹೆಕ್ಟರ್ ಪ್ರದೇಶದಲ್ಲಿ, ಹತ್ತಿ ೬೯೭೦ ಹೆಕ್ಟರ್, ಕಬ್ಬು ನಾಟಿ ೧೫೧೮೦ ಹೆಕ್ಟರ್, ಕಬ್ಬು ಕೊಳೆ ೬೭೮೫ ಹೆಕ್ಟರ್ ನಲ್ಲಿ ಇದ್ದು, ಇನ್ನುಳಿದ ನವಣಿ, ಸಾವೆ, ಹುರಳಿ, ಮಡಿಕೆ, ಅಲಸಂದಿ, ಎಳ್ಳು, ಗುರೆಳ್ಳು, ಸೋಯಾ ಅವರೆ, ಗುರೆಳ್ಳು, ಅಗಸೆ ಹೀಗೆ ಒಟ್ಟು ೧೫೫೧೨೯ ಹೆಕ್ಟರ್ ಪ್ರದೇಶದ ಗುರಿ ಹೊಂದಲಾಗಿತ್ತು, ಇದರ ಪೈಕಿ ೧೫೩೭೫೦ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಒಟ್ಟು ಶೇಕಡಾ ೯೯.೧ ರಷ್ಟು ಬಿತ್ತನೆಯಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

