ತಿಕೋಟಾ: ಸುಂದರ ಸಮಾಜ ನಿರ್ಮಾಣ ಮಾಡಲು ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಸಮಾಜಕ್ಕಾಗಿ ಬದುಕಿದವರು ಹಾನಗಲ್ ಕುಮಾರ ಶಿವಯೋಗಿಗಳು ಎಂದು ಯರನಾಳದ ಹಿರೇಮಠ ಸಂಸ್ಥಾನದ ಶಿವಪ್ರಸಾದ ದೇವರು ಹೇಳಿದರು.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಾಲಯದ ಜಾತ್ರಾ ನಿನಿತ್ಯ ಶ್ರಾವಣ ಮಾಸದಲ್ಲಿ ನಡೆದ ಕುಮಾರ ಶಿವಯೋಗಿಗಳ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ಯೋಗಿಯಾದರೇನು ಬೋಗಿಯಾದರೆನು ಮುಗಿದ ಮೇಲೆ ನಾವು ಭೂಮಿಯನ್ನು ತೊರೆಯಲೆಬೇಕು. ಸಾವು ಯಾರನ್ನು ಬಿಟ್ಟಿಲ್ಲ ಶಿವನೆಡೆಗೆ ಕರೆದುಕೊಂಡು ಹೋಗುತ್ತದೆ ಎಂದರು.
ಅದ್ದೂರಿ ಜಾತ್ರೆ: ಶ್ರಾವಣ ಮೊದಲ ಸೋಮವಾರದಿಂದ ಮೂರನೇ ಸೋಮವಾರದವರೆಗೆ ಹಾನಗಲ್ ಕುಮಾರ ಶಿವಯೋಗಿಗಳ ಪುರಾಣವು ಯರನಾಳ ಹಿರೇಮಠ ಸಂಸ್ಥಾನದ ಶ್ರೀ ಶಿವಪ್ರಸಾದ ದೇವರು ಅವರಿಂದ ನಡೆಯಿತು. ಸಂಗಮನಾಥ ದೇವರ ಪಲ್ಲಕ್ಕಿ, ಮಾಳಿಂಗೇಶ್ವರ ದೇವರ ಪಲ್ಲಕ್ಕಿ, ನಂದಿಕೋಲ ಭವ್ಯ ಮೆರವಣಿಗೆ, ಗೊಂಬೆ ಕುಣಿತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನಪ್ರಸಾದ ವಿತರಣೆಯಾಯಿತು. ಮಹಾರಾಷ್ಟ್ರ ಕರ್ನಾಟಕ ಕುಸ್ತಿ ಪಟುಗಳಿಗೆ ಜಂಗಿ ಕುಸ್ತಿ ನಡೆಯಿತು. ರಾತ್ರಿ ಮಾನವಂತರ ಮನೆತನ ನಾಟಕ ಪ್ರದರ್ಶನವಾಯಿತು.
ಸಂಗಮನಾಥ ದೇವಾಲಯದ ಆವರಣದಲ್ಲಿ ನಡೆದ ಪುರಾಣ ಪ್ರವಚನದಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಜನನ, ತೊಟ್ಟಿಲು ಕಾರ್ಯಕ್ರಮ , ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಮಾಜದಲ್ಲಿ ಅಜ್ಞಾನ ಎಂಬ ಕತ್ತಲೆಯಿಂದ ಸುಜ್ಞಾನ ಎಂಬ ಬೆಳಕಿನೆಡಗೆ ಸಾಗಲು ಸಾವಿರಾರು ಭಕ್ತರಿಂದ ಮೇಣದ ಬತ್ತಿಯ ಬೆಳಕು ಬೆಳಗುವ ಮೂಲಕ ಪುರಾಣವನ್ನು ಮಂಗಳಗೊಳಿಸಿದರು.

