ಬಸವನಬಾಗೇವಾಡಿ: 12 ನೇ ಶತಮಾನದ ಬಸವಾದಿ ಶರಣರ ಬದುಕು ನಮಗೆ ಸದಾಕಾಲಕ್ಕೆ ಪ್ರೇರಣೆಯಾಗಿದೆ. ಬಸವಾದಿ ಶರಣರಲ್ಲಿ ಒಬ್ಬರಾಗಿದ್ದ ನೂಲಿಯ ಚಂದಯ್ಯ ಅವರ ಕಾಯಕ ತತ್ವ ಸರ್ವಕಾಲಕ್ಕೂ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ನೂಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೂಲಿಯ ಚಂದಯ್ಯ ಭಾವಚಿತ್ರಕ್ಕೆ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಮಹಾಮಾನವತಾವಾದಿ ಬಸವಣ್ಣವರ ನೇತೃತ್ವದಲ್ಲಿ 12 ನೇ ಶತಮಾನದಲ್ಲಿ ಸಮಾಜ ಪರಿವರ್ತನೆಗೆ ದೊಡ್ಡ ಕ್ರಾಂತಿ ನಡೆಯಿತು. ಬಸವಣ್ಣವರ ಕ್ರಾಂತಿಗೆ ಹಲವಾರು ಶರಣರು ಕೈ ಜೋಡಿಸಿದ್ದರು. ಅದರಲ್ಲಿ ಪ್ರಮುಖವಾಗಿ ನೂಲಿಯ ಚಂದಯ್ಯನವರು ಕೂಡ ಒಬ್ಬರಾಗಿದ್ದರು.ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ ಚಂದಯ್ಯನವರು ಸರ್ವಕಾಲಕ್ಕೂ ನಮಗೆ ಪ್ರೇರಣೆಯಾಗಿ ನಿಲ್ಲುತ್ತಾರೆ. ಶರಣರ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು
ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿ, ಬಸವಣ್ಣನವರು ಬಿದ್ದವರನ್ನು ಮೇಲೆತ್ತಿದ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಮಹಾನ್ ವ್ಯಕ್ತಿತ್ವ ಹೊಂದಿದ್ದರು.ಅವರ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಳಕಳಿಗೆ ಸಮಾಜದಲ್ಲಿ ಕೆಳಸ್ತರದ ಅನೇಕ ಶರಣರು ಬಸವಣ್ಣನವರ ಜೊತೆಗೆ ಒಂದಾಗಿ ವಚನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೇಲು-ಕೀಳು ಎನ್ನದೆ ಬಸವಣ್ಣನವರು ಎಲ್ಲರಿಗೂ ಅವಕಾಶ ಕೊಟ್ಟಿದ್ದರು. ಅಂತಹ ಶರಣರಲ್ಲಿ ನೂಲಿಯ ಚಂದಯ್ಯನವರು ಪ್ರಮುಖ ರಾಗಿದ್ದರು. ಕಾಯಕಕ್ಕೆ ಹೆಚ್ಚಿನ ಒತ್ತು ಕೊಟ್ಟ ನೂಲಿಯ ಚಂದಯ್ಯನವರು ಸಮಾಜದ ಓರೆ ಕೋರೆಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೇ ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ ಎಂದು ಹೇಳಿದರು.
ಯಾವುದೇ ಶರಣರು ಯಾವುದೇ ಜಾತಿಗೆ ಧರ್ಮಕ್ಕೆ ಸೀಮಿತವಾಗಿಲ್ಲ. ಅವರು ಮನುಕುಲದ ಆಸ್ತಿಯಾಗಿದ್ದಾರೆ. ಸಾಧ್ಯವಾದಷ್ಟು ಶರಣರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ, ಕಚೇರಿ ಅಧೀಕ್ಷಕ ಎಂ.ಎಂ. ದಫೇದಾರ, ಸಿಡಿಪಿಓ ಕಚೇರಿಯ ಬೋರಮ್ಮ ಬಿರಾದಾರ, ಖಜಾನೆ ಇಲಾಖೆಯ ಮನೋಜಕುಮಾರ ಪಾಟೀಲ, ಸಮಾಜದ ಮುಖಂಡರುಗಳಾದ ಬಸವರಾಜ ಭಜಂತ್ರಿ ,ಸೀತಾರಾಮ ಭಜಂತ್ರಿ, ಸಿದ್ದರಾಮ ಭಜಂತ್ರಿ ಇತರರು ಭಾಗವಹಿಸಿದ್ದರು. ವಿರೇಶ ಗೂಡ್ಲಮನಿ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಹಳ್ಳೂರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

