ವಿಜಯಪುರ: ಆಗಸ್ಟ್ 12 ರಂದು ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯವನ್ನು ಸರಿಪಡಿಸಲು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಬೃಹತ್ ಹೋರಾಟದ ಭಾಗವಾಗಿ ಸೋಮವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ತಿಕೋಟಾ, ವಿಜಯಪುರ ಗ್ರಾಮೀಣವಲಯ ಹಾಗೂ ನಗರ ಘಟಕಗಳ ವತಿಯಿಂದ ವಿಜಯಪುರ ಗ್ರಾಮೀಣ ವಲಯ ಹಾಗೂ, ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಿಕೋಟಾ ಹಾಗೂ ವಿಜಯಪುರ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ಮಾತನಾಡಿದ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ 2017 ರ ವೃಂದ ಮತ್ತು ನೇಮಕಾತಿ ನಿಯಮಗಳು 2016 ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ, ಮೂಲತ: 1ರಿಂದ 7/8 ಕ್ಕೆ ನೇಮಕ ಹೊಂದಿದವರನ್ನು ಪಿ.ಎಸ್.ಟಿ ಎಂದು ಪದನಾಮ ಮಾಡಿ 1 ರಿಂದ 5 ಕ್ಕೆ ಹಿಂಬಡ್ತಿ ನೀಡಿದ್ದನ್ನು ಹಿಂಪಡೆಯಬೇಕು. 2016 ಕ್ಕಿಂತ ಮುಂಚೆ ನೇಮಕ ಹೊಂದಿದ ಎನ್.ಸಿ.ಟಿ.ಈ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆಯನ್ನು ಹೊಂದಿದ ಎಲ್ಲ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾಜೇಷ್ಠತೆಯೊಂದಿಗೆ ಪುನರ್ ಪದನಾಮೀಕರಣ ಮಾಡಬೇಕು ಎಂದರು.
ಸಂಘದ ಪದಾಧಿಕಾರಿ ಹಣಮಂತ ಕೊಣದಿ ಮಾತನಾಡಿ ಈ ಮೊದಲಿನ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ 2016 ರ ಮುಂಚೆ ನೇಮಕಾತಿ ಹೊಂದಿದ ಹಾಗೂ ಬಿಎಡ್ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಖಾಲಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ತದನಂತರದಲ್ಲಿ ಹೊಸದಾಗಿ ನೇಮಕಗೊಂಡ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು. ಈ ಮುಂಚಿನ ನಿಯಮಾವಳಿಯಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೇ ಅಖಂಡ ಸೇವಾಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು.
ಪುಷ್ಪಾ ಗಚ್ಚಿನಮಠ, ಸಿ.ಟಿ.ಜತ್ತಿ, ಅಶೋಕ ಚನಬಸಗೋಳ, ಎ.ಬಿ.ಧಡಕೆ, ಅಶೋಕ ಭಜಂತ್ರಿ, ಬಿ.ಎಸ್.ಮಠ, ಝಡ್.ಐ.ಇ.ಇಂಡಿಕರ, ವೀರಭದ್ರಪ್ಪ, ಅಶೋಕ ಬೂದಿಹಾಳ, ಎಂ.ಎಸ್.ಟಕ್ಕಳಕಿ, ಸಾಬು ಗಗನಮಾಲಿ, ಪ್ರವೀಣ ಪತ್ತಾರ, ವಿಜಯಕುಮಾರ ದೇಶಯಿ, ಎಸ್.ಎನ್.ಬಾಗಲಕೋಟ, ಶ್ರೀಮಂತ ಡೋಣಿ, ಆರ್.ಎಸ್.ಮಸಳಿ, ಬಸವರಾಜ ಬೇನೂರ, ಬಿ.ಎಸ್.ಕಪಲೆ, ಭಾರತಿ ಉಪಾಸೆ, ಬಸವರಾಜ ಉಪ್ಪಾರ, ಎಸ್.ಬಿ.ಚಲವಾದಿ, ಬಸವರಾಜ ವಡವಡಗಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

