ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ದೇವರ ಐತಿಹಾಸಿಕ ಜಾತ್ರೆ ಹಾಗೂ ಶ್ರಾವಣ ಮಾಸದಂಗವಾಗಿ ಹಮ್ಮಿಕೊಂಡಿರುವ ಪ್ರವಚನದ ಉದ್ಘಾಟನಾ ಸಮಾರಂಭ ಆಗಷ್ಟ್ ೫ ರಂದು ಸಂಜೆ ೬ ಗಂಟೆಗೆ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ನಡೆಯಲಿದೆ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಗುರುಲಿಂಗ(ಮುದುಕು) ಬಸರಕೋಡ ಹೇಳಿದರು.
ಪಟ್ಟಣದ ಬಸವೇಶ್ವರ ದೇವಾಲಯದ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದ ಮುಂಭಾಗ ಪ್ರವಚನಕ್ಕಾಗಿ ಹಾಕಿರುವ ಶಾಮಿಯಾನ, ಸಿದ್ಧತೆ ಶನಿವಾರ ಸಂಜೆ ವೀಕ್ಷಿಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ಕೊಪ್ಪಳ ತಾಲೂಕಿನ ಬಳೂಟಗಿ ಶಿವಕುಮಾರ ಸ್ವಾಮೀಜಿ ಅವರು ಬಸವಾದಿ ಪ್ರಮಥರ ವಚನ-ಚಿಂತನ ಕುರಿತು ಪ್ರವಚನವನ್ನು ಹೇಳಲು ಆಗಮಿಸುತ್ತಿದ್ದಾರೆ. ಪ್ರವಚನವು ಆ.೫ ರಿಂದ ಆರಂಭಗೊಂಡು ಪ್ರತಿನಿತ್ಯ ಸಂಜೆ ೬.೩೦ ಗಂಟೆಯಿಂದ ೮ ಗಂಟೆಯವರೆಗೆ ನಡೆಯಲಿದೆ. ಪ್ರವಚನವು ಸೆ.೨ ರವರೆಗೆ ನಡೆಯಲಿದೆ. ಪ್ರವಚನದ ಸದುಪಯೋಗವನ್ನು ಸದ್ಭಕ್ತರು ಮಾಡಿಕೊಂಡು ಬಸವಾದಿ ಪ್ರಮಥರ ಕೃಪೆಗೆ ಪಾತ್ರರಾಗಬೇಕೆಂದ ಅವರು, ಆ.೫ ರಂದು ನಡೆಯಲಿರುವ ಪ್ರವಚನ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಸ್ಥಳೀಯ ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ನೇತೃತ್ವವನ್ನು ಶಿವಾನಂದ ಈರಕಾರ ವಹಿಸುವರು. ಸಚಿವ ಶಿವಾನಂದ ಪಾಟೀಲ ಪ್ರವಚನ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ವಹಿಸುವರು. ಮುಖ್ಯಅತಿಥಿಗಳಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ, ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಗೊಳಸಂಗಿ, ಟಿಎಪಿಸಿಎಂಎಸ್ ಅಧ್ಯಕ್ಷ ಶೇಖರಗೌಡ ಪಾಟೀಲ, ಸಿಬಿಎಸ್ಇ ಶಾಲೆಯ ಸಮಿತಿ ಅಧ್ಯಕ್ಷ ಭರತ ಅಗರವಾಲ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡರಾದ ಸಂಗಣ್ಣ ಕಲ್ಲೂರ, ಸುರೇಶಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಉಮೇಶ ಹಾರಿವಾಳ, ಸಂಕನಗೌಡ ಪಾಟೀಲ, ರವಿ ರಾಠೋಡ ಇತರರು ಆಗಮಿಸುವರು ಎಂದರು.
ಈ ವರ್ಷ ಶ್ರಾವಣ ಮಾಸದಲ್ಲಿ ಐದು ಸೋಮವಾರ ಬರುವದರಿಂದಾಗಿ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯು ನಾಲ್ಕನೇ ಸೋಮವಾರ ಆಗಷ್ಟ್ ೨೬ ರಂದು ನಡೆಯಲಿದೆ. ಆ.೨೬ ರಿಂದ ೩೦ ರವರೆಗೆ ಐದು ದಿನಗಳವರೆಗೆ ಜಾತ್ರೆಯು ವಿಜೃಂಭಣೆಯಿಂದ ನಡೆಯಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವರ್ಷದ ಜಾತ್ರೆಯಲ್ಲಿ ಎರಡು ದಿನಗಳ ಕಾಲ ಕೃಷಿಮೇಳ ಆಯೋಜನೆ ಮಾಡುವ ಜೊತೆಗೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ, ವಿವಿಧ ಕಸರತ್ತಿನ ಸ್ಪರ್ಧೆಗಳು, ಜನಪದ ಕಲೆ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.
ಬಸವೇಶ್ವರ ದೇವಸ್ಥಾನದ ಅಂತರಾಷ್ಟ್ರೀಯ ಶಾಲಾ ಪಕ್ಕದಲ್ಲಿರುವ ಭರತು ಅಗರವಾಲ ಅವರ ಏಳು ಎಕರೆ ಜಮೀನಿನಲ್ಲಿ ಜಾತ್ರೆಯ ಮಿಠಾಯಿ, ಆಟಿಕೆ ಸಾಮಾನುಗಳ ಮಾರಾಟದ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳನ್ನು, ತೂಗು ತೊಟ್ಟಿಲು, ವಿವಿಧ ಮನೋರಂಜನೆಗಳ ಆಟಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುವುದು. ಈ ಜಾಗೆಗೆ ಜನರು ತೆರಳಲು ಅಗತ್ಯ ರಸ್ತೆ, ಬೀದಿ ದೀಪದ ವ್ಯವಸ್ಥೆ ಮಾಡಲಾಗುವುದು. ಜಾತ್ರೆಯ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಹಿಂದಿನ ವರ್ಷದ ಜಾತ್ರಾಮಹೋತ್ಸವ ಅಧ್ಯಕ್ಷ ಎಂ.ಜಿ.ಆದಿಗೊಂಡ ಮಾತನಾಡಿ, ಹಿಂದಿನ ವರ್ಷದ ಜಾತ್ರೆಯು ಎಲ್ಲರ ಸಹಕಾರದಿಂದ ವಿಜೃಂಭಣೆಯಿಂದ ಜರುಗಿದೆ. ಈ ವರ್ಷದ ಜಾತ್ರೆಗೂ ಕಳೆದ ವರ್ಷದಂತೆ ಎಲ್ಲರೂ ಸಹಕಾರ ನೀಡುವ ಮೂಲಕ ಜಾತ್ರೆಯನ್ನು ಸಡಗರ,ಸಂಭ್ರಮದಿಂದ ಆಚರಿಸಿ ಯಶಸ್ವಿಗೊಳಿಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಾತ್ರಾಮಹೋತ್ಸವ ಸಮಿತಿ ಉಪಾಧ್ಯಕ್ಷರಾದ ಸಂಗಯ್ಯ ಒಡೆಯರ, ಬಸವರಾಜ ಅಳ್ಳಗಿ, ಪ್ರವೀಣ ಪೂಜಾರಿ, ಮುತ್ತು ಪತ್ತಾರ, ಖಜಾಂಚಿ ಎಂ.ಬಿ.ತೋಟದ, ಪ್ರಧಾನ ಕಾರ್ಯದರ್ಶಿ ಬಾಬು ನಿಡಗುಂದಿ, ಮುಖಂಡರಾದ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಭರತು ಅಗರವಾಲ, ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಸಂಗಣ್ಣ ಕಲ್ಲೂರ, ಬಸವರಾಜ ಗೊಳಸಂಗಿ, ಸುರೇಶಗೌಡ ಪಾಟೀಲ, ಉಮೇಶ ಹಾರಿವಾಳ, ರವಿ ರಾಠೋಡ, ಸಂಕನಗೌಡ ಪಾಟೀಲ, ಚಂದ್ರಶೇಖರ ಪಾಟೀಲ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

