ಆಲಮಟ್ಟಿ: ವಲಯ ಮಟ್ಟದ ಕ್ರೀಡಾಕೂಟಕ್ಕೆ ಪ್ರತಿಭಟನೆ ಬಿಸಿ!
ಆಲಮಟ್ಟಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೈಹಿಕ ಶಿಕ್ಷಣ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಸಮೀಪದ ಮಾರಡಗಿ ಎಲ್ ಟಿ ಗ್ರಾಮದಲ್ಲಿ ಜರುಗಿದ ಆಲಮಟ್ಟಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕರ್ತವ್ಯ ನಿರ್ವಹಿಸಿದರು.
ರಾಜ್ಯದಲ್ಲಿ ಸುಮಾರು 25 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಾಗಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಆಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ. ಪಾಟೀಲ, ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಗಲಗಲಿ ಮಾತನಾಡಿ, ಪ್ರತಿಭಟನೆಯ ಅಂಗವಾಗಿ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎನ್ನುವ ಹಿನ್ನಲೆಯಲ್ಲಿ ವಲಯ, ತಾಲ್ಲೂಕು, ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ ಕ್ರೀಡಾಕೂಟದ್ದುದಕ್ಕೂ ಕೈಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡೇ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಲಾಗುವುದು. ನಂತರ ನೇಮಕಾತಿ ಪ್ರಕ್ರಿಯೆಗಳು ಪಡೆಯುವವರೆಗೂ ರಾಜ್ಯದೆಲ್ಲೆಡೆ ಪ್ರತಿಭಟಿಸಲಾಗುವುದು ಎಂದರು.
2023ರ ಜುಲೈ ತಿಂಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಹಾಗೂ ವೃಂದ ನಿಯಮಗಳ ಬದಲಾವಣೆಗಾಗಿ ಬೆಂಗಳೂರಿನ ಫ್ರೀಡಂ ಪಾಕರ್್ನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ನಡೆದಿತ್ತು ಸರ್ಕಾರ ಭರವಸೆ ನೀಡಿದ್ದರೂ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಇನ್ನಾದರೂ ಕೂಡಲೇ ನೇಮಕಾತಿ ಪ್ರಕ್ರಿಯೆಗೆ ಮುಂದಾಗದೆ ಇದ್ದಲ್ಲಿ ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹಶಿಕ್ಷಕರು ಎಂದು ಪರಿಗಣಿಸಿ ಮುಖ್ಯ ಗುರುಗಳ ಹುದ್ದೆಗೆ ಪದೋನ್ನತಿಗೆ ಪರಿಗಣಿಸಬೇಕು, ಅದಕ್ಕಾಗಿ ವೃಂದ ನೇಮಕಾತಿ ತಿದ್ದುಪಡಿಯಾಗಬೇಕು ಎಂಬುದು ಪ್ರಮುಖ ಬೇಡಿಕೆ ಎಂದರು.
ಎನ್.ಬಿ. ದಾಸರ, ಬಿ.ಎಂ. ಬಳಬಟ್ಟಿ, ಜಿ.ಸಿ. ದ್ಯಾವಣ್ಣವರ, ಎಚ್.ಜಿ. ಕುಂಟೋಜಿ, ಪ್ರಕಾಶ ಇಜೇರಿ, ಬಿ.ಬಿ. ಚಿಂಚೋಳಿ, ಡಿ.ಕೆ. ಪಾಟೀಲ, ಮಂಜುನಾಥ ನಿಗರಿ, ಯಲಗೂರೇಶ ಚಿಮ್ಮಲಗಿ, ಅಶೋಕ ತೋಟದ, ಎಸ್.ಕೆ. ಮಾಳಗೊಂಡ, ಎಸ್.ಆರ್. ಬಿರಾದಾರ ಮತ್ತೀತರರಿದ್ದು, ಕೈಗೆ ಕಪ್ಪು ಪಟ್ಟಿ ಧರಿಸಿಯೇ ಕ್ರೀಡಾಕೂಟದಲ್ಲಿ ಭಾಗಿಯಾದರು.
ನಂತರ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎಸ್.ಎಸ್. ಅವಟಿ ಅವರಿಗೆ ಮನವಿ ಸಲ್ಲಿಸಿದರು.

