ಮಾನವ ಕಳ್ಳ ಸಾಗಾಣಿಕೆ ತಡೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ರವೀಂದ್ರಕುಮಾರ ಅಭಿಮತ
ಮುದ್ದೇಬಿಹಾಳ: ಮಾನವ ಕಳ್ಳ ಸಾಗಾಣಿಕೆ ಕಾನೂನು ರೀತ್ಯ ಅಪರಾಧ. ಈ ಅಪರಾಧವನ್ನು ತಡೆಯುವಲ್ಲಿ ಸಾರ್ವಜನಿಕರ ಜವಾಬ್ದಾರಿ ಜಾಸ್ತಿ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕ ಮಕ್ಕಳನ್ನ, ಹೆಣ್ಣು ಮಕ್ಕಳನ್ನ ಕದ್ದು ಮಾರಾಟ ಮಾಡಿ ಬೇರೆ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವ ಪ್ರಕರಣ ಜಾಸ್ತಿಯಾಗಿದ್ದರಿಂದ ಕಾನೂನು ಸೇವಾ ಪ್ರಾಧಿಕಾರದವತಿಯಿಂದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಆಚರಿಸುವ ಮೂಲಕ ಜಾಗೃತಿ ನೀಡಲಾಗುತ್ತಿದೆ. ಮಾನವನಿಗೆ ಜೀವಿಸಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಅದನ್ನ ಯಾರಿಂದಲೂ ಕಸಿದುಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಸಾರ್ವಜನಿಕರು ಇಂತಹ ಪ್ರಕರಣಗಳನ್ನು ಕಂಡಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಬೇಕು ಎಂದರು.
ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಪದ್ಧತಿ ಪುರಾತನ ಕಾಲದಿಂದ ಬಂದದ್ದು. ಹಿಂದಿನ ಜೀತ ಪದ್ಧತಿಯೇ ಇಂದು ಮಾನವ ಕಳ್ಳ ಸಾಗಾಣಿಕೆಯಾಗಿದೆ. ಮಾನವ ಕಳ್ಳ ಸಾಗಾಣಿಕೆಯಲ್ಲಿ ನಮ್ಮ ದೇಶ ಮೂರನೆಯ ನಮ್ಮ ರಾಜ್ಯ ಎರಡನೆಯ ಸ್ಥಾನದಲ್ಲಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಬಡತನ, ನಿರುದ್ಯೋಗ, ಅನಕ್ಷರತೆಯೇ ಇದಕ್ಕೆ ಕಾರಣ. ಸರ್ಕಾರ ಇವುಗಳಿಗೆ ಕಡಿವಾಣ ಹಾಕಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳ ಸರಿಯಾದ ಬಳಕೆಯಾಗದ ಕಾರಣ ಇಂತಹ ಬೆಳವಣಿಗೆಗಳು ನಡೆಯುತ್ತಿವೆ. ಮಾನವ ಕಳ್ಳ ಸಾಗಾಣಿಕೆ ತಡೆ ಕಾರ್ಯದಲ್ಲಿ ಸರ್ಕಾರ, ಇಲಾಖೆಗಳ ಮೇಲೆ ಅವಲಂಬಿತರಾಗದೇ ಸಾರ್ವಜನಿಕರೂ ಮುಂದಾಗಬೇಕು ಎಂದರು.
ಕಿರಿಯ ಶ್ರೇಣಿ ಸರ್ಕಾರಿ ಸಹಾಯಕ ಅಭಿಯೋಜಕ ಬಸವರಾಜ ಆಹೇರಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯಾಗದಂತೆ ತಡೆಯಲು ಶಿಕ್ಷಣವೂ ಮುಖ್ಯ ಪಾತ್ರ ವಹಿಸುತ್ತದೆ. ಸಾರ್ವಜನಿಕರು ತಮ್ಮ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ನ್ಯಾಯವಾದಿ ಎಂ.ಎಂ ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ ಕುರಿತು ವಿಶೇಶ ಉಪನ್ಯಾಸ ನೀಡಿದರು. ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಳಗಿಡದ, ಪಿಎಸ್ಐ ಸಂಜಯ ತಿಪರೆಡ್ಡಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಶಿಕ್ಷಣ ಸಂಯೋಜಕ ಎ.ಬಿ.ಬಗಲಿ, ಶಿರಸ್ತೇದಾರ ಎಂ.ಎ.ಬಾಗೇವಾಡಿ, ಹಿರಿಯ ನ್ಯಾಯವಾದಿ ಜೆ.ಎ.ಚಿನಿವಾರ ನ್ಯಾಯವಾದಿಗಳಾದ ಚೇತನ ಶಿವಶಿಂಪಿ, ಎಚ್.ಟಿ.ಪೂಜಾರಿ ನ್ಯಾಯಾಲಯದ ಸಿಬ್ಬಂದಿಗಳಾದ ಅರವಿಂದ ಕುಂಬಾರ, ಮಹಾಂತೇಶ ಹಚರೆಡ್ಡಿ ಸೇರಿದಂತೆ ಮತ್ತೀತರರು ಇದ್ದರು. ನ್ಯಾ.ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ ಸ್ವಾಗತಿಸಿ, ನಿರ್ವಹಿಸಿದರು. ನ್ಯಾಯವಾದಿ ಶ್ರೀದೇವಿ ರಾಜೂರ ವಂದಿಸಿದರು.

