ವಿಜಯಪುರ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾಹಿತಿ
ವಿಜಯಪುರ: ಮಕ್ಕಳ ಹಿತರಕ್ಷಣೆಗಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಿದಾಗ ಸರ್ಕಾರದ ಆಶಯಗಳು ಸಾಕಾರಗೊಳ್ಳುತ್ತವೆ ಎಂದು ಧಾರವಾಡದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಕ್ಕಳ ಹಿತ ದೃಷ್ಟಿಯಿಂದ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಯುನಿಸೆಫ್ ನೆರವಿನಿಂದ ಬಾಲವಿಕಾಸ ಅಕಾಡೆಮಿಯು ಹದಿಹರೆಯದ ಬಾಲಕರ ಸಶಕ್ತೀಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯದಲ್ಲಿ ವಿನೂತನವಾದ ಹೊಸ ಪರಿಕಲ್ಪನೆ ಇದಾಗಿದೆ. ಮಕ್ಕಳ ಸ್ನೇಹಿಯಾಗಿ ಅವರ ವಿಕಾಸ ಹಾಗೂ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಜಯಪುರ ಜಿಲ್ಲೆಯೂ ಸೇರಿದಂತೆ ಆರು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿದ್ದು, ಸಂಬಂಧಿಸಿದ ಇಲಾಖೆಗಳ ಸಹಯೋಗ ಅತ್ಯಗತ್ಯವಾಗಿದೆ. ಜಿಲ್ಲೆಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಿ ಜಿಲ್ಲೆಯನ್ನು ಮುಂಚೂಣಿಗೆ ತರಲು ಶ್ರಮಿಸೋಣ ಎಂದು ಅಧಿಕಾರಿಗಳಿಗೆ ಹೇಳಿದರು.
ಒಂದು ವಾರಕ್ಕಿಂತಲೂ ಹೆಚ್ಚು ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಶಾಲೆಯ ಮುಖ್ಯೋಪಾಧ್ಯಾಯರು ಕ್ರೋಢಿಕರಿಸಿ ಸಂಬಂಧಿಸಿದವರಿಗೆ ವರದಿ ಸಲ್ಲಿಸಬೇಕು. ಬಾಲ್ಯವಿವಾಹದಂತ ಅನಿಷ್ಠ ಪದ್ದತಿ ತಡೆಗೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪೋಕ್ಸೋ ಪ್ರಕರಣಗಳು ನಡೆಯದಂತೆ ಮುಂಜಾಗೃತೆ ವಹಿಸಬೇಕು ಪೊಕ್ಸೋ ಪ್ರಕರಣದ ಸಂತ್ರಸ್ತರ ಗುರುತು ಸಾರ್ವಜನಿಕಗೊಳಿಸಬಾರದು ಎಂದು ಹೇಳಿದರು.
ಜಿಲ್ಲೆಯ ಬಾಲಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಾಲಮಂದಿರದ ಆವರಣದಲ್ಲಿ ಸಸಿ ನೆಡುವ ಮೂಲಕ ಅಲ್ಲಿನ ಖಾಲಿ ಇರುವ ಜಾಗದ ಸಮರ್ಪಕ ಬಳಕೆ ಮಾಡಬೇಕು. ಬಾಲ ಮಂದಿರಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ೨೦ ಬೆಂಚ್ಗಳನ್ನು ಒದಗಿಸುವ ಮೂಲಕ ಅಲ್ಲಿನ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ವಸತಿ ನಿಲಯಗಳಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಿರುವುದು ಕಂಡು ಬಂದಿದೆ. ಆಹಾರದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಅಡುಗೆ ಕೊಠಡಿಯ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಪ್ರತಿದಿನ ವಿದ್ಯಾರ್ಥಿಗಳಿಗೆ ಒದಗಿಸುವ ಆಹಾರದ ಪಟ್ಟಿಯ ಮಾಹಿತಿ ಫಲಕವನ್ನು ವಸತಿ ನಿಲಯಗಳಲ್ಲಿ ಅಳವಡಿಸುವಂತೆಯೂ, ಜಿಲ್ಲೆಯ ವಸತಿ ನಿಲಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ತೋರಿದ್ದು, ಗಮನಾರ್ಹವಾಗಿದೆ. ಎಲ್ಲ ವಸತಿ ನಿಲಯಗಳಲ್ಲಿ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿರುವ ಅಂಗನವಾಡಿಗಳ ಸ್ಥಿತಿಗತಿಗಳ ಮಾಹಿತಿ ಪಡೆದುಕೊಂಡ ಅವರು, ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಜಾಗ ಕಲ್ಪಿಸುವ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ, ಸ್ವಚ್ಚತೆ ಹಾಗೂ ಮಕ್ಕಳ ಕಲಿಕೆ ಕುರಿತಾಗಿ ಅಧಿಕಾರಿಗಳು ನಿರಂತರ ಭೇಟಿ ನೀಡುವ ಮೂಲಕ ಖಚಿತಪಡಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆ ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ತಡೆ ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆ ನೀಡಲಾಗುತ್ತಿದೆ ಎಂದು ಹೇಳಿದರು. ಮಕ್ಕಳ ದೈಹಿಕ ಚಟುವಟಿಕೆ, ಮನೋವಿಕಾಸಕ್ಕೆ ಪೂರಕವಾಗಿ ಜಿಲ್ಲೆಯ ಹಳೆಯ ಐದು ತಾಲೂಕಿನಲ್ಲಿ ಬಾಲ ಭವನ ನಿರ್ಮಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಸಭೆಯಲ್ಲಿ ವಿಶ್ವ ಸಂಸ್ಥೆಯಿಂದ ಜುಲೈ ೩೦ ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಎಂದು ಘೋಷಿಸಿದ ಹಿನ್ನಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆಯ ಪತ್ರಿಜ್ಞಾ ವಿಧಿ ಬೋಧಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವ್ವಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಹಳ್ಳಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸರಳತೆ ಮೆರೆದ ಸಂಗಮೇಶ
ಖುರ್ಚಿ ಸಿಕ್ಕರೆ ಜಪ್ಪಯ್ಯ ಎಂದರೂ ಬಿಡದ ರಾಜಕೀಯ ನಾಯಕರ ಪ್ರಹಸನಗಳೇ ಎಲ್ಲೆಲ್ಲೂ ವಿಜೃಂಬಿಸುವ ಈ ದಿನಗಳಲ್ಲಿ ತಮ್ಮ ಅಧ್ಯಕ್ಷ ಸ್ಥಾನದ ಆಸನವನ್ನು ರಾಜಕೀಯ ನಾಯಕರೋರ್ವರು ಹಿರಿಯ ಅಧಿಕಾರಿಗೆ ವಹಿಸಿ ಸಜ್ಜನಿಕೆ ತೋರಿದ ಘಟನೆ ಇಲ್ಲಿದೆ.
ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳ ಸಭೆಗೆ ಆಗಮಿಸಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರನ್ನು ಸಭೆಯ ಶಿಷ್ಠಾಚಾರದಂತೆ ವೇದಿಕೆಯ ಮಧ್ಯದ ಅಧ್ಯಕ್ಷ ಸ್ಥಾನದ ಆಸನದ ಮೇಲೆ ಕೂರಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಕೋರಿದಾಗ ಬಬಲೇಶ್ವರ ಅವರು ಆ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿ, ಶಿಷ್ಟಾಚಾರವೆಲ್ಲ ಬೇಡ, ಮಕ್ಕಳ ಹಿತರಕ್ಷಣೆಗೆ ಪೂರಕವಾಗಿ ನಾವೆಲ್ಲ ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು ಚರ್ಚಿಸೋಣ. ಜಿಲ್ಲೆಯ ಆಡಳಿತಾತ್ಮಕ ಮುಖ್ಯಸ್ಥರಾಗಿರುವ ತಾವೇ ಆ ಆಸನದಲ್ಲಿ ಕೂರುವುದು ಸೂಕ್ತ ಎಂದು ಆಸನ ಬಿಟ್ಟುಕೊಟ್ಟ ಸಂಗಮೇಶ ಬಬಲೇಶ್ವರ ಸರಳತೆ ಮೆರೆದದ್ದು ಅಧಿಕಾರಿಗಳ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
ಬಡ ವಿದ್ಯಾರ್ಥಿಯ ಶೈಕ್ಷಣಿಕ ವೆಚ್ಚ ಭರಿಸಿದ ಅಮ್ಮನ ಮಡಿಲು ಟ್ರಸ್ಟ್
ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಮಂಗಳವಾರ ವಿಜಯಪುರದ ಗ್ಯಾಂಗ್ ಬಾವಡಿ ಬಿಸಿಎಂ ಹಾಸ್ಟೆಲ್ ಭೇಟಿಗೆ ಹೋದಾಗ ಅಧಿಕಾರಿಯೋರ್ವರು ಮೋಹನ ಜಾಧವ ಎಂಬ ತಂದೆಯಿಲ್ಲದ ಬಡ ಪ್ರತಿಭಾವಂತ ವಿದ್ಯಾರ್ಥಿಯನ್ನು ಭೇಟಿ ಮಾಡಿಸಿದ್ದರು. ಅವನ ಕುಟುಂಬದ ದುಸ್ಥಿತಿಯನ್ನು ಅರಿತ ಬಬಲೇಶ್ವರ ಅವರು ಕಿಂಚಿತ್ತೂ ಯೋಚಿಸದೆ ಆ ಬಾಲಕನ ಪಿಯಸಿ ಹಾಗೂ ಪದವಿ ಹಂತದ ಶಿಕ್ಷಣದ ಎಲ್ಲ ಖರ್ಚು-ವೆಚ್ಚವನ್ನು ತಮ್ಮ ಅಮ್ಮ ಮಡಿಲು ಟ್ರಸ್ಟ್ ಮೂಲಕ ಭರಿಸುವುದಾಗಿ ಆಶ್ವಾಸನೆ ನೀಡಿ ಮಾನವೀಯತೆ ಮೆರೆದರು.
ಆಗ ಬಡ ವಿದ್ಯಾರ್ಥಿ ಮೋಹನ ಹಾಗೂ ಕೂಲಿ-ನಾಲಿ ಮಾಡುವ ಆತನ ತಾಯಿ ಕಣ್ಣಲ್ಲಿ ಆನಂದ ಭಾಷ್ಪ ಸುರಿಯಿತು. ಈ ವಿಷಯ ಸಭೆಯ ಗಮನಕ್ಕೆ ಅಧಿಕಾರಿಯೋರ್ವರು ತಂದಾಗ ಅಲ್ಲಿದ್ದವರ ಕಣ್ಣಂಚು ಒದ್ದೆಯಾಗಿತ್ತು.

“ಜಿಲ್ಲೆಯ ಎಲ್ಲ ಅಧಿಕಾರಿಗಳು ಇನ್ನು ಮುಂದೆ ತಮ್ಮ ಜನ್ಮದಿನವನ್ನು ಬಾಲಮಂದಿರದ ಮಕ್ಕಳೊಂದಿಗೆ ಆಚರಿಸಿಕೊಳ್ಳಬೇಕು. ಅವರಿಗೆ ಸಿಹಿ ತಿನ್ನಿಸಿ, ಉಡುಗೊರೆ ನೀಡಿ ಆ ಮುದ್ದು ಮಕ್ಕಳ ಮೊಗದಲ್ಲಿ ನಗು ಅರಳಿಸಿ, ಆ ಬೆಳದಿಂಗಳ ನಗೆಯ ಹೊಂಬೆಳಕಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಸಾರ್ಥಕತೆ ಪಡೆದುಕೊಳ್ಳಬೇಕು.”
– ಸಂಗಮೇಶ ಬಬಲೇಶ್ವರ
ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರು

