ಚಡಚಣ: ವ್ಯಕ್ತಿಯ ಜೀವನದ ಪ್ರತಿ ಹಂತದಲ್ಲೂ ಹಾಸ್ಯ ಹಾಸುಹೊಕ್ಕಾಗಿದೆ. ಬೇಸರ ಹಾಗೂ ದುಃಖವನ್ನು ಹೋಗಲಾಡಿಸುವ ಸಾಧನವೆಂದರೆ ಹಾಸ್ಯ. ಹಾಸ್ಯವು ಸಾಹಿತ್ಯದ ಒಂದು ಪ್ರಕಾರವಾಗಿದ್ದು ಕನ್ನಡದ ಅನೇಕ ಸಾಹಿತಿಗಳು ಹಾಸ್ಯದ ಮೂಲಕ ಸಾಹಿತ್ಯದ ಮೆರಗನ್ನು ಹೆಚ್ಚಿಸಿದ್ದಾರೆ. ಬೀಚಿ, ಬೆಟಗೇರಿ ಕೃಷ್ಣಶರ್ಮ, ಎಂ. ಎಸ್. ಸುಂಕಾಪುರ ಮುಂತಾದವರ ಹಾಸ್ಯ ಸಾಹಿತ್ಯ ಕನ್ನಡ ಸಾಹಿತ್ಯದ ಕೊಡುಗೆಯಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಆಧುನಿಕ ಭಾರತೀಯ ಭಾಷಾ ಹಾಗೂ ಸಾಂಸ್ಕೃತಿಕ ಅಧ್ಯಯನ ವಿಭಾಗದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಸುಧಾಕುಮಾರಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಹಾಗೂ ಹಿಂದಿ ವಿಭಾಗಗಳ ಅಡಿಯಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಮತ್ತು ಹಿಂದಿ ಸಾಹಿತ್ಯದಲ್ಲಿ ಹಾಸ್ಯ-ವ್ಯಂಗ್ಯ’ ವಿಷದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ರಾಮಾಯಣ, ಮಹಾಭಾರತ, ಪಂಪ, ರನ್ನರ ಕಾವ್ಯಗಳಲ್ಲಿ ಹಾಸ್ಯದ ಪ್ರಸಂಗಗಳು ಬರುತ್ತವೆಯಾದರೂ ಹಾಸ್ಯ ಪ್ರಕಾರದ ಸುವರ್ಣ ಯುಗ ಆರಂಭವಾದದ್ದು 20ನೆಯ ಶತಮಾನದಲ್ಲಿ ಮುದ್ದಣ್ಣ ಮನೋರಮೆಯರ ಹಾಸ್ಯ ಸಂಭಾಷಣೆ ಬರೆದ ಮುದ್ದಣ್ಣ, ಟಿ. ಪಿ. ಕೈಲಾಸಂ, ಅ. ರಾ. ಮಿತ್ರ, ಕುವೆಂಪು, ಪುತೀನ, ಪರ್ವತವಾಣಿ ಮೊದಲಾದವರು ಹಾಸ್ಯ ಸಾಹಿತ್ಯ ರಚಿಸಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಾಸ್ಯದ ಹೊಲನ್ನೇ ಹರಿಸಿದರು ಎಂದು ಹೇಳಿದರು.
ವಿಚಾರ ಸಂಕೀರ್ಣವನ್ನು ಉದ್ಘಾಟಿಸಿದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬಸವರಾಜ ಯಂಕಂಚಿ ಮಾತನಾಡಿ, ನಿತ್ಯ ಬದುಕಿನಲ್ಲಿ ನಾವು ಅನುಭವಿಸಿದ ಹಾಸ್ಯವೇ ಮುಂದೆ ಹಾಸ್ಯ ಸಾಹಿತ್ಯವಾಗಿ ಬೆಳೆದು ಬಂದಿದೆ. ವ್ಯಂಗ್ಯದ ಮೂಲಕ ವ್ಯಕ್ತಿಯ ಸಮಾಜದ ದೋಷಗಳನ್ನು ತಿದ್ದುವ ಮಹತ್ವದ ಕೆಲಸ ಹಾಸ್ಯ ಸಾಹಿತ್ಯ ಮಾಡುತ್ತದೆ. ಆಯುಷ್ಯವನ್ನು ವೃದ್ಧಿಸುವ ಶಕ್ತಿ ಹಾಸ್ಯಕ್ಕಿದೆ. ಬೀಚಿಯವರ ಹಾಸ್ಯ ಸಾಹಿತ್ಯ ಕನ್ನಡದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಹಾಸ್ಯ ಭಾಷಣಕಾರ ಭಾಗೇಶ ಮುರುಡಿ ಮಾತನಾಡಿ, ಅನುಭವದ ಅಭಿವ್ಯಕ್ತಿಯೇ ಹಾಸ್ಯ. ಕನ್ನಡದಂತೆ ಹಿಂದಿ ಸಾಹಿತ್ಯದಲ್ಲಿಯೂ ಹಾಸ್ಯ ಸಾಹಿತ್ಯ ಪ್ರಮುಖ ಸ್ಥಾನ ಪಡೆದಿದೆ. ಹಾಸ್ಯವು ಮನರಂಜನೆಯ ಜೊತೆಗೆ ವ್ಯಂಗ್ಯಾರ್ಥದ ಮೂಲಕ ಸಾಮಾಜಿಕ ಸಂವೇದನೆ ನೀಡುತ್ತದೆ. ವ್ಯಕ್ತಿಯ ಗುಣ ದೋಷಗಳನ್ನು ವ್ಯಂಗ್ಯದ ಮೂಲಕ ಸರಿಪಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ವಿಚಾರ ಸಂಕೀರ್ಣದ ಮೊದಲನೆಯ ಗೋಷ್ಠಿಯಲ್ಲಿ ವಿಜಯಪುರದ ಅಂಜುಮನ್ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಎಸ್. ಜಿ. ಜಾಗಿರ್ದಾರ ಹಿಂದಿ ಸಾಹಿತ್ಯದಲ್ಲಿ ಹಾಸ್ಯ ಕುರಿತು ಉಪನ್ಯಾಸ ನೀಡಿದರು.
ಈ ಗೋಷ್ಠಿಯ ಅಧ್ಯಕ್ಷತೆಯನ್ನು ಇಂಡಿ ಪಟ್ಟಣದ ಜಿ ಆರ್ ಜಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಬಿ. ಜಾಧವ ವಹಿಸಿದ್ದರು.
ಎರಡನೆಯ ಗೋಷ್ಠಿಯಲ್ಲಿ ಸೊಲ್ಲಾಪುರದ ಹರಿಬಾಯಿ ದೇವಕರಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಧನ್ಯಕುಮಾರ ಬಿರಾಜದಾರ ಹಾಸ್ಯ ಮತ್ತು ವ್ಯಂಗ್ಯ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು.
ಈ ಗೋಷ್ಠಿಯಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ. ದಯಾನಂದ ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು.
ವಿಚಾರ ಸಂಕೀರ್ಣದ ಸರ್ವಾಧ್ಯಕ್ಷ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಬಿ. ರಾಠೋಡ ಮಾತನಾಡಿ, ಪ್ರತಿಯೊಬ್ಬರ ಮನಸ್ಸಿನಲ್ಲಿ ದ್ವೇಷ ಮನೆ ಮಾಡಿದ ಪ್ರಸ್ತುತ ಸಂದರ್ಭದಲ್ಲಿ ಹಾಸ್ಯ ಸಾಹಿತ್ಯದ ಅವಶ್ಯಕತೆ ಇದೆ. ಹಾಸ್ಯದಿಂದ ಎಲ್ಲರ ಜೀವನ ಆನಂದ ದಾಯಕವಾಗಿರಲಿ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಸ್. ಆರ್. ಡೋನಗಾಂವ, ಉಪಾಧ್ಯಕ್ಷ ವಿ. ಜಿ. ಮುತ್ತಿನ, ಗೌರವ ಕಾರ್ಯದರ್ಶಿ ವಿ. ಎಸ್. ಗಿಡವಿರ, ಆಡಳಿತಾಧಿಕಾರಿ ಡಾ. ಎಸ್. ಎಸ್. ಚೋರಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಎ. ಆರ್. ಕುಲಕರ್ಣಿ, ನಾಗಮ್ಮತಾಯಿ ಅಂಕದ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕುಮಾರಿ ಅನನ್ಯ ಕುಲಕರ್ಣಿ ಪ್ರಾರ್ಥಿಸಿದರು, ಕುಮಾರಿ ಗಂಗೂಬಾಯಿ ವಡ್ರೆ ಮಹಾಭಾರತ ಕಾವ್ಯವನ್ನು ವಾಚಿಸಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ. ಎಸ್. ಎಸ್. ದೇಸಾಯಿ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಮ್. ಎ. ಜನವಾಡ ನಿರೂಪಿಸಿದರು ಪ್ರೊ. ಎಸ್. ಎಫ್. ಬಿರಾದಾರ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.
ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

