ಆಲಮಟ್ಟಿ: ಆಲಮಟ್ಟಿ ಜಲಾಶಯದಿಂದ ಜಲಾವೃತಗೊಂಡ ಜಮೀನಿನ ಬೆಳೆ ಸಮೀಕ್ಷೆ ನಡೆಸಲು ತಹಶೀಲ್ದಾರ್ ಗೆ ಸೂಚಿಸಿದ್ದು, ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದರು.
ಆಲಮಟ್ಟಿಯಲ್ಲಿ ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈಗ ಜಲಾವೃತಗೊಂಡ ಜಮೀನಿನಲ್ಲಿ ಈಗಾಗಲೇ ಭೂಸ್ವಾಧೀನ ಜಮೀನು ಹೆಚ್ಚಿದೆ, ಕೆಲ ಪ್ರಮಾಣದಲ್ಲಿ ಖಾಸಗಿ ಜಾಗ ಇದೆ, ಆಲಮಟ್ಟಿ ಜಲಾಶಯದಿಂದ ೫ ಲಕ್ಷ ಕ್ಯುಸೆಕ್ ನೀರು ಬಿಟ್ಟಾಗ ಜಿಲ್ಲೆಯ ಕೃಷ್ಣಾ ತೀರದ ೧೭ ಗ್ರಾಮಗಳ ಜನವಸತಿ ಪ್ರದೇಶಕ್ಕೆ ನೀರು ನುಗ್ಗಲಿದೆ. ಸದ್ಯಕ್ಕೆ ಆಲಮಟ್ಟಿಯಿಂದ ೩ ಲಕ್ಷ ಕ್ಯುಸೆಕ್ ನೀರು ಬಿಟ್ಟ ಕಾರಣ ಅಪಾಯದ ಮುನ್ಸೂಚನೆ ಇಲ್ಲ ಎಂದರು.
ಜನವಸತಿ ಪ್ರದೇಶಕ್ಕೆ ನೀರು ಹೊಕ್ಕರೆ, ಕಾಳಜಿ ಕೇಂದ್ರ ತೆರೆಯಲು ಶಾಲೆ, ಸಮುದಾಯ ಭವನವನ್ನು ಗುರುತಿಸಲಾಗಿದೆ, ಗ್ರಾಮ ಆಡಳಿತಾಧಿಕಾರಿಯ ಮೂಲಕ ಗ್ರಾಮಗಳಲ್ಲಿ ಡಂಗುರ ಸಾರಿಸಲಾಗಿದ್ದು, ನಿರಂತರ ಮುನ್ಸೂಚನೆ ನೀಡಲಾಗುತ್ತದೆ, ಮುನ್ಸೂಚನೆಗೆ ಜನ ಸ್ಪಂದಿಸಬೇಕು ಎಂದರು.
೨೦೧೯ ರಲ್ಲಿ ಪ್ರವಾಹ ಸ್ಥಿತಿ ಉಂಟಾದಾಗ ಮಸೂತಿ ಗ್ರಾಮದ ಸುಮಾರು ೨೦ ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದವು, ಸರ್ಕಾರದ ಯಾವುದಾದರೂ ಯೋಜನೆಯಲ್ಲಿ ಅವರಿಗೆ ಮನೆ ಹಾಕಲು ನಿಡಗುಂದಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದ್ದೇನೆ ಎಂದರು.
೨೦೨೪ ರ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ, ಕಂದಾಯ, ಕೆಬಿಜೆಎನ್ಎಲ್, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿ ಕೆಲಸ ಮಾಡಿದ್ದೇವೆ, ಮೇ ತಿಂಗಳಲ್ಲಿ ಕಾಲುವೆಯ ಕೊನೆ ಹಂತದವರೆಗೂ ನೀರು ಹರಿಸಿ ಆ ಭಾಗದ ಕೆರೆಗಳನ್ನು ಭರ್ತಿ ಮಾಡಿದ್ದೇವೆ ಎಂದರು.
ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದು, ಒಂದು ತಿಂಗಳು ಮುಂಚಿತವಾಗಿಯೇ ಜಲಾಶಯ ಬಹುತೇಕ ಭರ್ತಿಯಾಗಿದೆ, ಜನರು ನೀರನ್ನು ಹಿತಮಿತವಾಗಿ ಬಳಸಬೇಕು ಎಂದರು.
ತಹಶೀಲ್ದಾರ್ ಎ.ಡಿ. ಅಮರಾವಡಗಿ, ಜಿ.ಪಂ.ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸೇರಿದಂತೆ ಕೆಬಿಜೆಎನ್ಎಲ್, ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದ್ದರು.
ಜಲಾಶಯ ಮಟ್ಟ: ಜಲಾಶಯದಲ್ಲಿ ೫೧೬.೧೪ ಮೀ ವರೆಗೆ ನೀರು ಇದೆ. ೧೨೩ ಟಿ.ಎಂ.ಸಿ. ಗರಿಷ್ಠ ಸಂಗ್ರಹದ ಆಲಮಟ್ಟಿ ಜಲಾಶಯದಲ್ಲಿ ೭೪.ಟಿ.ಎಂ.ಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ ೨.೩೮ಲಕ್ಷ ಕ್ಯುಸೆಕ್ ಒಳಹರಿವು ಇದೆ. ೩.ಲಕ್ಷ ಕ್ಯುಸೆಕ್ ಹೊರಹರಿವು ಇದೆ.
೨೫೫ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

