ಬಂಜಾರಾ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪಾಲಕರ ಸಭೆ
ವಿಜಯಪುರ: ಶಿಕ್ಷಣ ಮತ್ತು ಭೌತಿಕ ಸಂಪತ್ತುಗಳನ್ನು ಪಡೆಯುವುದರ ಜತೆಯಲ್ಲಿ ಸಂಸ್ಕಾರ, ಸಂಸ್ಕೃತಿಗಳ ಮೌಲ್ಯಗಳನ್ನು ಅರಿತು ಜೀವನದಲ್ಲಿ ರೂಢಿಸಲು ಪ್ರಯತ್ನಿಸಿದಲ್ಲಿ ಜೀವನ ಪರಮ ಪಾವನವಾಗುತ್ತದೆ ಎಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್ರವರು ಹೇಳಿದರು.
ಶನಿವಾರದಂದು ಬಂಜಾರಾ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ‘ಪಾಲಕರ ಸಭೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಪೋಷಕರು ತಮ್ಮ ಮಕ್ಕಳ ಅಂಕ, ರ್ಯಾಂಕ್, ಸ್ಥಾನಮಾನ, ಬಿರುದು ಸನ್ಮಾನಗಳ ಕಡೆಗೆ ತಮ್ಮ ಶ್ರದ್ಧೆಯನ್ನು ಕೇಂದ್ರೀಕರಿಸಿ ಒತ್ತಡದ ಬದುಕಿಗೆ ಅವರನ್ನು ತಳ್ಳಿ ಬಿಡುತ್ತಾರೆ. ಶಿಕ್ಷಣ ಸ್ಥಾನಮಾನಗಳ ಜತೆಯಲ್ಲೇ ಮೌಲ್ಯಯುತ ಸಂಸ್ಕಾರಗಳನ್ನು ರೂಢಿಸಲು ಕಲಿಸಿದಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವದ ಹೊಳಪು ಕಾಣಬಹುದು ಎಂದು ಹೇಳಿದರು.
ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿಯವರು ಮಾತನಾಡುತ್ತ, ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಾಲೆ ಮತ್ತು ಶಿಕ್ಷಕರಷ್ಟೇ ಪಾತ್ರ ಕುಟುಂಬ ಹಾಗೂ ಪಾಲಕರದ್ದು ಎಂಬುದು ಮರೆಯಬಾರದು. ಮಕ್ಕಳ ಶೈಕ್ಷಣಿಕತೆಗೆ ಸಂಬಂಧಿಸಿದ ಅವರ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು. ತಿಂಗಳಿಗೊಮ್ಮೆ ಪೋಷಕರ ಸಭೆಯನ್ನು ನಡೆಸಲಾಗುತ್ತದೆ. ಶೈಕ್ಷಣಿಕ ವಿಷಯಗಳು ಮತ್ತು ತಮ್ಮ ಮಗುವಿನ ತರಗತಿಯಲ್ಲಿನ ವರ್ತನೆಯನ್ನು ತಿಳಿಯಲು ಪೋಷಕರಿಗೆ ಇದೊಂದು ಸದಾವಕಾಶ ಎಂದು ಹೇಳಿದರು.
ಶಿಕ್ಷಕ ಎಸ್.ವಿ.ದೇಶಪಾಂಡೆಯವರು ಮಾತನಾಡುತ್ತ. ಮೊಬೈಲ್ನಿಂದ ಮಕ್ಕಳಲ್ಲಿರುವ ಮುಗ್ಧ ಭಾವನೆಗಳು ಕೂಡ ಕಡಿಮೆಯಾಗ್ತಿವೆ. ಮೊಬೈಲ್ಗೆ ಅಡಿಕ್ಟ್ ಆಗಿರೋದ್ರಿಂದ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ. ಇದಲ್ಲದೇ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು. ಮಕ್ಕಳು ವಿದ್ಯಾಭ್ಯಾಸದತ್ತ ಹೆಚ್ಚಿನ ವಲವು ತೋರಬೇಕು ಹೇಳಿದರು.
ಗುರುಮಾತೆ ಜೆ.ಕೆ.ರಾಠೋಡರವರು ಮಾತನಾಡುತ್ತ. ಶಾಲೆಯ ಶಿಕ್ಷಕರು ಬೆಳಗಿನ ಜಾವ ಎದ್ದು ಎಸ್ಎಸ್ಎಲ್ಸಿ ಮಕ್ಕಳಿಗೆ ಮೊಬೈಲ್ ಪೋನ್ ಮೂಲಕ ಕರೆ ಮಾಡಿ ಬೆಳಗಿನ ಓದಿಗೆ ಅಣಿಗೊಳಿಸುವ ಕೆಲಸ ನಿರ್ವಹಿಸುತ್ತಾರೆ. ಮನೆಯ ತಂದೆ-ತಾಯಿ ತಮ್ಮ ಮಗ, ಮಗಳು ಓದುತ್ತಿದ್ದಾರೆಂದು ನಿತ್ಯವೂ ಖಾತರಿ ಮಾಡಬೇಕು ಎಂದು ಹೇಳಿದರು.
ಪಾಲಕ ಪ್ರತಿನಿಧಿ ಐಶ್ವರ್ಯ ಬೆಲ್ಲದರವರು ಮಾತನಾಡುತ್ತ. ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ನೈಜ ಗುರು. ಶಿಕ್ಷಕರು ದೇಶ ಕಟ್ಟುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಕರು ತಮ್ಮ ಶಿಷ್ಯರ ಮನಃ ಪಟಲದಲ್ಲಿ ಸದಾ ನಿಲ್ಲುತ್ತಾರೆ. ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದಲೇ ಸಾಧ್ಯವಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಎ.ಎಂ.ನಾಗೊಂಡ, ವಂದನಾರ್ಪಣೆಯನ್ನು ಪಿ.ಎಂ.ಕೌಲಗಿ ಹಾಗೂ ನಿರೂಪಣೆಯನ್ನು ಎಸ್.ಕೆ.ಶಿಂಧೆಯವರು ನೆರವೇರಿಸಿದರು.

