ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ, ದೂ: ೯೭೪೨೮೮೪೧೬೦
ಮನುಷ್ಯನ ಆಲೋಚನೆಗಳು ನೂರಾರು ರೀತಿ ಇರುತ್ತವೆ. ಅವುಗಳನ್ನು ಪ್ರಮುಖವಾಗಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎಂದು ಎರಡು ಭಾಗವಾಗಿ ವಿಂಗಡಿಸಬಹುದು. ಇದರಲ್ಲಿ ನಕಾತಾತ್ಮಕ ಚಿಂತನೆಗಳೆಂದರೆ ಎಲ್ಲರಿಗೂ ಭಯ. ನಕಾರಾತ್ಮಕ ಚಿಂತನೆಗಳು ಎಂದರೆ, ಮನುಷ್ಯನ ಆಲೋಚನೆಗಳು, ಅಭಿಪ್ರಾಯಗಳು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮನಸ್ಸಿನಲ್ಲಿ ಉಂಟಾಗುವ ಗೊಂದಲದ ಸ್ಥಿತಿಯಾಗಿದೆ. ಮನಸ್ಸಿನಲ್ಲಿ ಇರುವ ನಕಾರಾತ್ಮಕತೆಯಿಂದ ಮನುಷ್ಯನ ಒಟ್ಟಾರೆ ಆರೋಗ್ಯವೂ ಹಾಳಾಗುತ್ತದೆ. ಇದೇ ರೀತಿ ವಿವಿಧ ಮನೋಭಾವದ ಜನರು ಎಲ್ಲೆಡೆ ಇರುತ್ತಾರೆ.

ನಾವು ಕೆಲಸ ಮಾಡುವ ಕಂಪನಿ, ಕಾರ್ಖಾನೆ, ಉದ್ಯಮಗಳು ಇತ್ಯಾದಿ ಇರಬಹುದು ಕೆಲವೊಮ್ಮೆ ಅಲ್ಲಿನ ಉದ್ಯೋಗಿಗಳು ವಿವಿಧ ರೀತಿಯ ಮನೋಭಾವ ಹೊಂದಿರುತ್ತಾರೆ. ಒಬ್ಬರು ಸಿಡುಕರಾದರೆ ಇನ್ನೊಬ್ಬರು ಸದಾ ಹಸನ್ಮುಖಿ. ಕೆಲವರು ಉತ್ತಮರಾದರೆ ಒಂದಷ್ಟು ಮಂದಿ ಸದಾ ಇತರರಿಗೆ ಕೆಡುಕು ಬಯಸುವವರು. ಕೆಲವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಇನ್ನು ಕೆಲವರು ಯಾವ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಿದರೂ ಸಂಸ್ಥೆಯ ಮುಖ್ಯಸ್ಥರಿಗೆ ಇಷ್ಟ ಆಗುವುದೇ ಇಲ್ಲ. ನಮ್ಮಲ್ಲೂ ಕಚೇರಿ ವಾತಾವರಣಕ್ಕೆ ಹೊಂದಿಕೊಳ್ಳದ ಇಂತಹ ಹಲವು ಗುಣಗಳು ಇರಬಹುದು. ಉದ್ಯೋಗದ ಸ್ಥಳದಲ್ಲಿ ಒಂದಷ್ಟು ನಕಾರಾತ್ಮಕ ಧೋರಣೆಗಳು ಇರಬಹುದು. ಇವುಗಳಿಂದ ಹೊರಬರಲು ಈ ರೀತಿ ಮಾಡಬಹುದು.
ಆಗುವುದಿಲ್ಲ ಎನ್ನುವ ಧೋರಣೆ: ಕೆಲವು ಉದ್ಯೋಗಿಗಳು ಸದಾ ನಕಾರಾತ್ಮಕವಾಗಿ ಚಿಂತಿಸಿ ಅದೇ ರೀತಿ ಪ್ರತಿಕ್ರಿಯಿಸುತ್ತಾರೆ. ಇದು ಕಂಪನಿಯ ಅಭಿವೃದ್ಧಿಗೆ ತೊಂದರೆ ಆಗುತ್ತದೆ. ಒಂದು ಕಂಪನಿ ಎಂದರೆ ಅಲ್ಲಿ ಟೀಮ್ ವರ್ಕ್ ಇರುತ್ತದೆ. ಎಲ್ಲರಲ್ಲೂ ಹೊಸ ಹೊಸ ಯೋಜನೆಗಳು ಇರುತ್ತವೆ. ಕೆಲವರು ಅತ್ಯತ್ತಮವಾದ ಕೆಲಸದ ಉಪಾಯಗಳನ್ನು ಕೊಡಬಹುದು. ಅವುಗಳಲ್ಲಿ ಕೆಲವೊಂದು ಅಪಾಯಗಳೂ ಇರಬಹುದು. ಇಂತಹ ಅಪಾಯಗಳಿಗೆ ಹೆದರಿ ನಿಮ್ಮ ಉಪಾಯಗಳೆಲ್ಲ ಆಗಲ್ಲ ಎಂದು ಇತರ ಕೆಲಸಗಾರರ ಉತ್ಸಾಹವನ್ನು ಕುಗ್ಗಿಸಬಾರದು. ಸವಾಲು ಸ್ವೀಕರಿಸಿದರೆ ಮಾತ್ರ ಏನನ್ನಾ ದರೂ ಸಾಧಿಸಬಹುದು. ಉದ್ಯೋಗಿಯ ಋಣಾತ್ಮಕ ವರ್ತನೆ ಇಡೀ ತಂಡದ ಮೇಲೆ ಪರಿಣಾಮ ಬೀರುತ್ತದೆ.
ಬೇಕಾಬಿಟ್ಟಿ ರಜೆ ತೆಗೆದುಕೊಳ್ಳಬೇಡಿ: ಉದ್ಯೋಗಿಯು ತನಗೆ ತೀರಾ ಅಗತ್ಯವಿದ್ದಾಗ ಕೆಲಸಕ್ಕೆ ರಜೆ ಹಾಕಲೇಬೇಕು. ಆದರೆ, ಸಣ್ಣಪುಟ್ಟ ವಿಚಾರಗಳಿಗೂ ಆಗಿಂದಾಗ್ಗೆ ರಜೆ ಹಾಕುತ್ತಲೇ ಇರುವುದು ಒಳ್ಳೆಯದಲ್ಲ. ಕೆಲಸವನ್ನು ತಪ್ಪಿಸಿಕೊಳ್ಳುವ ದೃಷ್ಟಿಯಿಂದ ವಿವೇಚನೆ ಇಲ್ಲದೇ ರಜೆ ಹಾಕಬಾರದು. ಒಬ್ಬ ಉದ್ಯೋಗಿ ರಜೆಯನ್ನು ಹಾಕಿದಾಗ ಅದು ಇಡೀ ತಂಡದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಉದ್ಯೋಗಿಯನ್ನು ನೇಮಕ ಮಾಡಿಕೊಂಡಿರುವ ಕಂಪನಿಗೆ ಹೊರೆ ಆಗುವಂತೆ ಯಾವತ್ತೂ ರಜೆ ಹಾಕಬಾರದು.
ಅರ್ಧಂಬರ್ಧ ಕೆಲಸ ಮಾಡಬೇಡಿ: ಕೆಲವರು ಒಮ್ಮೆಲೇ ಹತ್ತು ಹಲವು ಕೆಲಸಗಳಿಗೆ ಕೈಹಾಕುತ್ತಾರೆ. ಆದರೆ ಯಾವುದೇ ಕೆಲಸಗಳನ್ನೂ ಸರಿಯಾಗಿ ಪೂರ್ತಿ ಮಾಡುವುದೇ ಇಲ್ಲ. ಇದರ ಬದಲಿಗೆ ಸಂಸ್ಥೆಯು ನೀಡಿರುವ ಜವಾಬ್ದಾರಿಯನ್ನು ಸರಿಯಾದ ಸಮಯಕ್ಕೆ ಪೂರ್ತಿ ಮಾಡಲು ಪ್ರಯತ್ನಿಸಬೇಕು. ಪ್ರಾಮಾಣಿಕ ಪ್ರಯತ್ನದ ನಡುವೆಯೂ ಕೆಲಸ ಆಗದೆ ಇದ್ದರೆ ಅದು ಉದ್ಯೋಗಿಯ ತಪ್ಪು ಆಗುವುದಿಲ್ಲ. ಪ್ರಯತ್ನಿಸದೆ ಸೋಮಾರಿಯಾಗಿ ಕೆಲಸವನ್ನು ಪೂರ್ಣಗೊಳಿಸದೆ ಇರುವುದು ಮಾತ್ರ ಉದ್ಯೋಗಿಯ ತಪ್ಪಾಗುತ್ತದೆ, ಇದನ್ನು ಮಾಡಬಾರದು.
ಸಿಡುಕುತನ ಬಿಡಬೇಕು: ಕಚೇರಿಯಲ್ಲಿ ತುಂಬಾ ಸಿಡುಕಿನ ಸ್ವಭಾವ ಇರುವ ಉದ್ಯೋಗಿಗಳು ಇದ್ದರೆ ಮೊದಲು ಅದನ್ನು ಬಿಡಬೇಕು. ಜೊತೆಗಾರರನ್ನು ಸದಾ ಕೆಂಗಣ್ಣಿನಿಂದಲೇ ನೋಡಬಾರದು. ಇಂತಹ ಸಿಟ್ಟು, ಮುಂಗೋಪ ಉದ್ಯೋಗಿ ಒಬ್ಬನಿಗೆ ಭೂಷಣವಲ್ಲ. ಇದರಿಂದ ಕೆಲಸಗಾರರ ಕಾರ್ಯಕ್ಷಮತೆ ಮೇಲೆ ವ್ಯತಿರಿಕ್ತ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ. ಉದ್ಯೋಗದ ಸ್ಥಳದಲ್ಲಿ ಹಸನ್ಮುಖಿಯಾಗಿ ಕೆಲಸ ಮಾಡಿಸಿಕೊಂಡು ಹೋಗುವುದು ಒಂದು ಕಲೆಯೇ ಸರಿ.

ಅಸಹಕಾರ ಧೋರಣೆ ಸಲ್ಲದು: ಕೆಲವು ಉದ್ಯೋಗಿಗಳು ಸಂಸ್ಥೆಯಲ್ಲಿ ಯಾವುದೇ ಕೆಲಸಕ್ಕೂ ಸಹಕಾರ ನೀಡದೇ ಅಸಹಕಾರ ಧೋರಣೆಯನ್ನು ತೋರುತ್ತಾರೆ. ಇಂತಹ ವರ್ತನೆಯಿಂದ ಕಂಪನಿಯ ಕೆಲಸ ಕಾರ್ಯಗಳು ಕುಂಠಿತ ಆಗುತ್ತವೆ. ಇದಕ್ಕೆ ಉದ್ಯೋಗಿ ಒಬ್ಬನ ದರ್ಪವೂ ನೇರವಾದ ಕಾರಣ ಆಗಬಹುದು. ತಾನು ಹೇಳಿದ್ದೇ ನಡೆಯಬೇಕು ಎಂಬ ಆ ಉದ್ಯೋಗಿಯ ಅಹಂ ಸಹ ಕಾರಣ ಆಗಿರಬಹುದು. ಉತ್ತಮ ಉದ್ಯೋಗಿ ಆಗಬೇಕಾದರೆ ಇಂತಹ ದರ್ಪ, ಅಸಹಕಾರದ ವರ್ತನೆಯನ್ನು ಬಿಡಬೇಕು.
ದೂರುವ ದುರ್ನಡತೆ ಒಳ್ಳೆಯದಲ್ಲ: ಉದ್ಯೋಗಿಗಳಲ್ಲಿ ಕೆಲವರಿಗೆ ಕೇವಲ ಇನ್ನೊಬ್ಬರನ್ನು ಮತ್ತು ವ್ಯವಸ್ಥೆಯನ್ನು ದೂರುವುದೇ ಅಭ್ಯಾಸ ಆಗಿರುತ್ತದೆ. ಸಹೋದ್ಯೋಗಿಗಳ ಬಗ್ಗೆ ಮತ್ತು ಒಟ್ಟಾರೆ ವ್ಯವಸ್ಥೆಯ ಬಗ್ಗೆ ದೂರುತ್ತಲೇ ಕಛೇರಿಯ ಸಮಯವನ್ನು ಕಳೆಯುತ್ತಾ ಇರುತ್ತಾರೆ. ಉದ್ಯೋಗಿಯು ಯಾವುದೇ ಕೆಲಸವನ್ನು ಮಾಡದೆ ಇತರರನ್ನು ದೂರುತ್ತಲೇ ಕಾಲ ಕಳೆದರೆ ಅದು ಆ ಸಂಸ್ಥೆಗೆ ಉದ್ಯೋಗಿಯು ಮಾಡುವ ವಂಚನೆಯೇ ಆಗುತ್ತದೆ. ಸದಾ ದೂರುತ್ತಾ ಇರುವುದಕ್ಕಿಂತ ಸಮಸ್ಯೆಗಳನ್ನು ಹುಡುಕಿ ಅದಕ್ಕೆ ಸರಿಯಾದ ಪರಿಹಾರ ಕಂಡುಕೊಂಡು ದೂರುವ ಗುಣವನ್ನು ಬಿಡಬೇಕು.
ನಕಾರತ್ಮಕ ವರ್ತನೆಗಳು: ಉದ್ಯೋಗಿಯು ಸಂಸ್ಥೆಯ ಕಾರ್ಯವೈಖರಿಗೆ ಸಮಸ್ಯೆ ಆಗುವಂತಹ ವರ್ತನೆಗಳನ್ನು ತೋರಬಾರದು. ಪ್ರತಿಯೊಂದು ಕೆಲಸವನ್ನೂ ಪರಿಶ್ರಮವಹಿಸಿ ಮಾಡಬೇಕು. ಏನು ಮಾಡಿದರೂ ಮಾಡದಿದ್ದರೂ ತಿಂಗಳ ಕೊನೆಯಲ್ಲಿ ಸಂಬಳ ಮಾತ್ರ ಬಂದೇ ಬರುತ್ತದೆ ಎನ್ನುವ ಉಡಾಫೆ ಮತ್ತು ತಾತ್ಸಾರ ಉದ್ಯೋಗಿಗಳಲ್ಲಿ ಇರಬಾರದು. ಉತ್ತಮವಾಗಿ ಕೆಲಸ ಮಾಡುವ ಉದ್ಯೋಗಿಗಳನ್ನು ಪ್ರೋತ್ಸಾಹಿಸಿ ಉತ್ಸಾಹದಿಂದ ಕೆಲಸ ಮಾಡುವಂತೆ ಉತ್ತೇಜಿಸಬೇಕು.
ಪೂರ್ವ ತಯಾರಿ ಇಲ್ಲದಿರುವಿಕೆ: ಉದ್ಯೋಗಿಯು ತನ್ನ ಕಂಪನಿಯು ನಡೆಸುವ ಸಭೆ, ಮುಖ್ಯ ಚರ್ಚೆಗಳಿಗೆ, ಯಾವುದೇ ಕೆಲಸಕ್ಕೆ ಸರಿಯಾದ ಸಿದ್ಧತೆ ನಡೆಸದೆ ಬರಬಾರದು. ಯಾವುದೆ ಜವಾಬ್ದಾರಿ ನಿರ್ವಹಿಸಲು ಒಂದಿಷ್ಟು ಪೂರ್ವತಯಾರಿ ಮಾಡಿಕೊಂಡೇ ಬರಬೇಕು. ಇದರಿಂದ ಕಂಪನಿಗೆ ಉದ್ಯೋಗಿಯ ಬಗ್ಗೆ ಹೆಚ್ಚಿನ ಭರವಸೆ ಮೂಡುತ್ತದೆ. ಚರ್ಚೆಗಳಲ್ಲಿ ಸರಿಯಾದ ರೀತಿಯಲ್ಲಿ ಮಾತನಾಡಲೂ ಆ ಉದ್ಯೋಗಿಯಿಂದ ಸಾಧ್ಯ ಆಗುತ್ತದೆ.
ಹಲವು ಕಂಪನಿಗಳಲ್ಲಿ ಉದ್ಯೋಗಿಗಳ ಇಂತಹ ಹಲವು ಬಗೆಯ ಮನೋಭಾವವನ್ನು ನಾವು ಗಮನಿಸಬಹುದು. ಉದ್ಯೋಗಿಗಳಾಗಿ ಎಲ್ಲಕ್ಕಿಂತ ಮುಖ್ಯವಾಗಿ ಇತರ ಉದ್ಯೋಗಿಗಳ ವರ್ತನೆಯ ಬಗ್ಗೆ ಗಮನ ನೀಡುವ ಬದಲು ಸ್ವತಃ ನಮ್ಮ ವರ್ತನೆಗಳನ್ನು ಬದಲಾವಣೆ ಮಾಡಿಕೊಳ್ಳುವುದು ಉತ್ತಮ.
– ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ, ದೂ: ೯೭೪೨೮೮೪೧೬೦

