ಬೆಂಗಳೂರಿನಲ್ಲಿ ರಾಜ್ಯ ಭೂ-ಮಾಪನ ಇಲಾಖೆಯ ಆಯುಕ್ತ ಮಂಜುನಾಥ ಗೆ ರೈತ ಸಂಘದಿಂದ ಮನವಿ
ಬಸವನಬಾಗೇವಾಡಿ: ರಾಜ್ಯದಲ್ಲಿರುವ ಎಲ್ಲ ಜಮೀನುಗಳನ್ನು ಮೋಜಣಿ ಮಾಡಿ ಸರಿಯಾದ ಹದ್ದು ಗುರುತಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಭೂ-ಮಾಪನ ಇಲಾಖೆಯ ಆಯುಕ್ತ ಮಂಜುನಾಥ ಜೆ. ಅಖಂಡ ಕರ್ನಾಟಕ ರೈತ ಸಂಘದಿಂದ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮನವಿ ಪತ್ರ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿರುವ ಜಮೀನುಗಳು ಒತ್ತುವರಿಯಾಗಿ ಜಮೀನುಗಳ ಹದ್ದು ಗುರುತು ಸಿಗದಂತಾಗಿದೆ. ಇದರಿಂದಾಗಿ ಎಷ್ಟೋ ರೈತ ಬಾಂಧವರಲ್ಲಿ ಮಧ್ಯ ವೈಮನಸ್ಸು ಉಂಟಾಗಿ ಬಡಿದಾಟ-ಹೊಡೆದಾಟ ನಡೆಯುತ್ತಿವೆ. ಬ್ರಿಟಿಷರ ಆಡಳಿತ ಕಾಲದಲ್ಲಿ ಸರ್ವೆ ಮಾಡಿದ್ದನ್ನು ಬಿಟ್ಟರೆ ಇದುವರೆಗೂ ಮತ್ತೆ ಜಮೀನುಗಳ ಸರ್ವೇ ಕಾರ್ಯ ಮಾಡಿಲ್ಲ. ಪ್ರತಿ ೩೦ ವರ್ಷಕ್ಕೊಮ್ಮೆ ಸರ್ವೆ ಮಾಡಬೇಕೆಂಬ ನಿಯಮವಿದೆ. ಆದರೂ ಸ್ವತಂತ್ರ ಬಂದು ೭೬ ವರ್ಷ ಗತಿಸಿದರೂ ಇದುವರೆಗೂ ಜಮೀನುಗಳ ಸರ್ವೆ ಕಾರ್ಯ ಮಾಡಿಲ್ಲ. ಕೆಲವೆಡೆ ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಗುರುತು ಸಹ ಸಿಗದಂತಾಗಿದೆ. ಇದು ಸಹ ರೈತ ಬಾಂಧವರಲ್ಲಿ ದ್ವೇಷದ ವಾತಾರವಣ ಉಂಟಾಗಿ ಹೊಡೆದಾಟಗಳು ನಡೆದಿವೆ. ದಾರಿ ಸಮಸ್ಯೆ ಹಾಗೂ ಜಮೀನು ಒತ್ತುವರಿ ಸರಿಪಡಿಸಬೇಕೆಂದರೆ ರಾಜ್ಯಾದ್ಯಂತ ಎಲ್ಲ ಜಮೀನುಗಳನ್ನು ಸರ್ವೆ ಮಾಡುವುದು ಅಗತ್ಯವಿದೆ. ರೈತರು ವಾಟ್ನಿ ಮಾಡಿಕೊಂಡ ನಂತರ ಭೂ-ಮಾಪನಾ ಇಲಾಖೆಯ ಅಧಿಕಾರಿಗಳು ಸೀಟ್ ತಯಾರು ಮಾಡುತ್ತಾರೆ. ಇದರ ಹದ್ದು ಗುರುತು ತೋರಿಸುವುದಿಲ್ಲ. ರೈತರು ಹದ್ದು ಬಸ್ತಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಭೂಮಾಪಕರು ಬಂದು ತಯಾರಿಸಿದ ಸೀಟ್ ಅನ್ನು ನೋಡಿ ಈ ಸೀಟ್ ತಪ್ಪು ಇದೆ ಎಂದು ರೈತರಿಗೆ ಹೇಳಿ ಇದನ್ನು ರದ್ದು ಮಾಡಲು ಉಪನಿರ್ದೇಶಕರ ಬಳಿ ಮೇಲ್ಮನವಿ ಸಲ್ಲಿಸಬೇಕೆಂದು ರೈತರಿಗೆ ಹೇಳುತ್ತಾರೆ. ಮೇಲ್ಮನವಿ ಸಲ್ಲಿಸಲು ಕನಿಷ್ಠ ೧೫ ರಿಂದ ೨೦ ಸಾವಿರ ರೂ.ಗಳನ್ನು ವಕೀಲರು ತೆಗೆದುಕೊಳ್ಳುತ್ತಾರೆ. ಸರ್ವೇ ಇಲಾಖೆಯವರು ಮಾಡಿದ ತಪ್ಪಿಗೆ ಸಾವಿರಾರು ರೂ.ಗಳನ್ನು ರೈತರಿಗೆ ಹೊರೆ ಹಾಕುವ ಕೆಲಸ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ. ಈ ಮೊದಲು ನಕ್ಷೆಯನ್ನು ತಯಾರಿಸುವುದಕ್ಕೆ ೨ ಎಕರೆಗೆ ರೂ. ೧೫೦೦ ಗಳನ್ನು, ಪ್ರತಿ ಎಕರೆಗೆ ೪೦೦ ರೂ.ಗಳಂತೆ ಭರಣಾ ಮಾಡಿಸಿಕೊಳ್ಳುತ್ತಿದ್ದರು. ಇದೀಗ ಮೋಜಣಿ ಶುಲ್ಕ ಹೆಚ್ಚು ಮಾಡಲಾಗಿದೆ. ಇದು ರೈತರಿಗೆ ಹೊರೆಯಾಗಿದೆ. ಕೂಡಲೇ ಮೋಜಣಿ ಶುಲ್ಕವನ್ನು ಕಡಿಮೆ ಮಾಡಿ ರೈತರಿಗೆ ಅನುಕೂಲ ಮಾಡಬೇಕು. ರೈತರಿಂದ ಯಾವುದೇ ಕಾರಣಕ್ಕೂ ಮರಳಿ ಶುಲ್ಕ ಸಂದಾಯ ಮಾಡಿಕೊಳ್ಳದೇ ತಮ್ಮ ಇಲಾಖೆಯ ಅಽಕಾರಿಗಳು ಮಾಡಿದ ತಪ್ಪನ್ನು ನಿಮ್ಮ ಇಲಾಖೆಯ ಅಧಿಕಾರಿಗಳೇ ಸರಿಪಡಿಸಿಕೊಳ್ಳಬೇಕು. ರಾಜ್ಯದಲ್ಲಿರುವ ಎಲ್ಲ ಜಮೀನುಗಳನ್ನು ಸರ್ವೆ ಮಾಡಿ ಹದ್ದು, ದಾರಿ ಗುರುತಿಸುವ ಕಾರ್ಯ ಕೂಡಲೇ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸಪ್ಪ ತೋಟದ, ಸಿದ್ದು ಕಣಿಯನ್, ಜಗದೀಶ ಎಚ್.ಎಂ. ಇದ್ದರು.

